ಬಳ್ಳಾರಿ / ಕಂಪ್ಲಿ: ಪಟ್ಟಣದ 3ನೇ ವಾರ್ಡಿನ ಸಂತೆ ಮಾರುಕಟ್ಟೆ ಬಳಿಯ ಹಿಂಭಾಗದಲ್ಲಿರುವ ಸಮುದಾಯ ಭವನದಲ್ಲಿ ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆ, ಕರ್ನಾಟಕ ಕಟ್ಟಡ ಕಾರ್ಮಿಕ ಜಿಲ್ಲಾ ಸಂಘಟನೆ, ಕಂಪ್ಲಿ ತಾಲೂಕು ಪೇಂರ್ಸ್ ಕಾರ್ಮಿಕರ ಸಂಘಟನೆಯ ಸಹಯೋಗದಲ್ಲಿ ಕಾರ್ಮಿಕರ ದಿನಾಚರಣೆ ಸಂಭ್ರಮದಿಂದ ಭಾನುವಾರ ಆಚರಿಸಲಾಯಿತು.
ಸಂಘದ ಗೌರವಾಧ್ಯಕ್ಷ ಮಾನಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಇಂದಿನ ತಂತ್ರಜ್ಞಾನದ ಯುಗದಲ್ಲಿ ಕಾರ್ಮಿಕರ ಬದುಕು ಕಷ್ಟಕರವಾಗಿದೆ, ಇದರ ನಡುವೆ ಕಾರ್ಮಿಕರು ಕಾಯಕವೇ ಕೈಲಾಸ ಎಂಬಂತೆ ಶ್ರಮಿಕರಾಗಿ ದುಡಿಯುತ್ತಿದ್ದಾರೆ, ಇವರ ಬದುಕು ಹಸನಾಗಬೇಕೆಂದರೆ ಸರಕಾರದ ಯೋಜನೆಗಳು ಪ್ರಮುಖ್ಯವಾಗಿವೆ ಎಂದರು.
ನಂತರ ಕರ್ನಾಟಕ ಶ್ರಮಿಕ ಶಕ್ತಿ ಸಂಘಟನೆಯ ರಾಜ್ಯ ಕಾರ್ಯದರ್ಶಿ ಅರವಿಂದ್ ಸತೀಶ್ ಮಾತನಾಡಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ಕಾರ್ಮಿಕ ವಿರೋಧಿ ನೀತಿ ಅನುಸರಿಸುತ್ತಿವೆ. ಬಂಡವಾಳಶಾಹಿ ಪರ ಹೆಚ್ಚಿನ ನಿಲುವು ತೋರುತ್ತಿರುವುದು ವಿಪರ್ಯಾಸವಾಗಿದೆ. ಕೇಂದ್ರ ಸರ್ಕಾರ ಕನಿಷ್ಠ ವೇತನ, ಕೈಗಾರಿಕೆ ಸಂಹಿತೆ, ಸಾಮಾಜಿಕ ಭದ್ರತಾ ಕೋಡ್, ಕೆಲಸಗಾರರ ಸುರಕ್ಷತೆ, ಆರೋಗ್ಯ ಮತ್ತು ಕೆಲಸ ಪರಿಷ್ಕರಣೆ ಎಂಬ ಹೊಸ ನಾಲ್ಕು ಕಾರ್ಮಿಕ ಕಾಯ್ದೆಗಳನ್ನು ಜಾರಿಗೆ ತಂದು ಕಾರ್ಮಿಕರ ಬದುಕಿನ ಮೇಲೆ ಬರೆ ಎಳೆದಿದೆ. ಕೂಡಲೇ ಈ ನಾಲ್ಕು ಹೊಸ ಕಾರ್ಮಿಕ ವಿರೋಧಿ ಕಾಯ್ದೆಗಳನ್ನು ಹಿಂಪಡೆದು, ಹಳೇ ಕಾರ್ಮಿಕ ಕಾಯ್ದೆಗಳನ್ನು ಮುಂದುವರೆಸಬೇಕು. ಒಂದು ದಿನಕ್ಕೆ ಒಂದು ಸಾವಿರ ವೇತನ ಕಾರ್ಮಿಕ ನೀಡಬೇಕು. 8 ತಾಸು ಕೆಲಸಕ್ಕೆ ಅನುವು ಮಾಡಿಕೊಡಬೇಕು. ಶ್ರಮಿಕರ ಬದುಕಿಗೆ ಶಾಶ್ವತ ಯೋಜನೆಗಳನ್ನು ರೂಪಿಸಬೇಕು ಎಂದರು.
ಈ ಸಂದರ್ಭದಲ್ಲಿ ರಾಜ್ಯ ಕಾರ್ಯದರ್ಶಿ ಚನ್ನಮ್ಮ, ಕಟ್ಟಡ ಕಾರ್ಮಿಕ ಸಂಘಟನೆಯ ಗೌರವ ಅಧ್ಯಕ್ಷ ಕರಿಯಪ್ಪ ಗುಡಿಮನಿ, ಪೇಂಟರ್ಸ್ ಸಂಘಟನೆಯ ತಾಲೂಕು ಅಧ್ಯಕ್ಷ ಮಾರುತಿ, ಕಟ್ಟಡ ಕಾರ್ಮಿಕರ ಸಂಘಟನೆಯ ಜಿಲ್ಲಾಧ್ಯಕ್ಷ ಪೇಂಟರ್ ನೀಲಪ್ಪ, ಉಪಾಧ್ಯಕ್ಷ ಬಸವರಾಜ್, ಮುಖಂಡರಾದ ಈ.ಧನಂಜಯ್, ಬೆಟ್ಟಪ್ಪ, ಪರಶುರಾಮ, ಮೆಹಬೂಬ್ ಭಾಷಾ, ಗೌರಿ ಪ್ರಿಯಾ ಸೇರಿದಂತೆ ಕಾರ್ಮಿಕರು ಇದ್ದರು.
ವರದಿ : ಜಿಲಾನಸಾಬ್ ಬಡಿಗೇರ್


















