ರೈತ ಕುಟುಂಬ ಕಂಗಾಲು, ಸರ್ಕಾರದಿಂದ ಸೂಕ್ತ ಪರಿಹಾರ ಅಧಿಕಾರಿಗಳ ಭರವಸೆ.
ತುಮಕೂರು ಜಿಲ್ಲೆಯ ಕೊರಟಗೆರೆ ತಾಲ್ಲೂಕಿನ ಕೋಳಾಲ ಹೋಬಳಿಯ ವಡೇರಹಳ್ಳಿ ಗ್ರಾಮದಲ್ಲಿ ದಿನಾಂಕ : 15/07/2026 ರಂದು ವಿಷಪೂರಿತ ಆಹಾರ ಸೇವನೆಯ ಪರಿಣಾಮ 75 ಕುರಿಗಳ ಪೈಕಿ 59 ಉತ್ತಮ ತಳಿಯ ಕುರಿಗಳು ಮೃತಪಟ್ಟಿರುವ ಘಟನೆ ಪಶುಪಾಲಕರಲ್ಲಿ ಆತಂಕ ಮೂಡಿಸಿದೆ.
ನಾರಿ ಸುವರ್ಣ, ಡಾರ್ಪರ್, ರಾಮ್ ಬುಲೆಟ್ ಹಾಗೂ ಬನ್ನೂರು ತಳಿಯ ಕುರಿಗಳು ಸಾವಿಗೀಡಾಗಿದ್ದು, ರೈತ ಶಶಿಕಿರಣ್ ಅವರಿಗೆ ಭಾರೀ ಆರ್ಥಿಕ ನಷ್ಟ ಉಂಟಾಗಿದೆ.
ಘಟನೆಯ ಮಾಹಿತಿ ತಿಳಿದ ಕೂಡಲೇ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಮೃತ ಕುರಿಗಳ ಮಾದರಿಗಳನ್ನು ಸಂಗ್ರಹಿಸಿ, ಘಟನೆಗೆ ಸಂಬಂಧಿಸಿದ ಪ್ರಾಥಮಿಕ ವರದಿ ಸಿದ್ಧಪಡಿಸಿದರು.
ತುಮಕೂರು ಜಿಲ್ಲಾ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಉಪನಿರ್ದೇಶಕ ಡಾ. ಎಚ್.ಎಂ. ಶಿವಪ್ರಸಾದ್ ಮಾತನಾಡಿ, “ಸ್ಥಳ ಪರಿಶೀಲನೆ ವೇಳೆ ಕುರಿಗಳು ಸೇವಿಸಿದ ಆಹಾರ ವಿಷಪೂರಿತವಾಗಿರುವುದು ಕಂಡುಬಂದಿದೆ. ಇದೇ ಕಾರಣದಿಂದ ಕುರಿಗಳ ಸಾವು ಸಂಭವಿಸಿರುವ ಸಾಧ್ಯತೆ ಇದೆ. ಸರ್ಕಾರದ ನಿಯಮಾನುಸಾರ ರೈತರಿಗೆ ದೊರೆಯಬೇಕಾದ ಪರಿಹಾರವನ್ನು ಒದಗಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇಂತಹ ಘಟನೆಗಳು ಮರುಕಳಿಸದಂತೆ ಜಿಲ್ಲೆಯಾದ್ಯಂತ ಪಶುಪಾಲಕರಿಗೆ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತದೆ,” ಎಂದು ತಿಳಿಸಿದರು.
ರೈತ ಶಶಿಕಿರಣ್ ಮಾತನಾಡಿ, “ಉದ್ಯೋಗ ಹಾಗೂ ಕುಟುಂಬದ ನಿರ್ವಹಣೆಗಾಗಿ ಸುಮಾರು 20 ರಿಂದ 25 ಲಕ್ಷ ರೂಪಾಯಿ ಬಂಡವಾಳ ಹೂಡಿ ಉತ್ತಮ ತಳಿಯ 75 ಕುರಿಗಳನ್ನು ಸಾಕುತ್ತಿದ್ದೆವು. ಕಳೆದ ಆರು–ಏಳು ವರ್ಷಗಳಿಂದ ಕುರಿ ಸಾಕಾಣಿಕೆ ಮಾಡುತ್ತಿದ್ದರೂ ಇಂತಹ ದುರ್ಘಟನೆ ಇದೇ ಮೊದಲ ಬಾರಿಗೆ ಸಂಭವಿಸಿದೆ. 59 ಕುರಿಗಳು ಮೃತಪಟ್ಟಿರುವುದರಿಂದ ಕುಟುಂಬದ ಜೀವನೋಪಾಯಕ್ಕೆ ದೊಡ್ಡ ಹೊಡೆತ ಬಿದ್ದಿದೆ. ಸರ್ಕಾರ ಸೂಕ್ತ ಪರಿಹಾರ ನೀಡುವ ಮೂಲಕ ನಮ್ಮ ನೆರವಿಗೆ ಬರಬೇಕು, ಎಂದು ಮನವಿ ಮಾಡಿದರು.
ಅಧಿಕಾರಿಗಳು ಸ್ಥಳದಲ್ಲೇ ರೈತನಿಗೆ ಧೈರ್ಯ ತುಂಬಿ, ಪ್ರಕರಣದ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿ ಪರಿಹಾರ ಮಂಜೂರಾತಿಗೆ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಈ ಘಟನೆ ಜಿಲ್ಲೆಯ ಪಶುಪಾಲಕರಿಗೆ ಎಚ್ಚರಿಕೆಯ ಗಂಟೆಯಾಗಿದ್ದು, ವಿಷಪೂರಿತ ಆಹಾರ ಬಳಕೆಯಿಂದಾಗುವ ಅಪಾಯಗಳ ಕುರಿತು ಹೆಚ್ಚಿನ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ವರದಿ. ಪ್ರಸನ್ನಕುಮಾರ್. ಎಸ್. ಕೊರಟಗೆರೆ




















