
ಬೆಂಗಳೂರು : ದಿ.8-5-2026 ರಂದು ಲೆಕ್ಕಾಧಿಕಾರಿಗಳ ಸಂಘದಲ್ಲಿ ಹಿರಿಯ ಸಂಸ್ಕೃತ ವಿದ್ವಾಂಸ, ಡಾ. ವ್ಯಾಸನಕೆರೆ ಪ್ರಭಂಜನಾಚಾರ್ಯ ಅವರು, ತಮ್ಮ ಪಾಂಡಿತ್ಯಪೂರ್ಣ ಉಪನ್ಯಾಸದಲ್ಲಿ, ಆಹಾರ- ವಿಹಾರ -ವಿಚಾರ ಕುರಿತು, ಪ್ರಕೃತಿ -ವಿಕೃತಿ- ಸಂಸ್ಕೃತಿ ಅಂದರೇನು? ಎಂಬುದನ್ನು ವಿಸ್ತರಿಸಿ, ಆಧ್ಯಾತ್ಮ ಜ್ಞಾನವನ್ನು ಸೊಗಸಾಗಿ ವರ್ಣಿಸುತ್ತ ಮಹಾಭಾರತದ ಯಕ್ಷಪ್ರಶ್ನೆ ಭಾಗದ ಮಹತ್ವವನ್ನು ತಿಳಿಸಿಕೊಟ್ಟರು. ಅವರು ಮಾತನಾಡುತ್ತಾ, ರಾಮಾಯಣ -ಮಹಾಭಾರತ ಸರ್ವಶ್ರೇಷ್ಠ ಗ್ರಂಥಗಳು ಹಾಗೂ ಅವುಗಳಲ್ಲಿ ಎಲ್ಲವೂ ಅಡಕವಾಗಿವೆ, ಅವು ಜಾತ್ಯತೀತ ಗ್ರಂಥಗಳು ಎಂದು ಮನಮುಟ್ಟುವಂತೆ ಸೊಗಸಾದ ಪ್ರವಚನ ನೀಡಿದರು.
ಪರಿಷ್ಕೃತ ನಿನ್ನ ಪ್ರೀತಿಯ ರಾಮಕೃಷ್ಣ ಪುಸ್ತಕದ ಎರಡನೆಯ ಮುದ್ರಣವನ್ನು ಬಿಡುಗಡೆಗೊಳಿಸುತ್ತಾ, ಸಾಹಿತಿ, ಸಾಂಸ್ಕೃತಿಕ ಚಿಂತಕ ಮಹಾಬಲಮೂರ್ತಿ ಕೊಡ್ಲೆಕೆರೆ ಅವರು ನೀರ್ನಳ್ಳಿ ರಾಮಕೃಷ್ಣ ಅವರು ಶಿರಸಿಯ ಪ್ರಕೃತಿ ಸೌಂದರ್ಯದ ಸೊಬಗಿನಡಿ ಬಾಲ್ಯ ಕಳೆದಿದ್ದು, ಸಾಂಸ್ಕೃತಿಕ ಚಟುವಟಿಕೆಗಳಿಂದ ಪ್ರೇರಣೆ ಪಡೆದು, ಪುಟ್ಟಣ್ಣ ಕಣಗಾಲ್ ಅವರಂತಹ ನಿರ್ದೇಶಕರ ಅಡಿ ತಮ್ಮ ಕಲಾ ಪ್ರದರ್ಶನವನ್ನು ನೀಡಿ ಸೈ ಅನಿಸಿಕೊಂಡವರು. ಅವರೊಬ್ಬರು ಅಪರೂಪದ ಕಲಾವಿದ ಎಂದು ಬಣ್ಣಿಸಿದರು.
