ಬೀದರ್/ ಬಸವಕಲ್ಯಾಣ: ಮಾನವೀಯತೆಯ ಮೌಲ್ಯಾಧಾರಿತ ಹರಿಕಾರ ವಿಶ್ವಗುರು ಬಸವಣ್ಣನವರ 893ನೇ ಜಯಂತಿ ನಿಮಿತ್ತ ಬಸವ ಧರ್ಮ ಪೀಠ ಮಹಾಮನೆ ಮಹಾಮಠದ ಆವರಣದಲ್ಲಿ 108 ಅಡಿ ಎತ್ತರದ ಬಸವೇಶ್ವರ ಪುತ್ಥಳಿ ಸನ್ನಿಧಿಯಲ್ಲಿ ಬಸವ ಜಯಂತಿ ಅಂಗವಾಗಿ ತೊಟ್ಟಿಲು ಸಮಾರಂಭ ಶ್ರದ್ಧಾ-ಭಕ್ತಿಯಿಂದ ಜರುಗಿತು.
ಸಮಾರಂಭದಲ್ಲಿ ಗೌರವ ಸ್ವೀಕರಿಸಿ ಮಾತನಾಡಿದ ಕರ್ನಾಟಕ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಅಲೆಮಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷರಾದ ಶ್ರೀಮತಿ ಪಲ್ಲವಿ ಅವರು, “ಸಾಂಸ್ಕೃತಿಕ ನಾಯಕ ವಿಶ್ವಗುರು ಬಸವಣ್ಣನವರು ಸಮಾನತೆಯ ಕ್ರಾಂತಿಯನ್ನು ಮಾಡಿದ ವಿಶ್ವದ ಮೊಟ್ಟಮೊದಲ ಪ್ರವಾದಿ. ವಿಶ್ವದ ಪ್ರಪ್ರಥಮ ಪಾರ್ಲಿಮೆಂಟ್ ಎಂದು ಖ್ಯಾತಿವೆತ್ತ ಅನುಭವ ಮಂಟಪ ಬಸವಕಲ್ಯಾಣದಲ್ಲಿದೆ. ವಿಶ್ವದ ಮೊಟ್ಟಮೊದಲ ಪ್ರಜಾಸತ್ತಾತ್ಮಕ ವ್ಯವಸ್ಥೆ ಸಂಸ್ಥಾಪಿತವಾದ ಈ ಪವಿತ್ರ ಭೂಮಿಯಲ್ಲಿ ಇಂದು ನಾನು ಬಂದು ಬಸವಣ್ಣನವರ ಜಯಂತಿಯಂದು ಗೌರವಾಶೀರ್ವಾದ ಸ್ವೀಕರಿಸುತ್ತಿರುವುದು ನನ್ನ ಸೌಭಾಗ್ಯ” ಎಂದು ಹರ್ಷ ವ್ಯಕ್ತಪಡಿಸಿದರು.
“ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳು ಮತ್ತು ಅಲೆಮಾರಿಗಳ ಅಭಿವೃದ್ಧಿಗಾಗಿ ನಿರಂತರ ಶ್ರಮ ಹಾಕಿ ಕಾರ್ಯನಿರ್ವಹಿಸುತ್ತಿದ್ದೇನೆ. ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಬಸವಾಭಿಮಾನಿ ಮುಖ್ಯಮಂತ್ರಿಯಾಗಿದ್ದು, ಬಸವಣ್ಣನವರ ಸಮ-ಸಮಾಜ ಕಲ್ಯಾಣ ಕಾರ್ಯಗಳನ್ನು ಇಂದಿಗೂ ಮುಂದುವರೆಸಿಕೊಂಡು ಹೋಗುತ್ತಿದ್ದಾರೆ” ಎಂದು ತಿಳಿಸಿದರು.
ಬಸವ ಧರ್ಮ ಪೀಠದಲ್ಲಿ ದಿನನಿತ್ಯ ಜರುಗುತ್ತಿರುವ ದಾಸೋಹ ವ್ಯವಸ್ಥೆಗೆ, ದಾಸೋಹ ಭವನ ನಿರ್ಮಾಣ ಸೇರಿದಂತೆ ಬಸವ ಧರ್ಮ ಪೀಠದ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಲು ರಾಜ್ಯ ಸರ್ಕಾರದಿಂದ ಅನುದಾನ ಬಿಡುಗಡೆ ಮಾಡಿಸುವ ಪ್ರಯತ್ನ ಮಾಡುವುದಾಗಿ ಶ್ರೀಮತಿ ಪಲ್ಲವಿ ಅವರು ಭರವಸೆ ನೀಡಿದರು. ಕೊನೆಯಲ್ಲಿ ಬಸವ ಜಯಂತಿ ತೊಟ್ಟಿಲು ಸಮಾರಂಭದ ಭಾಗಿಯಾದ ಎಲ್ಲರಿಗೂ ಬಸವ ಜಯಂತಿಯ ಶುಭಾಶಯಗಳನ್ನು ಕೋರಿದರು.
ಈ ಸಂದರ್ಭದಲ್ಲಿ ಪರಮ ಪೂಜ್ಯ ಶ್ರೀ ಜಗದ್ಗುರು ಸಿದ್ದರಾಮೇಶ್ವರ ಸ್ವಾಮೀಜಿ, ಪೂಜ್ಯ ಶ್ರೀ ಸದ್ಗುರು ಲಾವಣ್ಯಾದೇವಿ, ಸಾಹಿತಿ ಸಂಗಮೇಶ ಎನ್ ಜವಾದಿ,
ಸಮಾಜ ಕಲ್ಯಾಣ ಇಲಾಖೆ ಜಿಲ್ಲಾ ಉಪ ನಿರ್ದೇಶಕ ಯೋಗೇಶ್, ಬಸವಕಲ್ಯಾಣ ತಹಸೀಲ್ದಾರ್ ಗಾದಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ದಿಲೀಪ ಕುಮಾರ್, ಪೂಜ್ಯ ಶ್ರೀ ಗಿರಿಜಾ ಮಾತಾಜಿ, ಪೂಜ್ಯ ಶ್ರೀ ಸುಜ್ಞಾನಿ ಮಾತಾಜಿ, ಶರಣ ರವೀಂದ್ರ ಕೋಳಕೂರ, ಶರಣೆ ಶ್ರೀಮತಿ ಸುಲೋಚನಾ ಗುದಗೆ, ಶರಣೆ ಶ್ರೀಮತಿ ಜಯಶ್ರೀ ಪಾಟೀಲ್, ಶರಣ ಮಲ್ಲಣ್ಣ, ರಾಜಶೇಖರ ದೇವಣಿ, ಅಕ್ಕನಾಗಲಾಂಬಿಕಾ ಮಹಿಳಾ ಗಣದ ಶರಣೆಯರು, ಬಸವಾತ್ಮಜೆ ಮಹಿಳಾ ಸಹಕಾರ ಸಂಘದ ಶರಣೆಯರು ಹಾಗೂ ಅಪಾರ ಸಂಖ್ಯೆಯ ಬಸವಾಭಿಮಾನಿ ಭಕ್ತರು ಪಾಲ್ಗೊಂಡಿದ್ದರು.
ವರದಿ: ಸಂಗಮೇಶ ಎನ್ ಜವಾದಿ




















