ಚಾಮರಾಜನಗರ/ ಗುಂಡ್ಲುಪೇಟೆ: ಪಟ್ಟಣದ ತಾಲೂಕು ಕಚೇರಿ ಮುಂಭಾಗ ರೈತರು ನಡೆಸುತ್ತಿರುವ ಅಹೋರಾತ್ರಿ ಧರಣಿ 10ನೇ ದಿನವೂ ಮುಂದುವರೆದಿದ್ದು, ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ, ಸೆಸ್ಕಾಂ ಎಂ.ಡಿ ಆಗಮಿಸಬೇಕೆಂದು ಪಟ್ಟು ಹಿಡಿದಿದ್ದಾರೆ.
ತಾಲೂಕು ಕಚೇರಿ ಮುಂದೆ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಧರಣಿ ನಡೆಸುತ್ತಿದ್ದರೂ ಸಹ ದಪ್ಪ ಚರ್ಮದ ಮೇಲಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ರೈತರ ಸಮಸ್ಯೆ ಆಲಿಸದೆ ಹಿನ್ನಲೆ ಧಿಕ್ಕಾರದ ಘೋಷಣೆ ಕೂಗಿ ಆಕ್ರೋಶ ಹೊರ ಹಾಕಿದರು.
ಈ ಸಂದರ್ಭದಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಶಿವಪುರ ಮಹದೇವಪ್ಪ ಮಾತನಾಡಿ, ವಿವಿಧ ಬೇಡಿಕೆ ಈಡೇರಿಗೆ ಒತ್ತಾಯಿಸಿ ಕಳೆದ 10 ದಿನಗಳಿಂದಲೂ ತಾಲೂಕು ಕಚೇರಿ ಮುಂದೆ ಧರಣಿ ನಡೆಸುತ್ತಿದ್ದರೂ ಸಹ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಆಗಮಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ಇದು ಬೇಜವಾಬ್ದಾರಿತನದ ನಡೆಯಾಗಿದೆ. ಕೂಡಲೇ ಉಸ್ತುವಾರಿ ಸಚಿವರು, ಜಿಲ್ಲಾಧಿಕಾರಿ ಹಾಗೂ ಸೆಸ್ಕಾಂ ಎಂಡಿ ಧರಣಿ ಜಾಗಕ್ಕೆ ಬಂದು ನಮ್ಮ ಸಮಸ್ಯೆ ಆಲಿಸದಿದ್ದರೆ ಪ್ರತಿಭಟನೆ ಉಗ್ರ ರೂಪ ಪಡೆದುಕೊಳ್ಳಲಿದೆ ಎಂದು ಎಚ್ಚರಿಕೆ ನೀಡಿದರು.
ಸಾಗುವಳಿ ವಿತರಣೆ ಯಾವ ಹಂತದಲ್ಲಿದೆ ಎಂದು ಮಾಹಿತಿ ಕೇಳಿದರೆ ತಹಶೀಲ್ದಾರ್ ತನ್ಮಯ್ ಧರಣಿ ಸ್ಥಳಕ್ಕೆ ಆಗಮಿಸದೆ ಬೇಜವಾಬ್ದಾರಿಯಿಂದ ವರ್ತಿಸುತ್ತಿದ್ದಾರೆ. ಇವರಿಗೆ ರೈತರ ಮೇಲೆ ಕಾಳಜಿ ಇಲ್ಲವಾದಲ್ಲಿ ತಾಲೂಕು ಬಿಟ್ಟು ತೊಲಗಲಿ ಎಂದು ಒತ್ತಾಯಿಸಿ, ಶಾಸಕ ಗಣೇಶಪ್ರಸಾದ್ ಕೂಡಲೇ ಸಾಗುವಳಿ ಕಮಿಟಿ ಸಭೆ ಕರೆದು ಅರ್ಹ ಫಲಾನುಭವಿಗಳಿಗೆ ಸಾಗುವಳಿ ನೀಡಲು ಮುಂದಾಗಬೇಕು ಎಂದು ಆಗ್ರಹಿಸಿದರು.
ಈ ವೇಳೆ ರೈತ ಸಂಘದ ತಾಲೂಕು ಅಧ್ಯಕ್ಷ ಹಂಗಳ ದಿಲೀಪ್, ಬೊಮ್ಮನಹಳ್ಳಿ ಲೋಕೇಶ್, ರಘು, ನಾಗರಾಜಪ್ಪ, ಬಸವೇಶ, ನಾಗರಾಜು, ಮಹಿಳಾ ತಾಲೂಕು ಅಧ್ಯಕ್ಷೆ ಬಸಮ್ಮ, ಸುರೇಶ್, ಸುರೇಶ ಪಡಗೂರು, ಸೋಮಶೇಖರ್, ಪ್ರಸಾದ್, ಹಕ್ಕಲಪುರ ಕುಮಾರ್, ಬಲಚಲವಾಡಿ ಮಹೇಶ್, ಭೀಮನಬೀಡು ಬಾಲಕೃಷ್ಣ, ಮಳವಳ್ಳಿ ಮಹೇಶ್, ಅಂಕಪ್ಪ, ಮಹೇಂದ್ರ, ಮಹದೇವಸ್ವಾಮಿ, ಕೆಂಪ ಸೇರಿದಂತೆ ಹಲವು ರೈತ ಮುಖಂಡರು ಹಾಜರಿದ್ದರು.
ವರದಿ ಗುಂಡ್ಲುಪೇಟೆ ಕುಮಾರ್



















