ಬಳ್ಳಾರಿ / ಕಂಪ್ಲಿ: ಪಟ್ಟಣದ ಜನತೆಗೆ ನೀರೊದಗಿಸುವ ಕಂಪ್ಲಿ ಕೋಟೆಯ ತುಂಗಭದ್ರಾ ನದಿಯಲ್ಲಿ ನೀರಿನ ಹರಿವು ಕ್ಷೀಣಿಸಿರುವುದರಿಂದ ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜಿನಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನದಿಯ ವಿವಿಧ ಭಾಗದಲ್ಲಿ ರಿಂಗ್ ಬಂಡಿಗಳನ್ನು ನಿರ್ಮಿಸಲಾಗಿದೆ ಎಂದು ಪುರಸಭೆ ಪ್ರಭಾರ ಮುಖ್ಯಾಧಿಕಾರಿ ಬಿ.ಮಲ್ಲಿಕಾರ್ಜುನ ತಿಳಿಸಿದರು.
ಅವರು ಪಟ್ಟಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿ, ನದಿಯ ಆಯಕಟ್ಟಿನ ಸ್ಥಳಗಳಲ್ಲಿ ಪ್ಲಾಸ್ಟಿಕ್ ಚೀಲಗಳಲ್ಲಿ ಮರಳು ತುಂಬಿ ತಾತ್ಕಾಲಿಕ ರಿಂಗ್ಬಂಡಿಗಳ ನಿರ್ಮಾಣ ಮಾಡಲಾಗಿದೆ. ಇದರಿಂದ ಸದ್ಯಕ್ಕೆ ನೀರಿನ ತೊಂದರೆಯಾಗುವುದಿಲ್ಲ. ಮುಂದಿನ ಮೂರು ತಿಂಗಳು ನೀರು ಪೂರೈಕೆಗೆ ಜಾಕ್ವೆಲ್ದಿಂದ ಎರಡು ಕಿ.ಮೀ. ಅಂತರದಲ್ಲಿರುವ ನೀರಿನ ಮಡುಗು (ಕೊಳ್ಳ) ಬಳಿಯಿಂದ ನೀರು ಪಡೆಯಲಾಗುವುದು. ಅದಕ್ಕಾಗಿ ಮರಳಿನ ಚೀಲಗಳಿಂದ ತಾಂತ್ರಿಕವಾಗಿ ರಿಂಗ್ಬಂಡಿಗಳ ಟೆಂಡರ್ ಕರೆಯಲಾಗುವುದು. ಪಟ್ಟಣದ 23 ವಾರ್ಡುಗಳಲ್ಲಿ 53 ಸಾವಿರ ಜನಸಂಖ್ಯೆ ಇದ್ದು, ನಾಲ್ಕು ಮೇಲ್ತೊಟ್ಟಿಗಳ ಮೂಲಕ 4.,5, ಎಂ.ಎಲ್.ಡಿ. ನೀರು ಸಂಗ್ರಹಿಸಿ ಪ್ರತಿದಿನ ಬಿಟ್ಟು ದಿನ ಪೂರೈಸಲಾಗುತ್ತಿದೆ. ಆಕಸ್ಮಿಕವಾಗಿ ನೀರು ಪೂರೈಕೆ ತೊಂದರೆಯಾದರೆ, ಟ್ಯಾಂಕ್ ರ್ಮೂಲಕ ನೀರು ಪೂರೈಸಲಾಗುವುದು ಎಂದು ತಿಳಿಸಿದರು.
ನೀರು ಮಿತವಾಗಿ ಬಳಸಿ, ವ್ಯರ್ಥ ಮಾಡಬೇಡಿ : ನದಿಯಲ್ಲಿ ನೀರಿನ ಹರಿವು ಕಡಿಮೆ ಇರುವುದರಿಂದ ಸಮರ್ಪಕವಾಗಿ ಪಟ್ಟಣದ ಜನತೆಗೆ ಸಮರ್ಪಕವಾಗಿ ನೀರು ಪೂರೈಸಲು ಕಷ್ಟ ಸಾಧ್ಯವಾಗಿರುವುದರಿಂದ ಹಾಗೂ ಮಳೆಯೂ ಕಡಿಮೆ ಇರುವುದರಿಂದ ನದಿಯಲ್ಲಿ ನೀರಿನ ಹರಿವು ಕಡಿಮೆ ಇದ್ದು, ಪಟ್ಟಣದ ಜನತೆ ಪುರಸಭೆ ಪೂರೈಸುವ ನೀರನ್ನು ಮಿತವಾಗಿ ಬಳಸಬೇಕು ಮತ್ತು ವ್ಯರ್ಥವಾಗಿ ನೀರನ್ನು ಬೀದಿಗಳಿಗೆ ಬಿಡಬಾರದು, ನಲ್ಲಿಗಳಲ್ಲಿ ನೀರು ಸೋರದಂತೆ ಗಮನಹರಿಸಬೇಕೆಂದು ತಿಳಿಸಿದರು.
ವರದಿ : ಜಿಲಾನಸಾಬ್ ಬಡಿಗೇರ್




















