
ಬಳ್ಳಾರಿ / ಕಂಪ್ಲಿ: ಇನ್ನೇನು ಈ ಬಾರಿಯ ಮುಂಗಾರು ಮಳೆ ಮರೆತೆವು ಎನ್ನುವಷ್ಟರಲ್ಲಿ ಮಳೆರಾಯನ ಕೃಪೆಯಿಂದ ಶನಿವಾರ ಕಂಪ್ಲಿ ಪಟ್ಟಣ ಸೇರಿದಂತೆ ತಾಲೂಕಿನ ಕೆಲ ಹಳ್ಳಿಗಳಲ್ಲಿ ಗಾಳಿ ಸಹಿತ ಮಳೆರಾಯನ ಆಗಮವಾಗಿದ್ದು, ರೈತರಲ್ಲಿ ಕೊಂಚ ಉಸಿರಾಡುವಂತೆ ಮಾಡಿರುವ ಜೊತೆಗೆ ಭೂಮಿ ತಂಪಾಗಿಸಿದೆ.
ಮುಂಗಾರು ಹಂಗಾಮಿನಲ್ಲಿ ಮಳೆ ಹೆಚ್ಚಾಗಿ ಸುರಿಯುವುದು ವಾಡಿಕೆ. ಆದರೆ, ಈಗಾಗಲೇ ಕಳೆದ ಎರಡು ತಿಂಗಳಿಂದ ಸಮರ್ಪಕವಾಗಿ ಮಳೆ ಬಾರದ ಹಿನ್ನಲೆ ರೈತರು ಕಂಗಾಲಾಗುವ ಜೊತೆಗೆ ಭೂಮಿ ತಂಪಾಗುವ ಬದಲು ಉರಿ ಬಿಸಿಲಿನ ವಾತಾವರಣದಿಂದ ಜನರು ರೋಸಿ ಹೋಗಿದ್ದರು.
ಶನಿವಾರ ಮಧ್ಯಾಹ್ನ 3:45 ಸುಮಾರಿಗೆ ಮೋಡಗಳಿಂದ ಬಂದಂತಹ ಮಳೆಯು ಕಂಪ್ಲಿ ಪಟ್ಟಣ, ಗ್ರಾಮೀಣ ಭಾಗದ ನಂ.10 ಮುದ್ದಾಪುರ, ರಾಮಸಾಗರ, ಸಣಾಪುರ ಸೇರಿದಂತೆ ಇನ್ನಿತರ ಪ್ರದೇಶದಲ್ಲಿ ಧಾರಕಾರವಾಗಿ ಸುರಿದೆ. ಮಳೆಗಾಗಿ ಕೆಲವು ಕಡೆಗಳಲ್ಲಿ ಗುಡ್ಡೆಕಲ್ಲುಗಳಿಗೆ ಹಾಗೂ ಆಯಾ ದೇವಸ್ಥಾನಗಳಲ್ಲಿ ಜಲಾಭಿಷೇಕ ಮಾಡಿ, ಗಂಗೆಯು ಭೂಮಿಗೆ ಧರೆಗುರಳಲೆಂದು ಬೇಡಿದ್ದರು. ರೈತರ ಮತ್ತು ಭಕ್ತರ ಕೋರಿಕೆಯಂತೆ ಈಗ ಕಂಪ್ಲಿಗೆ ಮಳೆರಾಯನ ಆಗಮವಾಗಿದ್ದು, ರೈತರಲ್ಲಿ ಮತ್ತು ಜನರು ಹರ್ಷದಾಯಕವಾಗಿದೆ.
