ಶ್ರೀರಾಮನಗರ : ಸ್ಥಳೀಯ ಚಿಲುಕೂರಿ ನಾಗೇಶ್ವರರಾವ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಮತ್ತು ರೆಡ್ ಕ್ರಾಸ್ ಘಟಕದ ವತಿಯಿಂದ ಮೇ 8 ರಂದು ವಿಶ್ವ ರೆಡ್ ಕ್ರಾಸ್ ದಿನವನ್ನು ಅತ್ಯಂತ ಅರ್ಥಪೂರ್ಣವಾಗಿ ಆಚರಿಸಲಾಯಿತು.
ಸಂಸ್ಥೆಯ ಸ್ಥಾಪಕ ಸರ್ ಜೀನ್ ಹೆನ್ರಿ ಡ್ಯುನೆಂಟ್ ಅವರ ಜನ್ಮದಿನದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಈ ಕಾರ್ಯಕ್ರಮದಲ್ಲಿ ಇತಿಹಾಸ ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಶಂಕ್ರಪ್ಪ ಎಂ. ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ರೆಡ್ ಕ್ರಾಸ್ ಸಂಸ್ಥೆಯು ಜಗತ್ತಿನಾದ್ಯಂತ ಜಾತಿ-ಮತದ ಭೇದವಿಲ್ಲದೆ ಸಲ್ಲಿಸುತ್ತಿರುವ ಮಾನವೀಯ ಸೇವೆಯನ್ನು ಶ್ಲಾಘಿಸಿದರು. ಮತ್ತೋರ್ವ ಪ್ರಾಧ್ಯಾಪಕ ವೀರೇಶ್ ಅವರು ರಕ್ತದಾನದ ಮಹತ್ವ ಮತ್ತು ತುರ್ತು ಪರಿಸ್ಥಿತಿಯಲ್ಲಿ ಸೇವೆಯ ಅಗತ್ಯತೆಯ ಬಗ್ಗೆ ಸುದೀರ್ಘವಾಗಿ ವಿವರಿಸಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲರಾದ
ಪ್ರೊ.ಕರಿಗೂಳಿ ಅವರು ಹಳೆಗನ್ನಡ ಕಾವ್ಯದ ನಿದರ್ಶನಗಳ ಮೂಲಕ ಹಾಗೂ ರನ್ನನ ಗದಾಯುದ್ಧದ ಪ್ರಸಂಗದ ಮೂಲಕ ಯುದ್ಧಭೂಮಿಯ ಭೀಕರತೆ ವಿವರಿಸಿ, ಆಧುನಿಕ ಕಾಲದ ಯುದ್ಧಗಳಲ್ಲಿ ಆಗುವ ಅಪಾಯಗಳಿಂದ ನೊಂದವರಿಗೆ ಬೇಕಾಗುವ ವೈದ್ಯಕೀಯ ಸೇವೆಯ ಅನಿವಾರ್ಯತೆಯನ್ನು ಮನಮುಟ್ಟುವಂತೆ ತಿಳಿಸಿದರು, ಈ ವರ್ಷದ ಘೋಷವಾಕ್ಯವಾದ “Keeping Humanity Alive” (ಮಾನವೀಯತೆಯನ್ನು ಜೀವಂತವಾಗಿರಿಸುವುದು) ಎಂಬ ಆಶಯದಂತೆ ಪ್ರತಿಯೊಬ್ಬರೂ ತ್ಯಾಗ ಮತ್ತು ಸೇವಾ ಮನೋಭಾವ ಬೆಳೆಸಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಐಕ್ಯೂಎಸಿ ಸಂಚಾಲಕ ರವಿಕುಮಾರ, ಕನ್ನಡ ಪ್ರಾಧ್ಯಾಪಕ ವೀರೇಶ್, ಡಾ. ಶಶಿಕುಮಾರ, ಕಚೇರಿ ಸಿಬ್ಬಂದಿ ಜಬೀನ ಹಾಗೂ ಉಪನ್ಯಾಸಕರಾದ ವೆಂಕಟರಾಜು, ಈಶಪ್ಪ, ಅಯ್ಯಪ್ಪ, ಬಾಲಚಂದ್ರ, ಸಾಯಿಕುಮಾರ, ಪೆನಾಜ ಸೇರಿದಂತೆ ಕಾಲೇಜಿನ ಸಹಾಯಕ ಸಿಬ್ಬಂದಿ ವರ್ಗ ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
- ಕರುನಾಡ ಕಂದ ಪತ್ರಿಕೆ




















