ಅಲೆಮಾರಿ ಸಮಾಜದ ಅಭಿವೃದ್ಧಿಗೆ ನಿತ್ಯ ಶ್ರಮಿಸುವೆ : ವೈ.ಶಿವಕುಮಾರ
ಬಳ್ಳಾರಿ / ಕಂಪ್ಲಿ : ಪಟ್ಟಣದ 22ನೇ ವಾರ್ಡಿನಲ್ಲಿರುವ ಅಲೆಮಾರಿ ಕಾಲೋನಿಗೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಮಾಜಿಕ ನ್ಯಾಯ ಸಮಿತಿ ವಿಭಾಗದ ರಾಜ್ಯ ಉಪಾಧ್ಯಕ್ಷ ವೈ.ಶಿವಕುಮಾರ ಶನಿವಾರ ಭೇಟಿ ನೀಡಿ, ಕುಂದು ಕೊರತೆ ಜೊತೆಗೆ ಅಲ್ಲಿನ ಸ್ಥಿತಿಗತಿ ಆಲಿಸಿದರು.
ನಂತರ ವೈ.ಶಿವುಕುಮಾರ ಮಾತನಾಡಿ, ರಾಜ್ಯ ಸರ್ಕಾರ ಜನಪರ ಅಭಿವೃದ್ಧಿ ಕೆಲಸ ಮಾಡುತ್ತಿದೆ. ಕಾಂಗ್ರೆಸ್ ಪಕ್ಷವೂ ನಮ್ಮನ್ನು ಗುರುತಿಸಿ ನ್ಯಾಯ ಸಮಿತಿ ವಿಭಾಗದ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡಿದೆ. ಆ ಸ್ಥಾನಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಅಲೆಮಾರಿ ಸಮುದಾಯಕ್ಕೆ ಸರ್ಕಾರದ ಪ್ರತಿಯೊಂದು ಯೋಜನೆಗಳೊಂದಿಗೆ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲಾಗುವುದು. ಈಗಾಗಲೇ ಅಲೆಮಾರಿ ಸಮಾಜದ ನಿರ್ಗತಿಕರಿಗೆ 20 ಸಾವಿರ ತಾಡಪಾಲುಗಳನ್ನು ವಿತರಿಸಲಾಗಿದೆ. ಜಿಲ್ಲೆಯಲ್ಲಿ 11 ಸಾವಿರ ಕುಟುಂಬಗಳಿಗೆ ತಾಡಪಾಲು ವಿತರಿಸಿದೆ. ಸಮುದಾಯವೂ ಶಾಶ್ವತ ನೆಲೆ ಕಂಡುಕೊಳ್ಳಬೇಕೆಂಬ ನಿಟ್ಟಿನಲ್ಲಿ ಸೌಲಭ್ಯಗಳನ್ನು ಒದಗಿಸಲು ನಿರಂತರವಾಗಿ ಶ್ರಮಿಸಲಾಗುತ್ತಿದೆ. ಕಂಪ್ಲಿ ತಾಲೂಕಿನಲ್ಲಿ 3 ಸಾವಿರ ಸೇರಿದಂತೆ ಕ್ಷೇತ್ರದಲ್ಲಿ 20 ಸಾವಿರ ಜನಸಂಖ್ಯೆ ಇದ್ದು, ಜಿಲ್ಲೆಯಲ್ಲಿ 25 ಸಾವಿರ ಕುಟುಂಬಗಳಿದ್ದು, ಒಟ್ಟಾರೆ ರಾಜ್ಯದಲ್ಲಿರುವ ಸುಮಾರು 75 ಸಾವಿರ ಕುಟುಂಬಗಳಿಗೆ ಶಾಶ್ವತವಾಗಿ ನಿವೇಶನ, ಮನೆ, ಜಮೀನು ಮತ್ತು ಪ್ರತಿ ತಾಲೂಕು ಮಟ್ಟದಲ್ಲಿ ಅಲೆಮಾರಿ ಸಮುದಾಯ ಭವನ, ಜಿಲ್ಲೆಯಲ್ಲಿ ಒಂದು ಪ್ರತ್ಯೇಕ ವಸತಿ ಶಾಲೆ, ಹೀಗೆ ಅಲೆಮಾರಿಗಳ ಬಹು ಬೇಡಿಕೆಗಳನ್ನು ಆಲಿಸಿದ್ದು, ಸರ್ಕಾರ ಮಟ್ಟದಲ್ಲಿ ಸಂಬಂಧಿಸಿದ ಸಿಎಂ, ಸಚಿವರ ಗಮನಕ್ಕೆ ತಂದು ಶಾಶ್ವತ ಸೌಲಭ್ಯಗಳನ್ನು ಕಲ್ಪಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಸಮಾಜದ ಅಭಿವೃದ್ಧಿಗೆ ಸದಾ ಶ್ರಮಿಸಲಾಗುವುದು ಎಂದರು.
