ಬಳ್ಳಾರಿ / ಕಂಪ್ಲಿ : ನಾಡಿನಾದ್ಯಂತ ಮುಂಗಾರು ಮಳೆ ಕೈಕೊಟ್ಟಿರುವ ಹಿನ್ನೆಲೆಯಲ್ಲಿ ನಾಡಿನುದ್ದಕ್ಕೂ ಮಳೆಗಾಗಿ ಪ್ರಾರ್ಥಿಸಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರತಿನಿತ್ಯ ನಡೆಯುತ್ತಿದ್ದು, ಕಂಪ್ಲಿ ಪಟ್ಟಣದಲ್ಲಿಯೂ ಸಹಿತ ಮಳೆಗಾಗಿ ಪ್ರಾರ್ಥಿಸಿ ಗ್ರಾಮ ದೇವತೆ ಶ್ರೀಮಾರೆಮ್ಮ ದೇವಿ ದೇವಸ್ಥಾನ ಸಮಿತಿಯ ಪದಾಧಿಕಾರಿಗಳು ಮತ್ತು ಭಕ್ತರು ಚಪ್ಪಗಸಿಯಲ್ಲಿರುವ ಬುಡ್ಡೆಕಲ್ಲಿಗೆ ನಿತ್ಯ ಜಲಾಭಿಷೇಕ ನಡೆಸುತ್ತಿದ್ದು, ಜು.21ರಂದು ಶ್ರೀಮಾರೆಮ್ಮ ದೇವಿಯ ಒರಗಿನ ಅಮ್ಮನ ಉತ್ಸವವನ್ನು ಹಮ್ಮಿಕೊಳ್ಳಲಾಗಿದೆ ಎಂದು ದೇಗುಲದ ಪದಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಕಳೆದ 8 ದಿನಗಳಿಂದ ಚಪ್ಪಗಸಿಯಲ್ಲಿರುವ ಬುಡ್ಡೆಕಲ್ಲಿಗೆ ಬೆಳಗಿನ ಜಾವ ತುಂಗಭದ್ರಾನದಿಯಲ್ಲಿಯೇ ಸ್ನಾನಮಾಡಿ ಮಡಿಯಿಂದ ಅಲ್ಲಿಂದಲೇ 11 ಜನರು ನಿತ್ಯ ಜಲಾಭಿಷೇಕವನ್ನು ಮಾಡುತ್ತಿದ್ದು, 11ನೇ ದಿನ ಬುಡ್ಡೆಕಲ್ಲಿಗೆ ಜಲಾಭಿಷೇಕವನ್ನುಸಂಪೂರ್ಣಗೊಳಿಸಿ, ಬುಡ್ಡೆಕಲ್ಲಿಗೆ ವಿವಿಧ ಅಭಿಷೇಕಗಳನ್ನು ನೆರವೇರಿಸಿದ ನಂತರ ವಿಶೇಷಪೂಜೆಯನ್ನು ಸಲ್ಲಿಸಲಿದ್ದಾರೆ.
ನಂತರ ಮಂಗಳವಾರ ಬೆಳಗಿನ ಜಾವ 3 ಗಂಟೆಗೆ ಶ್ರೀಮಾರೆಮ್ಮ ದೇವಿಯ ಸಕಲ ಸದ್ಭಕ್ತರು ತುಂಗಭದ್ರಾ ನದಿಗೆ ತೆರಳಿ ಅಲ್ಲಿ ಗಂಗಾದೇವಿಗೆ ವಿಶೇಷ ಪೂಜೆಯನ್ನು ಸಲ್ಲಿಸಿದ ನಂತರ ತನಗೊಡವನ್ನು ತಂದು ದೇಗುಲದ ಹೊರಭಾಗದಲ್ಲಿ ಚಪ್ಪರವನ್ನು ಹಾಕಿ ಪ್ರತಿಷ್ಠಾಪಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಗುವುದು. ದೇವಿಯನ್ನು ಪ್ರತಿಷ್ಠಾಪಿಸಿದ ನಂತರ ಗ್ರಾಮದ ಸರ್ವ ಸಮುದಾಯದವರು ದೇವಿಗೆ ಹೋಳಿಗೆ ನೈವೇದ್ಯವನ್ನು ಸಮರ್ಪಿಸಬೇಕೆಂದು ದೇವಸ್ಥಾನ ಸಮಿತಿಯವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಸಂಜೆಯವರೆಗೂ ಸರ್ವವರೂ ನೈವೇದ್ಯವನ್ನು ಸಮರ್ಪಿಸಿದ ನಂತರ ದೇವಿಯ ತನುಗೊಡದ ಜೊತೆಗೆ ಅಲ್ಲಿನ ಪ್ರತಿಯೊಂದು ವಸ್ತುಗಳನ್ನು ಚೀಲಗಳಲ್ಲಿ ತುಂಬಿಕೊಂಡು ಅವುಗಳನ್ನು ಡೊಳ್ಳು ಮತ್ತು ಜಾನಪದ ಕಲಾತಂಡಗಳೊಂದಿಗೆ ಪಟ್ಟಣದ ಹೊರವಲಯದ ಅಂದರೆ ಊರಿನ ಹೊರಮ್ಯಾರೆಗೆ ಬಿಟ್ಟು ಬರಲಿದ್ದಾರೆ. ನಂತರ ಮುಂದಿನ ಊರಿನವರು ಆವಸ್ತುಗಳನ್ನು ತಮ್ಮ ಊರಿನ ಹೊಮ್ಯಾರೆಗೆ ತಲುಪಿಸಲಿದ್ದಾರೆ. ಈ ಕಾರ್ಯಕ್ರಮ ಊರಿಂದ ಊರಿಗೆ ಹಾಗೆಯೇ ಸಾಗುತ್ತಿದೆ.
ಈ ರೀತಿ ಬುಡ್ಡೆಕಲ್ಲಿಗೆ ಜಲಾಭಿಷೇಕ ಮಾಡುವುದರಿಂದ ಹಾಗೂ ಒರಗಿನ ಅಮ್ಮನ ಉತ್ಸವನ್ನು ಮಾಡುವುದರಿಂದ ಮಳೆಯಾಗಲಿದೆ ಎನ್ನುವ ಪ್ರತೀತಿ ಇದೆ ಎಂದು ದೇಗುಲದ ಪದಾಧಿಕಾರಿಗಳು ಹಾಗೂ ಹಿರಿಯರಾದ ಎಂ.ಗೋಪಾಲ್. ಯಲ್ಲಪ್ಪ, ಎನ್.ನಾಗರಾಜ, ದೊಡ್ಡಶೇಖಪ್ಪ, ನಾಗರಾಜ, ವಿರುಪಣ್ಣ, ರಾಮಪ್ಪ, ವೆಂಕಟಾಪತಿ ಮತ್ತು ಈರಣ್ಣ ತಿಳಿಸಿದರು. ಅಂತೆಯೇ ಸಂಜೆ ಬಹುದಿನಗಳ ನಂತರ ಪಟ್ಟಣದಲ್ಲಿ ಮಳೆಸುರಿಯಿತು.
ವರದಿ : ಜಿಲಾನಸಾಬ್ ಬಡಿಗೇರ್




















