ಬೀದರ್ ಜಿಲ್ಲೆಯ ಬಸವಕಲ್ಯಾಣ : ಹುಬ್ಬಳ್ಳಿ ತಾಲೂಕಿನ ಇನಾಂ ವೀರಾಪೂರ ಗ್ರಾಮದಲ್ಲಿ ದಿ. 21/12/2025 ರಂದು ನಡೆದ ಮಾನ್ಯಾ ಎಂಬ ಯುವತಿಯ ಕೊಲೆಯನ್ನು ಖಂಡಿಸಿ ನಾಳೆ ದಿ. 03/01/2026 ರಂದು 11 ಗಂಟೆ 30 ನಿಮಿಷಕ್ಕೆ ಬಸವಕಲ್ಯಾಣ ನಗರದ ಗಾಂಧಿ ಚೌಕದಿಂದ ಡಾ. ಬಿ. ಆರ್. ಅಂಬೇಡ್ಕರ್ ವೃತ್ತದವರೆಗೆ ಕಪ್ಪುಪಟ್ಟಿ ಧರಿಸಿ ಮೌನ ಮೆರವಣಿಗೆ ಮೂಲಕ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಈ ಘಟನೆಯು ಆಸ್ಪೃಶ್ಯತೆ ಜೀವಂತವಾಗಿಡುವ ಹುನ್ನಾರವಾಗಿದ್ದು, ಈ ಘಟನೆಯಿಂದ ಮಾನವ ಕುಲಕೋಟಿ ತಲೆ ತಗ್ಗಿಸುವಂತಾಗಿದೆ. ತನ್ನ ಸ್ವಂತ ಮಗಳಾದ ಮಾನ್ಯಳು ಅಸ್ಪಶ್ಯ ಜನಾಂಗದ ಮಾದಿಗ ಜಾತಿಗೆ ಸೇರಿದ ಯುವಕನ ಜೊತೆ ಮದುವೆಯಾಗಿರುವುದನ್ನು ಸಹಿಸದ ಯುವತಿಯ ತಂದೆ ಪ್ರಕಾಶ ಗೌಡ ತನ್ನ ಮಗಳು ಗರ್ಭಿಣಿಯಾಗಿರುವುದನ್ನು ಲೆಕ್ಕಿಸದೆ ಕೊಡಲಿಯಿಂದ ಕೊಚ್ಚಿ ಕೊಲೆಗೈದಿರುವುದು ದೇಶವೇ ಬೆಚ್ಚಿಬೀಳಿಸುವಂತಹ ಘಟನೆಯಾಗಿದೆ.
ಸ್ತ್ರೀಕುಲ ಸ್ವತಂತ್ರಳಲ್ಲ ಎನ್ನುವುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಇಂತಹ ಘಟನೆಗಳು ಮರು ಕಳಿಸಿದಂತೆ ಸರಕಾರ ಕಠಿಣವಾದ ಕಾನೂನು ರೂಪಿಸುವುದು ಅವಶ್ಯಕವಾಗಿದೆ ಎಂದು ಈ ಪ್ರತಿಭಟನೆಯ ಮೂಲಕ ಒತ್ತಾಯಿಸುತ್ತೇವೆಂದು ಅಖಿಲ ಕರ್ನಾಟಕ ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷರಾದ ದತ್ತು ಎಲ್. ಭೆಂಡೆ ಹಾಗೂ ಗೌರವಾಧ್ಯಕ್ಷರಾದ ರಮೇಶ ಉಮಾಪುರೆ ರವರು ಮಾಧ್ಯಮದ ಮುಖಾಂತರ ತಿಳಿಸಿದ್ದಾರೆ.
ವರದಿ : ಶ್ರೀನಿವಾಸ ಬಿರಾದಾರ




















