ಭ್ರಷ್ಟಾಚಾರ ಮುಕ್ತ ಹಾಗೂ ದಕ್ಷ ಆಡಳಿತ ನೀಡಲು ಯೋಗ್ಯರಾದ ಜನಪ್ರತಿನಿಧಿಗಳ ಆಯ್ಕೆ ಮಾಡುವುದು ಇಂದಿನ ದಿನಮಾನಗಳಲ್ಲಿ ಅತ್ಯಗತ್ಯವಾಗಿರುತ್ತದೆ. ಈ ನಿಟ್ಟಿನಲ್ಲಿ ಯೋಗ್ಯರಿಗೆ ಅವಕಾಶ ಕೊಡಿ’ ಎಂಬುದು ಸಮಾಜದಲ್ಲಿ ಅರ್ಹತೆ, ಪ್ರತಿಭೆ ಮತ್ತು ಪ್ರಾಮಾಣಿಕತೆಗೆ ಮನ್ನಣೆ ಸಿಗಬೇಕು ಎಂಬ ಆಶಯವಾಗಿದೆ. ಇದು ರಾಜಕೀಯಕ್ಕೆ ಹೆಚ್ಚು ಅನ್ವಯಿಸುತ್ತದೆ. ಜಾತಿ, ಧಣಿತನ ಅಥವಾ ಪ್ರಭಾವಕ್ಕಿಂತ ಹೆಚ್ಚಾಗಿ, ವ್ಯಕ್ತಿಯ ಕೌಶಲ್ಯ ಮತ್ತು ಜ್ಞಾನಕ್ಕೆ ಆದ್ಯತೆ ನೀಡುವುದು ಉತ್ತಮ ಬೆಳವಣಿಗೆ. ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತಕ್ಕೆ ಕಡಿವಾಣ ಹಾಕಿ, ಅರ್ಹ ಅಭ್ಯರ್ಥಿಗಳಿಗೆ ವೇದಿಕೆ ಕಲ್ಪಿಸುವುದು ಸೂಕ್ತ. ಸರಿಯಾದ ಜವಾಬ್ದಾರಿಯುತ ಸ್ಥಾನಗಳಿಗೆ ಸರಿಯಾದ ವ್ಯಕ್ತಿಗಳು ಆಯ್ಕೆಯಾದಾಗ ದೇಶ, ರಾಜ್ಯ ಮತ್ತು ಸಮಾಜದ ಪ್ರಗತಿ ಸಾಧ್ಯ.
ಈದಿಗ ರಾಜ್ಯದ ನೂತನ ಸಚಿವ ಸಂಪುಟ ರಚನೆ ವೇಳೆ ಅರ್ಹರು, ಯುವಕರು ಮತ್ತು ಸಮಾಜದ ವಿವಿಧ ವರ್ಗಗಳಿಗೆ ಸಮಾನ ಪ್ರಾತಿನಿಧ್ಯ ನೀಡುವಂತೆ ಸಾರ್ವಜನಿಕರು ಮತ್ತು ರಾಜಕೀಯ ವಲಯದಲ್ಲಿ ಬಲವಾದ ಆಗ್ರಹವಿದೆ. ಸ್ವಜನಪಕ್ಷಪಾತ ಅಥವಾ ಕೇವಲ ಪ್ರಭಾವಕ್ಕೆ ಮಣೆ ಹಾಕದೆ, ಪ್ರಾಮಾಣಿಕತೆ, ಅನುಭವ ಮತ್ತು ಸಾಮರ್ಥ್ಯವಿರುವ ಶಾಸಕರಿಗೆ ಸಚಿವ ಸ್ಥಾನ ನೀಡಬೇಕೆಂಬುದು ಪ್ರಮುಖ ಬೇಡಿಕೆಯಾಗಿದೆ. ಆದರೆ ಇದಕ್ಕೆ ತದ್ವಿರುದ್ಧವಾಗಿ
ಮಾನ್ಯ ಡಿ.ಕೆ.ಶಿವಕುಮಾರ್ ರವರ ಸಚಿವ ಸಂಪುಟ ರಚನೆ ಹಿನ್ನೆಲೆಯಲ್ಲಿ ಸುದ್ದಿ ವಾಹಿನಿಗಳಲ್ಲಿ ಕೇಳಿ ಬರುತ್ತಿರುವ ಮಾತುಗಳು ಜನರಿಗೆ ಕೇಳಿ ಕೇಳಿ ಸಾಕಾಗಿದೆ.
