ಕುಂದಗೋಳ : ಸರ್ಕಾರಿ ಆಸ್ಪತ್ರೆಗೆ ಬಣ್ಣ ಹಚ್ಚುವ ವೇಳೆ ವಿದ್ಯುತ್ ಅವಘಡದಿಂದಾಗಿ ತಾಲೂಕಿನ ಸಂಶಿ ಗ್ರಾಮದ ಮಂಜುನಾಥ ದೇವಪ್ಪ ಶಿಶುನಾಳ ಈಗ ಕೈ – ಕಾಲು ಕಳೆದುಕೊಂಡು ಬಳಲುತ್ತಿದ್ದು, ಈ ವ್ಯಕ್ತಿಗೆ ಕೃತಕ ಕೈ- ಕಾಲು ಜೋಡಣೆ ಜೊತೆಗೆ ಜೀವನೋಪಾಯಕ್ಕೆ ಸರ್ಕಾರಿ ಉದ್ಯೋಗ ನೀಡಬೇಕೆಂದು ಬೆಳೆ ರಕ್ಷಕ ರೈತ ಸಂಘದ ಮುಖಂಡ ಪರಮೇಶ್ವರಪ್ಪ ನಾಯ್ಕರ್ ಒತ್ತಾಯಿಸಿದರು.
ಅವರು ಪಟ್ಟಣದ ಪ್ರವಾಸಿ ಮಂದಿರದಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ನವಲಗುಂದ ಸರ್ಕಾರಿ ಆಸ್ಪತ್ರೆಗೆ ಬಣ್ಣ ಹಚ್ಚುವ ವೇಳೆ ಈ ಘಟನೆ ನಡೆದಿದ್ದು, ಗುತ್ತಿಗೆದಾರ ಮುಂಜಾಗೃತ ಸಾಧನಗಳನ್ನು ನೀಡಿದೆ ಇರುವುದರಿಂದ ಈ ಘಟನೆ ಸಂಭವಿಸಿದ್ದು, ಈ ಕುರಿತು ನವಲಗುಂದ ಪೊಲೀಸ್ ಠಾಣೆಗೆ ದೂರು ದಾಖಲು ಹೋದಾಗ ನಮ್ಮ ದೂರನ್ನು ದಾಖಲಿಸದೆ, ತಮಗೆ ಬೇಕಾದ ರೀತಿಯಲ್ಲಿ ದೂರನ್ನು ದಾಖಲಿಸಿಕೊಂಡಿದ್ದಾರೆ ಎಂದು ಆರೋಪಿಸಿದರು.
ಕಿಮ್ಸ್ ಆಸ್ಪತ್ರೆಗೆ ಗುತ್ತಿಗೆದಾರ, ಸಂಬಂಧಪಟ್ಟ ಇಲಾಖೆಗಳು ಸೌಜನ್ಯಕ್ಕಾದರೂ ಭೇಟಿ ನೀಡಿ ಮಂಜುನಾಥ ಆರೋಗ್ಯ ವಿಚಾರಿಸಿಲ್ಲ ಎಂದು ಕಿಡಿಕಾರಿಗಳಲ್ಲದೆ ಪೊಲೀಸ್ ಇಲಾಖೆ ನಮ್ಮ ದೂರನ್ನು ದಾಖಲಿಸಿಕೊಂಡು ಕ್ರಮ ಕೈಗೊಳ್ಳಬೇಕೆಂದು ಹಾಗೂ ಸರ್ಕಾರ ಈ ಬಡ ಕುಟುಂಬದ ಯುವಕನಿಗೆ ಕೂಡಲೇ ಕೃತಕ ಕಾಲು- ಕೈ ಜೋಡಣೆ ಮಾಡುದರೊಂದಿಗೆ ಕುಟುಂಬಕ್ಕೆ ಉದ್ಯೋಗ ನೀಡುವ ಮೂಲಕ ನೆರವು ನೀಡದಿದ್ದರೆ ಉಗ್ರಹವಾದ ಪ್ರತಿಭಟನೆ ಹಮ್ಮಿಕೊಳ್ಳುವದಾಗಿ ಎಚ್ಚರಿಸಿದರು.
ಈಗಾಗಲೇ ಕುಂದಗೋಳ ತಹಶೀಲ್ದಾರ್ ಮೂಲಕ ಮುಖ್ಯಮಂತ್ರಿ ಅವರಿಗೆ ಮನವಿ ಸಲ್ಲಿಸಲಾಗಿದೆ ಜೊತೆಗೆ ಜಿಲ್ಲಾಧಿಕಾರಿಗಳಿಗೂ ಸಹ ಮನವಿ ಸಲ್ಲಿಸಿದ್ದು , ಈ ಬಡ ಕುಟುಂಬಕ್ಕೆ ಆಸರೆ ನೀಡಬೇಕೆಂದು ಮನವಿ ಮಾಡಿಕೊಳ್ಳಲಾಗಿದ್ದು ಈ ದುರ್ಘಟನೆಗೆ ಗುತ್ತಿಗೆದಾರನೆ ಕಾರಣವಾಗಿದ್ದು ಅವನ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅರ್ಜುನ್ ಆಡಿನ್, ಪ್ರವೀಣ್ ಕಲಾಲ್, ಮಂಜುನಾಥ್ ಸರಾವರಿ ಸೇರಿದಂತೆ ಇತರರು ಇದ್ದರು.


















