ಬಳ್ಳಾರಿ / ಕಂಪ್ಲಿ : ಎಫ್ಐಡಿ ಮೂಲಕ ಯೂರಿಯಾ ರಸಗೊಬ್ಬರವನ್ನು ಮಿತಿಯಲ್ಲಿ ನೀಡುವುದನ್ನು ರದ್ದುಗೊಳಿಸಿ, ಲಭ್ಯತೆಗೆ ಅನುಗುಣವಾಗಿ ರೈತರಿಗೆ ಯೂರಿಯಾ ನೀಡಬೇಕು. ಮತ್ತು ಜಿಲ್ಲೆಯಲ್ಲಿ ಡಿಸೇಲ್ ಮತ್ತು ಪೆಟ್ರೋಲ್ ಅನ್ನು ಬ್ಯಾರಲ್, ಕ್ಯಾನ್ಗಳಿಗೆ ಹಾಕುವುದನ್ನು ತಡೆಗಟ್ಟಬೇಕೆಂದು ಆಗ್ರಹಿಸಿ, ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ರೈತರು ಪಟ್ಟಣದ ತಹಶೀಲ್ದಾರ್ ಕಛೇರಿಯಲ್ಲಿ ತಹಶೀಲ್ದಾರ್ ಜೂಗಲ್ ಮಂಜುನಾಯಕಗೆ ಸೋಮವಾರ ಮನವಿ ಪತ್ರ ಸಲ್ಲಿಸಿದರು.
ನಂತರ ನಗರ ಘಟಕಾಧ್ಯಕ್ಷ ಎನ್.ತಿಮ್ಮಪ್ಪ ಮಾತನಾಡಿ, ಪ್ರಸಕ್ತ ಮುಂಗಾರು ಹಂಗಾಮಿನ ಹಿನ್ನಲೆ ಸಾಕಷ್ಟು ರೈತರು ಈಗಾಗಲೇ ಹೊಲಗದ್ದೆಗಳಲ್ಲಿ ಹದಗೊಳಿಸುವ ಜೊತೆಗೆ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದಾರೆ. ಈಗಾಗಲೇ ರಸಗೊಬ್ಬರ ಬೆಲೆ ಗಣನೀಯವಾಗಿ ಏರಿಕೆ ಕಂಡಿದೆ. ಇತ್ತೀಚೆಗೆ ಸರ್ಕಾರ ಯೂರಿಯವನ್ನು ಎಫ್ಐಡಿ ಮೂಲಕ ರೈತರು ತೆಗೆದುಕೊಳ್ಳುವಂತೆ ಆದೇಶಿಸಲಾಗಿದೆ ಇದರಿಮದ ಬೆಳೆ ಬೆಳೆಯುವ ರೈತರಿಗೆ ತುಂಬಾ ತೊಂದರೆ ಉಂಟಾಗುತ್ತದೆ. ಮತ್ತು ಕೆಲ ಬೆಳೆಗಳ ಇಳುವರಿಯೂ ಸಹ ಕುಂಠಿತವಾಗುತ್ತದೆ. ಇನ್ನೂ ಕೆಲ ಬೆಳೆಗಳು ಯೂರಿಯಾ ಕೊರೆತೆಗೆ ನಸಿಸಲಿವೆ ಆದ್ದರಿಂದ ಸರ್ಕಾರ ರೈತರ ಬಗ್ಗೆ ಹೆಚ್ಚಿನ ಗಮನ ಹರಿಸಿ, ರೈತರಿಗೆ ಲಭ್ಯತೆಗೆ ಆಧಾರದ ಮೇಲೆ ಯೂರಿಯಾ ನೀಡಲು ಮುಂದಾಗಬೇಕು. ಇತ್ತೀಚಿನ ಮಧ್ಯಪ್ರಾಚ್ಯದ ಯುದ್ಧದಿಂದಾಗಿ ಪೆಟ್ರೋಲ್, ಡಿಸೇಲ್ ಗಗನಕ್ಕೇರಿದೆ. ಇದರಿಂದ ರೈತರಿಗೆ ಸಮಸ್ಯೆ ತಂದೊಡ್ಡಿದೆ. ಬಳ್ಳಾರಿ ಜಿಲ್ಲೆಯಲ್ಲಿ ಡಿಸೇಲ್, ಪೆಟ್ರೋಲ್ ಅನ್ನು ಬ್ಯಾರಲ್, ಕ್ಯಾನ್ ಮೂಲಕ ಕೊಂಡೊಯ್ಯುತ್ತಿರುವುದರಿಂದ ಸಾಕಷ್ಟು ಸಮಸ್ಯೆಯಾಗಿದೆ. ಆದ್ದರಿಂದ ಬ್ಯಾರಲ್, ಕ್ಯಾನ್ಗಳಲ್ಲಿ ಡಿಸೇಲ್, ಪೆಟ್ರೋಲ್ ತೆಗೆದುಕೊಂಡು ಹೋಗುವುದಕ್ಕೆ ಕಡಿವಾಣ ಹಾಕಬೇಕೆಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯದರ್ಶಿ ಕೊಟ್ಟೂರು ರಮೇಶ, ನಗರ ಘಟಕದ ಗೌರವಾಧ್ಯಕ್ಷ ಎ.ರಂಗಪ್ಪ, ಖಜಾಂಜಿ ಟಿ.ಗಂಗಣ್ಣ, ಪ್ರಧಾನ ಕಾರ್ಯದರ್ಶಿ ಬಿ.ಮಲ್ಲಿಕಾರ್ಜುನ, ಮುಖಂಡರಾದ ವಿ.ಟಿ.ನಾಗರಾಜ, ಅಂಜಿನ್ಪ, ವಿರುಪಣ್ಣ, ನಾಗರಾಜ, ನಾಗಪ್ಪ ಸೇರಿದಂತೆ ರೈತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