ಪುಸ್ತಕ ನಿರೂಪಣೆ ಮಾಡಿದ ಸಾಹಿತಿ ಅಂಕಣಕಾರ ವಾಸುದೇವ ಶಾನಭಾಗ ಅವರು, ರಾಮಕೃಷ್ಣ ಅವರೊಡನೆ ಒಡನಾಡಿದ ಹಲವಾರು ರೋಚಕ ಸಂಗತಿಗಳನ್ನು ಪ್ರಸ್ತಾಪಿಸಿ ಅದನ್ನು ದಾಖಲಿಸಿ ಪುಸ್ತಕ ರಚಿಸಿರುವುದಕ್ಕೆ ಸಂತೋಷವಾಗಿದೆ ಎಂದು ನುಡಿದರು. ಜನುಮ ನೀಡಿದ….. ಹಾಡನ್ನು ಹಾಡಿ ಸಭಿಕರ ಆಸೆ ಪೂರೈಸಿದರು.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿ, ಬಹುಭಾಷಾ ತಜ್ಞ, ಸಂಘಟಕ ಶಾ ಮಂ ಕೃಷ್ಣರಾಯ ಅವರು ಮಾತನಾಡಿ ಸಾಹಿತ್ಯ ಸೇವೆ ಮಾಡುತ್ತಿರುವ ಸಾಹಿತಿಗಳನ್ನು ಕಲಾವಿದರನ್ನು ಬೆಂಗಳೂರಿಗೆ ಕರೆಸಿ ಪರಿಚಯಿಸುತ್ತಿರುವುದು ಶ್ಲಾಘನೀಯ ಕಾರ್ಯಕ್ರಮ ಎಂದು ಕೊಂಡಾಡಿದರು.
ಕಾರ್ಯಕ್ರಮದ ಆರಂಭದಲ್ಲಿ ವಿದುಷಿ ಸೌಮ್ಯ ಪ್ರದೀಪ ಹೆಗಡೆ ಹಾಗೂ ಕುಮಾರಿ ಮನಸ್ವಿ ಭಂಡಾರಿ ಅವರು ಪ್ರಸ್ತುತಪಡಿಸಿದ ಭರತನಾಟ್ಯ ಕಾರ್ಯಕ್ರಮ ಸಭಿಕರಿಗೆ ಮುದ ನೀಡಿತು. ಕಲಾವಿದರನ್ನು ಆತ್ಮೀಯವಾಗಿ ಗೌರವಿಸಲಾಯಿತು
ಪುಸ್ತಕ ಪ್ರೇಮಿ, ಸಮಾಜಸೇವಕ ಪಿ ಎಸ್ ಕುಲಕರ್ಣಿ ಅವರು ಗಣ್ಯರಿಗೆ ಉಪನ್ಯಾಸಕರ ಮೂಲಕ ಅನೇಕ ಪುಸ್ತಕಗಳನ್ನು ಉಚಿತವಾಗಿ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಎಲ್ ಎನ್ ಹೆಗಡೆ, ಗೀತಾ ಹೆಗಡೆ, ರಾಜೇಶ್ವರಿ ಅಜ್ಜಿಬಳ, ಮುಖ್ಯ ಇಂಜಿನಿಯರ್ ಎಸ್ ಶಂಕರ್ , ರಾಘವೇಂದ್ರ ರಾವ್, ವಾಸುದೇವ ಕಾರಂತ್, ಬಿ ವಿ ರಾವ್ ದಂಪತಿಗಳು, ಸಂಘದ ಸದಸ್ಯರುಗಳಾದ ಕೆಂಪೇಗೌಡ, ಎಚ್ ಕೆ ಮಧುಸೂದನ, ಎಸ್ ಜೆ ಕೃಷ್ಣಮೂರ್ತಿ, ನಿತ್ಯಾನಂದಪ್ಪ, ಗಿರೀಶ್, ಶ್ರೀವಾಣಿ, ವತ್ಸಲಾ ಆರ್, ಕವಿಗಳಾದ ಸಿದ್ದಣ್ಣ ಸೊನ್ನದ , ಕೊಪ್ಪರಂ ಅನ್ನಪೂರ್ಣ ಅಣಕಟ್ಟು ಮಧುಸೂಧನ್ ರಾವ್ ಮುಂತಾದ ಗಣ್ಯರು ಉಪಸ್ಥಿತರಿದ್ದರು.
ವರದಿ: ಕೊಡಕ್ಕಲ್ ಶಿವಪ್ರಸಾದ್ ಶಿವಮೊಗ್ಗ



















