
ಬಳ್ಳಾರಿ / ಕಂಪ್ಲಿ: ಮಠ ಮತ್ತು ಮಾನ್ಯಗಳು ಮತ್ತು ಧಾರ್ಮಿಕ ಕಾರ್ಯಕ್ರಮಗಳು ಸಮಾಜವನ್ನು ಸಂಘಟಿಸುವ ಕೇಂದ್ರಗಳಾಗಿದ್ದು, ಪರಸ್ಪರ ಪ್ರೀತಿ, ಸಹೋದರತೆ ಮತ್ತು ಸಹಕಾರದ ಮನೋಭಾವ ಬೆಳೆಸುತ್ತವೆ ಎಂದು ಹಂಪಿ ಸಾವಿರ ದೇವರ ಮಹಾಂತ ಮಠದ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ಹೇಳಿದರು.
ತಾಲೂಕಿನ ಎಮ್ಮಿಗನೂರು ಗ್ರಾಮದ ಬುಧವಾರ ನಡೆದ ಶ್ರೀ ಮಲ್ಲಿಕಾರ್ಜುನ ದೇವರ ನೂತನ ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆಯ ನಂತರದ ಧರ್ಮಸಭೆಯ ದಿವ್ಯ ಸಾನಿಧ್ಯವಹಿಸಿ ಮಾತನಾಡಿ, ಮನುಷ್ಯನ ಜೀವನವು ಕೇವಲ ಲೌಕಿಕ ಸುಖ, ಭೋಗಗಳಿಗೆ ಸೀಮಿತವಾಗಿರದೆ, ಆಧ್ಯಾತ್ಮಿಕ ಚಿಂತನೆ, ಧರ್ಮ ಮತ್ತು ನೈತಿಕತೆಯ ಹಾದಿಯಲ್ಲಿ ಸಾಗಿದಾಗ ಮಾತ್ರ ಸಾರ್ಥಕ ಪಡೆಯುತ್ತದೆ. ಪ್ರತಿದಿನ ಬೆಳಗ್ಗೆ ಮತ್ತು ವಿಶೇಷವಾಗಿ ಸಂಜೆಯ ವೇಳೆಯಲ್ಲಿ ಮನೆಯಲ್ಲಿ ಭಕ್ತಿ, ದೇವರ ಧ್ಯಾನ, ಭಜನೆ ಹಾಗೂ ಶ್ಲೋಕ ಪಠಣದ ವಾತಾವರಣ ನಿಮಿರ್ಸಬೇಕು. ಇದರಿಂದ ಮಕ್ಕಳಲ್ಲಿ ಉತ್ತಮ ಸಂಸ್ಕಾರ, ಧಾರ್ಮಿಕ ಮೌಲ್ಯಗಳು ಹಾಗೂ ಭಾರತೀಯ ಸಂಸ್ಕೃತಿಯ ಅರಿವು ಬೆಳೆಯುತ್ತದೆ. ದೇವಾಲಯ ಹಾಗೂ ಮಠಗಳಲ್ಲಿ ನಡೆಯುವ ಸೇವೆಗಳು ದೇವರಿಗೆ ಸಲ್ಲಿಸುವ ಅತ್ಯುನ್ನತ ಸೇವೆಯಾಗಿದ್ದು, ಇಂತಹ ಪರಂಪರೆಯ ಸೇವೆಯನ್ನು ಮುಂದಿನ ಪೀಳಿಗೆಗೂ ಉಳಿಸಿ ಬೆಳೆಸಬೇಕು ಎಂದರು.
ನಂತರ ಅರಗಿನ ದೋಣಿ ಅಭಿನವ ಸಿದ್ಧಲಿಂಗ ಶಿವಾಚಾರ್ಯ ಮಹಾಸ್ವಾಮಿ ಆಶೀರ್ವಾಚನ ನೀಡಿ ಮಾತನಾಡಿ, ಇಂದಿನ ಆಧುನಿಕ ಯುಗದಲ್ಲಿ ಮರೆಯಾಗುತ್ತಿರುವ ಆಧ್ಯಾತ್ಮಕ ಚಿಂತನೆಗಳನ್ನು ಪ್ರತಿಯೊಬ್ಬರ ಬದುಕಲ್ಲಿ ಬಿತ್ತಬೇಕಾಗಿದೆ. ಭಾರತ ದೇಶದಲ್ಲಿ ಸಾಕಷ್ಟು ಭಕ್ತರು ದೇವಾನು ದೇವತೆಗಳನ್ನು ಆರಾಧಿಸುತ್ತಿರುವುದರಿಂದ ನಾಡಿನಲ್ಲಿ ಮಳೆ, ಬೆಳೆ ಕಾಣುವಂತಾಗಿದೆ. ಮತ್ತು ಮನುಷ್ಯನಲ್ಲಿ ಉತ್ತಮ ಬದುಕಿಗೆ ನಾಂದಿಯಾಗಿದೆ ಎಂದರು.
ಪ್ರತಿಷ್ಠಾಪನೆ :
ಗ್ರಾಮದಲ್ಲಿ ಬೆಳಗಿನ ಜಾವದಲ್ಲಿ ಹಂಪಿ ಸಾವಿರ ದೇವರ ಮಹಾಂತ ಮಠದ ವಾಮದೇವ ಮಹಾಂತ ಶಿವಾಚಾರ್ಯ ಮಹಾಸ್ವಾಮಿ ಅವರ ದಿವ್ಯ ಸಾನಿಧ್ಯದಲ್ಲಿ ಆರಾಧ್ಯ ದೈವ ಶ್ರೀ ಮಲ್ಲಿಕಾರ್ಜುನ ನೂತನ ಮೂರ್ತಿ, ದೇವಾಲಯ, ಶ್ರೀ ವಿನಾಯಕ, ನಾಗದೇವತೆ, ಶಿವಲಿಂಗ, ನಂದೀಶ್ವರ ನೂತನ ಶಿಲಾಮೂರ್ತಿಗಳ ಪ್ರಾಣ ಪ್ರತಿಷ್ಠಾಪನೆ ಶುಭಗಳಿಗೆಯಲ್ಲಿ ಬುಧವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.
ಈ ಸಂದರ್ಭದಲ್ಲಿ ಗುಲ್ಬರ್ಗಾದ ಚಂದ್ರಶೇಖರ ಸ್ವಾಮೀಜಿ, ಹೆಚ್.ವೀರಾಪುರದ ಜಡೇಶತಾತ, ಮುಖಂಡರಾದ ಸದಾಶಿವಪ್ಪ, ಬಿ.ಪ್ರವೀಣ್ಕುಮಾರ, ಕೆ.ಬಿ.ವೇದಮೂರ್ತಿ, ಬಿ.ಮಹೇಶಗೌಡ, ಬಿ.ವಿ.ಗೌಡ, ಜಿ.ನಾಗರೆಡ್ಡಿ ಸೇರಿದಂತೆ ಸಕಲ ಸದ್ಭಕ್ತರು ಪಾಲ್ಗೊಂಡಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