ಕರ್ನಾಟಕ ರಾಜ್ಯ ಅಲೆಮಾರಿ ಅರೆಅಲೆಮಾರಿ ವಿಮುಕ್ತ ಬುಡಕಟ್ಟುಗಳ ಒಕ್ಕೂಟದ ರಾಜ್ಯ ಸಂಘಟನಾ ಕಾರ್ಯದರ್ಶಿ ಎಚ್.ಪಿ.ಶಿಕಾರಿ ರಾಮು ಮಾತನಾಡಿ, ಅಲೆಮಾರಿ ಸಮಾಜದಲ್ಲಿ ಹುಟ್ಟಿ ಬೆಳೆದ ವ್ಯಕ್ತಿ ಶಿವುಕುಮಾರ. ಅಲೆಮಾರಿ ಕುಟುಂಬಗಳ ಕಷ್ಟದ ಜೀವನದ ಸ್ಥಿತಿಗತಿಯನ್ನು ಅರಿತುಕೊಂಡು ನ್ಯಾಯ ಒದಗಿಸಿಕೊಡುವ ನಿಟ್ಟಿನಲ್ಲಿ ಶ್ರಮಿಸುತ್ತಿದ್ದಾರೆ. ಶಿವುಕುಮಾರ ಅವರಿಗೆ ಕಾಂಗ್ರೆಸ್ ರಾಜ್ಯ ಉಪಾಧ್ಯಕ್ಷ ಸ್ಥಾನ ನೀಡುವ ಮೂಲಕ ಅಲೆಮಾರಿಗಳಿಗೆ ದೊಡ್ಡ ಸ್ಥಾನ ನೀಡಿರುವುದು ಸ್ವಾಗತಾರ್ಹವಾಗಿದೆ. ಅಲೆಮಾರಿ ನಿಗಮಕ್ಕೆ ಸುಮಾರು 500 ಕೋಟಿ ಅನುದಾನ ಮೀಸಲಿಡಬೇಕು. ಇನ್ನೂ ಅಲೆಮಾರಿಗಳಿಗೆ ಶಾಶ್ವತ ಸೌಲಭ್ಯಗಳನ್ನು ಕೊಟ್ಟಿಲ್ಲ. ಆದ್ಧರಿಂದ ನಿವೇಶನ, ಮನೆ, ಜಮೀನು ನೀಡಿದಾಗ ಮಾತ್ರ ಅರ್ಥಿಕವಾಗಿ ಅಭಿವೃದ್ಧಿಯೊಂದಿಗೆ ಶಾಶ್ವತ ಯೋಜನೆ ಕೊಟ್ಟಂತಾಗುತ್ತದೆ. ಮಕ್ಕಳಿಗಾಗಿ ಬಳ್ಳಾರಿ ಜಿಲ್ಲೆಯಲ್ಲಿ ಒಂದು ಪ್ರತ್ಯೇಕ ವಸತಿ ಶಾಲೆ ಸ್ಥಾಪಿಸಬೇಕು. ಪ್ರತಿ ತಾಲೂಕು ಮಟ್ಟದಲ್ಲಿ ಅಲೆಮಾರಿ ಸಮುದಾಯ ಭವನ ನಿರ್ಮಿಸಬೇಕು ಎಂದರು.
ಈ ಸಂದರ್ಭದಲ್ಲಿ ಮ್ಯಾದಾರ ಸಮಾಜದ ಅಧ್ಯಕ್ಷ ಎಂ.ಗಾಳಿಕುಮಾರ, ತಾಲೂಕು ಸುಡಗಾಡು ಸಿದ್ದರ ಸಮಾಜದ ಅಧ್ಯಕ್ಷ ಸಣ್ಣ ಹುಲುಗಪ್ಪ, ಹಕ್ಕಿಪಿಕ್ಕಿ ಅಭಿವೃದ್ಧಿ ಸಂಘದ ಜಿಲ್ಲಾ ಉಪಾಧ್ಯಕ್ಷ ಟಿ.ಬಾಬು, ಕರ್ನಾಟಕ ರಾಜ್ಯ ಸಿಂಧೋಳ್ ಸಮಾಜದ ಗೌರವಾಧ್ಯಕ್ಷ ರಾಹುಲ್ ನಾಗಪ್ಪ, ಮುಖಂಡರಾದ ಮಾರೆಪ್ಪ, ಯಲ್ಲಮ್ಮ, ದುರುಗಮ್ಮ, ನಾಗಮ್ಮ, ಕಾವೇರಿ ಸೇರಿದಂತೆ ಅಲೆಮಾರಿ ಸಮಾಜದವರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್



















