
ಬೆಳಗಾವಿ: ಅಥಣಿ ಪಟ್ಟಣದ ಸಿದ್ಧಾರ್ಥ ನಗರದಲ್ಲಿ ಭಗವಾನ್ ಗೌತಮ ಬುದ್ಧರ ಬುದ್ಧ ಪೂರ್ಣಿಮೆಯನ್ನು ಭಕ್ತಿಭಾವ, ಶ್ರದ್ಧೆ ಮತ್ತು ಸಡಗರದೊಂದಿಗೆ ಅದ್ಧೂರಿಯಾಗಿ ಆಚರಿಸಲಾಯಿತು.
ಬೆಳಿಗ್ಗೆಯಿಂದಲೇ ಕಾರ್ಯಕ್ರಮ ಸ್ಥಳದಲ್ಲಿ ಧಾರ್ಮಿಕ ವಾತಾವರಣ ನಿರ್ಮಾಣಗೊಂಡಿದ್ದು, ಬುದ್ಧರ ಭಾವಚಿತ್ರವನ್ನು ಹೂವುಗಳು, ಹಣ್ಣುಗಳು ಮತ್ತು ದೀಪಾಲಂಕಾರಗಳಿಂದ ಸುಂದರವಾಗಿ ಅಲಂಕರಿಸಲಾಗಿತ್ತು.
ಈ ಮಹತ್ವದ ಕಾರ್ಯಕ್ರಮದಲ್ಲಿ ಮಾಜಿ ಉಪಮುಖ್ಯಮಂತ್ರಿಗಳು ಹಾಗೂ ಅಥಣಿ ಶಾಸಕ ಲಕ್ಷ್ಮಣ್ ಸವದಿ ಅವರು ಭಾಗವಹಿಸಿ, ಗೌತಮ ಬುದ್ಧರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಪುಷ್ಪ ನಮನ ಅರ್ಪಿಸಿದರು. ಬಳಿಕ ಮಾತನಾಡಿದ ಅವರು, ಬುದ್ಧ ಪೂರ್ಣಿಮೆಯ ಹಾರ್ದಿಕ ಶುಭಾಶಯಗಳನ್ನು ನಾಡಿನ ಸಮಸ್ತ ಜನತೆಗೆ ತಿಳಿಸಿ, ಬುದ್ಧರ ತತ್ವಗಳು ಇಂದಿನ ಸಮಾಜದಲ್ಲಿ ಅತ್ಯಂತ ಪ್ರಸ್ತುತವಾಗಿವೆ ಎಂದು ಅಭಿಪ್ರಾಯಪಟ್ಟರು.
“ಅಹಿಂಸೆ, ಕರುಣೆ ಮತ್ತು ಶಾಂತಿ ಎಂಬ ಬುದ್ಧನ ಸಂದೇಶಗಳು ಮಾನವಕುಲಕ್ಕೆ ದಾರಿ ತೋರಿಸುವ ದೀಪಸ್ತಂಭಗಳಾಗಿವೆ. ಇಂದಿನ ಅಶಾಂತಿಯ ಕಾಲಘಟ್ಟದಲ್ಲಿ ಈ ಮೌಲ್ಯಗಳನ್ನು ಅಳವಡಿಸಿಕೊಂಡರೆ ಮಾತ್ರ ದ್ವೇಷವಿಲ್ಲದ, ಸೌಹಾರ್ದಯುತ ಸಮಾಜವನ್ನು ನಿರ್ಮಿಸಲು ಸಾಧ್ಯ,” ಎಂದು ಅವರು ಹೇಳಿದರು. ಜೊತೆಗೆ, ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಬುದ್ಧರ ಆದರ್ಶಗಳನ್ನು ಅನುಸರಿಸುವ ಮೂಲಕ ಸಮಾಜದಲ್ಲಿ ಒಗ್ಗಟ್ಟು ಮತ್ತು ಸಮಾನತೆಯನ್ನು ಬೆಳೆಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಎಲ್ಲರೂ ಭಗವಾನ್ ಬುದ್ಧನಿಗೆ ಪುಷ್ಪ ನಮನ ಸಲ್ಲಿಸಿ, ಶಾಂತಿ ಮತ್ತು ಸಮೃದ್ಧಿಗಾಗಿ ಪ್ರಾರ್ಥನೆ ಸಲ್ಲಿಸಿದರು. ಸಿದ್ಧಾರ್ಥ್ ನಗರದ ನಿವಾಸಿಗಳು ಭಕ್ತಿ ಭಾವದಿಂದ ಕಾರ್ಯಕ್ರಮದಲ್ಲಿ ತೊಡಗಿ, ಬುದ್ಧ ಪೂರ್ಣಿಮೆಯ ಮಹತ್ವವನ್ನು ಮನನ ಮಾಡಿದರು.
ಈ ಸಂದರ್ಭದಲ್ಲಿ ಅಥಣಿಯ ಪುರಸಭೆ ಸದಸ್ಯರಾದ ಕಲ್ಲೇಶ್ ಮಡ್ಡಿ, ಸಮಾಜ ಮುಖಂಡರಾದ ಶಶಿಕಾಂತ್ ಸಾಳವೆ, ಶಂಕರ್ ಹಿರೇಮನಿ, ಕಪಿಲ್ ಗಟ್ಕಾಂಬಳೆ, ಬಸಪ್ಪ ಜೀರಗ್ಯಾಳ, ಸುರೇಶ್ ಬೆಳ್ಳಂಕಿ, ಸಂಜು ಪಾರ್ಕ್ನಳ್ಳಿ, ಅಧಿಕಾರಿಗಳಾದ ಪರಶುರಾಮ್ ಪತ್ತಾರ್ ಸೇರಿದಂತೆ ಅನೇಕ ಗಣ್ಯರು ಹಾಗೂ ಸಿದ್ಧಾರ್ಥ್ ನಗರದ ನಿವಾಸಿಗಳು ಉಪಸ್ಥಿತರಿದ್ದು, ಕಾರ್ಯಕ್ರಮದ ಯಶಸ್ಸಿಗೆ ಸಾಕ್ಷಿಯಾದರು.
ವರದಿ ವಿಠ್ಠಲ ಖೋಕಾಟೆ




