ಮಳೆ ಇಲ್ಲದೇ ಇರುವುದರಿಂದ ಮಳೆ ಆಶ್ರಿತ ರೈತರ ಜಮೀನುಗಳಲ್ಲಿ ಬೆಳೆದ ಬೆಳೆಗಳಿಗೆ ನೀರಿಲ್ಲಂತಾಗಿ, ಬೆಳೆಗಳು ಒಣಗುತ್ತಿರುವುದು ಕಂಡು ಬಂದಿದೆ. ರೈತರು ಮೋಡದತ್ತ ಕೈಬೀಸಿ ಕರೆಯುವಂತಾಗಿತ್ತು. ಆದರೆ, ಈಗ ಕಂಪ್ಲಿ ತಾಲೂಕಿನಲ್ಲಿ ಮಳೆ ಸುರಿದಿದ್ದು, ರೈತರ ಬೆಳೆಗಳಿಗೆ ನೀರುಣಿಸಿದಂತಾಗಿದ್ದು, ಮತ್ತು ಭೂಮಿ ತಂಪಾಗಿಸುವ ಮೂಲಕ ದನಕರುಗಳಿಗೆ ಹಸಿ ಮೇವಿಗೆ ಅನುವು ಮಾಡಿಕೊಟ್ಟಂತಾಗಿದೆ. ಮಳೆಯಿಂದಾಗಿ ರೈತರ ಬೆಳೆಗಳು ಚಿಗುರೊಡೆಯುವಂತೆ ಮಾಡಿದೆ. ಸತತ ಒಂದು ತಾಸು ಮಳೆ ಸುರಿದಿದ್ದು, ರೈತರಲ್ಲಿ ಸಂತಸ ಮೂಡಿದೆ. ಮಳೆಯಿಂದಾಗಿ ಭೂಮಿ ತಾಯಿ ತಂಪಾಗಿದ್ದಾಳೆ. ಇಷ್ಟು ದಿನ ಮಳೆಗಾಗಿ ಜಪಿಸಿದ ರೈತರಿಗೆ ಮತ್ತು ಜನರಿಗೆ ಫಲ ಸಿಕ್ಕಂತಾಗಿದೆ. ಇದೇ ತರನಾಗಿ ಮಳೆಯಾದರೆ, ಭೂತಾಯಿ ತಂಪಾಗುವ ಜೊತೆಗೆ ನದಿ, ಕೆರೆ, ಹಳ್ಳ-ಕೊಳ್ಳಗಳಲ್ಲಿ ನೀರು ಹರಿಯಲು ಸಾಧ್ಯ ಮತ್ತು ಜನ ಜಾನುವಾರುಗಳಿಗೆ ಕುಡಿಯುವ ನೀರು ದೊರಕಲು ಸಾಧ್ಯ ಎಂಬುವಂತಾಗಿದೆ.
ಪಟ್ಟಣದಲ್ಲಿ ಸುರಿಯುತ್ತಿರುವ ಮಳೆಯ ನಡುವೆ ಪೋಷಕರು ಶಾಲಾ ಮಕ್ಕಳಿಗೆ ಟವಲ್ ಹೊದಿಸಿಕೊಂಡು ಬೈಕ್ನಲ್ಲಿ ಮನೆ ಕಡೆಗೆ ಕರೆದುಕೊಂಡು ಹೋಗುತ್ತಿರುವುದು ಕಂಡು ಬಂತು. ಕೆಲ ಮಕ್ಕಳು ಛತ್ರಿ ಆಶ್ರಯದೊಂದಿಗೆ ಮನೆಗಳಿಗೆ ತೆರಳಿದರೆ, ಇನ್ನೂ ಕೆಲ ವಿದ್ಯಾರ್ಥಿಗಳು ಮಳೆಯಲ್ಲೇ ನೆನೆಯುತ್ತಾ ಸಾಗಿದರು. ಕೆಲ ಒತ್ತು ಮಳೆ ಸುರಿದ ಹಿನ್ನಲೆ ಜನರು ಕೆಲ ಅಂಗಡಿ, ಶೆಡ್ಗಳಲ್ಲಿ ಆಶ್ರಯ ಪಡೆದು, ಮಳೆ ನಿಂತ ಮೇಲೆ ತಮ್ಮ ತಮ್ಮ ಮನೆ ಮತ್ತು ಊರುಗಳಿಗೆ ತೆರಳಿದರು.
ವರದಿ : ಜಿಲಾನಸಾಬ್ ಬಡಿಗೇರ್


