ಸುದ್ದಿ ವಾಹಿನಿಗಳು ಏನು ಹೇಳುತ್ತಿವೆ ಎಂದರೆ:
ಒಕ್ಕಲಿಗ ಕೋಟಾ, ಲಿಂಗಾಯತ ಕೋಟಾ, ಮುಸ್ಲಿಂ ಕೋಟಾ, ದಲಿತ ಕೋಟಾ, ಓಬಿಸಿ ಕೋಟಾ – ದಿನವೂ ಇದೇ ಲೆಕ್ಕಾಚಾರ. ಇದೆ ಮಾಹಿತಿ…
ಆದರೆ ಜನ ಕೇಳಲು ಬಯಸುವ ಮಾತು ಹೇಳುತ್ತಿಲ್ಲ, ಇದು ಈ ನಾಡಿನ ಬಹು ದೊಡ್ಡ ದುರಂತವೇ ಎನ್ನಬಹುದು.
ಯಾಕಂದರೆ ಪ್ರಾಮಾಣಿಕ ಮತ್ತು ನಿಷ್ಠೆಯಿಂದ ಕೆಲಸ ಮಾಡುವಂತ ವ್ಯಕ್ತಿಗಳ ಬಗ್ಗೆ ಕನಿಷ್ಠ ಮಟ್ಟಿಗಾದರೂ ಮಾಧ್ಯಮಗಳು ಹೇಳುತ್ತಿಲ್ಲ, ತೋರಿಸುತ್ತಿಲ್ಲ.
“ದಿಟ್ಟತನ, ದಕ್ಷತೆ, ಪ್ರಾಮಾಣಿಕತೆ, ಕ್ರಿಯಾಶೀಲತೆ, ಸಭ್ಯತೆ, ಸರಳತೆ ಒಳಗೊಂಡ ಸಮರ್ಥರ ಕೋಟಾ” ಇದರ ಬಗ್ಗೆ ಚರ್ಚೆ ಇಲ್ಲ, ಮಾತೆ ಇಲ್ಲ.
ಇದು ಇಂದಿನ ರಾಜಕೀಯ ಪಕ್ಷಗಳಿಗೆ ಹಾಗೂ ಮಾಧ್ಯಮಗಳಿಗೆ ಖಂಡಿತವಾಗಿಯೂ ಬೇಕಾಗಿಲ್ಲ… ಎಂಬುದು ಅಷ್ಟೇ ಸತ್ಯ.
ಇನ್ನು ಪ್ರಾದೇಶಿಕ & ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಏನಾಗುತ್ತಿದೆ? ಪ್ರಾದೇಶಿಕ ಮತ್ತು ಸಾಮಾಜಿಕ ನ್ಯಾಯದಡಿ ಸಚಿವರನ್ನು ಆಯ್ಕೆ ಮಾಡಬೇಕು – ನಿಜ.
ಆದರೆ ಇದೇ ಸೂತ್ರದಡಿ ಯೋಗ್ಯರನ್ನು ಪರಿಗಣಿಸದ ಪರಿಸ್ಥಿತಿ ವರ್ಷಗಳಿಂದ ಇದೆ.
“ಯೋಗ್ಯರ ಮಂತ್ರಿಮಂಡಲ” ಎಂಬುದೇ ಮರೀಚಿಕೆಯಾಗಿದೆ.
ಸದ್ಯ ಸುದ್ದಿ ವಾಹಿನಿಗಳು ಪ್ರಸಾರ ಮಾಡುತ್ತಿರುವ ಸಂಭಾವ್ಯ ಸಚಿವರ ಪಟ್ಟಿ ನೋಡಿ:
ಮೂರ್ನಾಲ್ಕು ಹೆಸರುಗಳನ್ನು ಹೊರತುಪಡಿಸಿದರೆ ಬಹುತೇಕ ಡಿ.ಕೆ.ಶಿವಕುಮಾರ್ ನೇತೃತ್ವದ ಸಿದ್ದರಾಮಯ್ಯ ಸಂಪುಟವೇ ಎನ್ನಬಹುದು.
ಹಳೆ ಮುಖಗಳ ಬದಲು ಸಾಧ್ಯವಾದಷ್ಟು ಹೊಸ ಮುಖಗಳನ್ನು, ಅದರಲ್ಲೂ ಪ್ರಮುಖವಾಗಿ ದುಡಿಯುವ ಪ್ರತಿನಿಧಿಗಳನ್ನು ಪರಿಗಣಿಸುವುದು ಒಳಿತು.
ನಿಷ್ಕ್ರಿಯರು, ಭ್ರಷ್ಟರನ್ನು ಮುಲಾಜಿಲ್ಲದೆ ಹೊರಗಿಡುವುದು ಒಳ್ಳೆಯದು.
ಕಠೋರ ಸತ್ಯ ಏನು?
