ಕೊಪ್ಪಳ : ನಮ್ಮ ಸಮಾಜವನ್ನು ಜಾತಿ ಮತ್ತು ವರ್ಗ ರಹಿತ ನಿರ್ಮಾಣದ ಆಶಯವನ್ನು ಶಿವಶರಣೆ ಅಕ್ಕ ಮಹಾದೇವಿ ಹೊಂದಿದ್ದರು ಎಂದು ಪ್ರಾಚಾರ್ಯ ಡಾ. ಗಣಪತಿ ಲಮಾಣಿಯವರು ತಿಳಿಸಿದರು.
ನಗರದ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಶಿವಶರಣೆ ಅಕ್ಕ ಮಹಾದೇವಿ ಜಯಂತಿ ಆಚರಿಸಿ ಅವರು ಮಾತನಾಡಿದರು.
ಅಕ್ಕ ಮಹಾದೇವಿಯವರು 12 ನೇ ಶತಮಾನದ ವಚನಕಾರರಲ್ಲಿ ಪ್ರಮುಖರು. ಇವರು ವಚನಗಳ ಮೂಲಕ ಸಮಾಜದಲ್ಲಿರುವ ಅಸಮಾನತೆಯನ್ನು ಸಮಾಜಕ್ಕೆ ತಿಳಿಸುತ್ತಾ ಜನರನ್ನು ಜಾಗೃತಿಗೊಳಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ರಾಜ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಡಾ. ಗವಿಸಿದ್ದಪ್ಪ ಮುತ್ತಾಳ ಅವರು ಮಾತನಾಡುತ್ತ ಅಕ್ಕ ಮಹಾದೇವಿಯವರು ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ಉಡುತಡಿ ಗ್ರಾಮದಲ್ಲಿ ಜನಿಸಿದರು. ಇವರ ಕಾಲ ಸುಮಾರು ಕ್ರಿ. ಶ. 1130 ರಿಂದ 1160 ರ ಅವಧಿ ಆಗಿದೆ. ಇವರು ಲೌಕಿಕತೆಯನ್ನು ಬಿಟ್ಟು ಅಲೌಕಿಕತೆ ಕಡೆಗೆ ಗಮನ ಕೊಟ್ಟರು. ನಾವೆಲ್ಲರೂ ಅಕ್ಕ ಮಹಾದೇವಿ ಅವರ ತತ್ವಗಳನ್ನು, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳೋಣ ಎಂದು ಹೇಳಿದರು.
ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಹುಲಿಗೆಮ್ಮ ಅವರು ಮಾತನಾಡುತ್ತಾ ಅಕ್ಕ ಮಹಾದೇವಿ ಅವರು ಸುಮಾರು 430 ವಚನಗಳನ್ನು ರಚಿಸಿದ್ದಾರೆ. ಇವರ ವಚನಗಳು ಸರಳ, ಸುಂದರ ಮತ್ತು ಅಧ್ಯಾತ್ಮಕತೆಯಿಂದ ಕೂಡಿವೆ. ಇವರು ಶ್ರೀ ಶೈಲ ಚನ್ನ ಮಲ್ಲಿಕಾರ್ಜುನ ಅವರನ್ನು ತನ್ನ ಪತಿ ಎಂದು ಸ್ವೀಕರಿಸಿದ್ದರು. ಇವರು ಕನ್ನಡ ಮೊದಲ ಕವಿಯತ್ರಿಯಾಗಿದ್ದಾರೆ. ಅಕ್ಕ ಮಹಾದೇವಿ ನಮಗೆಲ್ಲರಿಗೂ ಮಾದರಿ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರಾದ ಡಾ. ನರಸಿಂಹ ಅವರು ಮಾತನಾಡುತ್ತಾ ಅಕ್ಕ ಮಹಾದೇವಿ ಅವರು ತಮ್ಮ ವಚನಗಳಲ್ಲಿ ಜಾತಿಯತೆ , ವರ್ಗ, ಲಿಂಗ ತಾರತಮ್ಯ ಮತ್ತು ಧರ್ಮ ಬೇಧಭಾವಗಳ ಕುರಿತು ವಚನಗಳನ್ನು ರಚಿಸಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಧ್ಯಾಕರಾದ ಶ್ರೀ ಮತಿ ನಾಗರತ್ನ ತಮ್ಮಿನಾಳ, ಶ್ರೀ ವಿಠೋಬ, ಡಾ.ಮಲ್ಲಿಕಾರ್ಜುನ, ಡಾ. ಪ್ರದೀಪ್ ಕುಮಾರ್, ಶುಭ, ಸುಮಿತ್ರಾ, ಸುಮಯ್ಯ, ಅಲ್ಲಭಕ್ಷ, ಹನುಮಪ್ಪ, ಶಿವಪ್ರಸಾದ್ ಹಾದಿಮನಿ, ಅನಿಲ ಪವಾರ, ರುದ್ರಾಕ್ಷಿ, ಡಾ.ಸುಧಾಕರ್, ಡಾ.ನಾಗಭೂಷಣಮ್ಮ, ಡಾ. ಸಂಗಪ್ಪ ಬ್ಯಾಳಿ, ಹಾಗೂ ಕಾಲೇಜಿನ ಎಲ್ಲಾ ಅತಿಥಿ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಕಾಲೇಜಿನ ಸಾಂಸ್ಕೃತಿಕ ಘಟಕದ ಸಂಚಾಲಕರಾದ ಡಾ. ಹುಲಿಗೆಮ್ಮ ಅವರು ನಿರೂಪಿಸಿ, ವಂದಿಸಿದರು.
- ಕರುನಾಡ ಕಂದ ಪತ್ರಿಕೆ




