ದಿಟ್ಟತನ, ತತ್ವ ನಿಷ್ಠೆ, ಪ್ರಗತಿಪರ ಚಿಂತನೆ ಹಿನ್ನೆಲೆಯಲ್ಲಿ ಆಯ್ಕೆ ಮಾಡುವುದು ಯಾವುದೇ ಪಕ್ಷಗಳಿಗೆ ಸಧ್ಯ ಸಾಧ್ಯವಿಲ್ಲ.ಯಾಕಂದರೆ ಈಗ ಓಲೆಕ್ಕೆ ರಾಜಕೀಯದಲ್ಲಿ ಇಂದಿನ ರಾಜಕೀಯ ವ್ಯವಸ್ಥೆ ಸಾಗುತ್ತಿದೆ. ಅದಕ್ಕಾಗಿ ಪ್ರಾಮಾಣಿಕ ವ್ಯಕ್ತಿಗಳಿಗೆ ಅವಕಾಶ ಸಿಗುವುದು ನೂರಕ್ಕೆ ನೂರರಷ್ಟು ಕಡಿಮೆ ಎನ್ನಬಹುದು. ಅಷ್ಟರಮಟ್ಟಿಗೆ ಇಂದಿನ ಡಾಂಬಿಕ ವ್ಯವಸ್ಥೆ ಮತ್ತು ನಾಟಕೀಯ ವ್ಯವಸ್ಥೆ ಜೊತೆಗೆ ಬಕೆಟ್ ಹಿಡಿಯುವ ವ್ಯವಸ್ಥೆಯ ಸಾಗುತ್ತಿದೆ.
ನಮ್ಮ ಸ್ಪಷ್ಟ ಮನವಿ ಡಿಕೆ ಶಿವಕುಮಾರ್ ಅವರಿಗೆ,
- ಯೋಗ್ಯತೆಗೆ ಮೊದಲ ಆದ್ಯತೆ:
ಇದ್ದಿರುವ ನಾಯಕರಲ್ಲಿ ಅತ್ಯುತ್ತಮ, ಸಾಮಾಜಿಕ ಸೇವೆ ಹಾಗೂ ಬಡವರ ಬಗ್ಗೆ ಅಪಾರ ಕಳಕಳಿ ಹೊಂದಿರುವ ವ್ಯಕ್ತಿಗಳನ್ನು ಗುರುತಿಸಿ ಅವರಿಗೆ ಸಚಿವ ಸ್ಥಾನ ನೀಡಿ. - ಇತಿಹಾಸ ಸೃಷ್ಟಿಸಿ:
ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಅಧಿಕಾರದಲ್ಲಿದೆ. ನೂತನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿರುವ ಡಿಕೆ ಶಿವಕುಮಾರ್ ಅವರು ಗಂಭೀರವಾಗಿ ಯೋಚಿಸಿ ಹೊಸ ಕೆಲಸಕ್ಕೆ ಕೈಹಾಕಿ ಇತಿಹಾಸ ಸೃಷ್ಟಿಸಿ. - ನಿಗಮ ಮಂಡಳಿ ಬದಲಾವಣೆ:
ಸಚಿವ ಸ್ಥಾನ ಮಾತ್ರವಲ್ಲ, ಅನೇಕ ನಿಗಮ ಮಂಡಳಿಗಳಿಗೂ ಸೂಕ್ತ ಮತ್ತು ಯೋಗ್ಯ ವ್ಯಕ್ತಿಗಳನ್ನು ಆಯ್ಕೆ ಮಾಡುವ ವ್ಯವಸ್ಥೆ ಆಗಬೇಕು.
ಕೊನೆಯ ಮಾತು:
ಆ ಜಾತಿ ಈ ಜಾತಿ ಎನ್ನದೆ ರಾಜ್ಯದ ಅಭಿವೃದ್ಧಿಗಾಗಿ, ಬಡವರ ಸೇವೆಗಾಗಿ ನಿರಂತರವಾಗಿ ದುಡಿಯುವ ಪ್ರತಿನಿಧಿಗಳಿಗೆ ರಾಜಕೀಯದಲ್ಲಿ ಸೂಕ್ತ ಸ್ಥಾನಮಾನ ನೀಡಬೇಕು. ಹಾಗೆ ನೀಡುವುದರಿಂದಲೇ ರಾಜ್ಯದ ಪ್ರಗತಿ ಕಾಣಬಹುದು.ಡಿಕೆ ಶಿವಕುಮಾರ್ ಅವರೇ, ನೀವು “ಜಾತಿ ಕೋಟಾ”ದ ಲೆಕ್ಕ ಮುರಿದು “ಯೋಗ್ಯತೆಯ ಕೋಟಾ”ದ ಲೆಕ್ಕ ಹಾಕಿ. ಕರ್ನಾಟಕ ಅದನ್ನೇ ನಿರೀಕ್ಷಿಸುತ್ತಿದೆ.
- ಸಂಗಮೇಶ ಎನ್ ಜವಾದಿ.
ಬರಹಗಾರರು, ಪತ್ರಕರ್ತರು, ಚಿಂತಕರು, ಹೋರಾಟಗಾರರು, ಬೀದರ ಜಿಲ್ಲೆ




















