ಕಾನೂನು ಅಸ್ತ್ರ ಬಳಸಿ ಜನಪರ ಹೋರಾಟ ಹತ್ತಿಕ್ಕಲು ಸಾಧ್ಯವಿಲ್ಲ: ಮಲ್ಲಿಕಾರ್ಜುನ ಬಂಗ್ಲೆ ಎಚ್ಚರಿಕೆ
ತಾಳಿಕೋಟೆ: ಪಟ್ಟಣದ ವ್ಯಾಪ್ತಿಯಲ್ಲಿಯೇ ಪ್ರಜಾಸೌಧ ನಿರ್ಮಿಸಬೇಕೆಂದು ಆಗ್ರಹಿಸಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವು ಶುಕ್ರವಾರಕ್ಕೆ ಯಶಸ್ವಿಯಾಗಿ 59 ದಿನಗಳನ್ನು ಪೂರೈಸಿದೆ. ಮೈಲೇಶ್ವರ ಗ್ರಾಮದ ಸಮೀಪದ ದೂರದ ಪ್ರದೇಶಕ್ಕೆ ಕಚೇರಿ ಸ್ಥಳಾಂತರ ಮಾಡುವುದನ್ನು ವಿರೋಧಿಸಿ ನಡೆಯುತ್ತಿರುವ ಈ ಹೋರಾಟಕ್ಕೆ ಈಗ ಪತ್ರಕರ್ತರ ಸಂಘವು ಸಾಥ್ ನೀಡಿದ್ದು, ಹೋರಾಟ ಮತ್ತಷ್ಟು ಚುರುಕುಗೊಂಡಿದೆ.
ಹೋರಾಟಗಾರರ ಬೆನ್ನಿಗೆ ನಿಂತ ಪತ್ರಕರ್ತರ ಸಂಘ
ಹೋರಾಟದ ವೇದಿಕೆಗೆ ಭೇಟಿ ನೀಡಿ ಮಾತನಾಡಿದ ಕರ್ನಾಟಕ ಕಾರ್ಯನಿರತ ಪತ್ರಕರ್ತರ ಧ್ವನಿ ಸಂಘದ ರಾಜ್ಯಾಧ್ಯಕ್ಷ ಮಲ್ಲಿಕಾರ್ಜುನ ಬಂಗ್ಲೆ, “ಜನಸಾಮಾನ್ಯರ ಹಿತದೃಷ್ಟಿಯಿಂದ ನಡೆಯುತ್ತಿರುವ ಇಂತಹ ಪವಿತ್ರ ಹೋರಾಟಗಳನ್ನು ಕೇಸ್ ಅಥವಾ ಕಾನೂನು ಕ್ರಮಗಳ ಮೂಲಕ ಹತ್ತಿಕ್ಕಲು ಸಾಧ್ಯವಿಲ್ಲ. ಗಾಂಧೀಜಿಯವರ ಕಾಲದಿಂದಲೂ ನ್ಯಾಯಕ್ಕಾಗಿ ಹೋರಾಡುವವರು ಜೈಲು ಪಾಲಾಗಿದ್ದಾರೆ, ಅದಕ್ಕೆ ಹೆದರುವ ಅಗತ್ಯವಿಲ್ಲ,” ಎಂದು ಹೋರಾಟಗಾರರಲ್ಲಿ ಧೈರ್ಯ ತುಂಬಿದರು.
ಜನಪ್ರತಿನಿಧಿಗಳ ನಡೆಗೆ ಆಕ್ರೋಶ
”ಸಾರ್ವಜನಿಕರು ತಮ್ಮ ಕೆಲಸಗಳಿಗಾಗಿ 4-5 ಕಿಲೋಮೀಟರ್ ದೂರ ಅಲೆಯುವಂತಾದರೆ ಅದು ಆಡಳಿತದ ವೈಫಲ್ಯ. ಶಾಸಕರು ಕೂಡಲೇ ಸ್ಥಳಕ್ಕೆ ಬಂದು ಸೌಹಾರ್ದಯುತವಾಗಿ ಚರ್ಚಿಸಬೇಕು. ಪಟ್ಟಣದ ವ್ಯಾಪ್ತಿಯಲ್ಲಿರುವ ಸರ್ಕಾರಿ ಜಾಗದಲ್ಲಿಯೇ ಕಟ್ಟಡ ನಿರ್ಮಿಸಿ ಜನರಿಗೆ ಅನುಕೂಲ ಮಾಡಿಕೊಡಬೇಕು,” ಎಂದು ಬಂಗ್ಲೆ ಆಗ್ರಹಿಸಿದರು.
ಮುಖ್ಯಮಂತ್ರಿಗಳ ಗಮನಕ್ಕೆ ತರುವ ಭರವಸೆ: “ಈ ಹೋರಾಟ ಕೇವಲ ತಾಳಿಕೋಟೆಗೆ ಸೀಮಿತವಲ್ಲ. ಹೋರಾಟಗಾರರ ಬಳಿಯಿರುವ ದಾಖಲೆಗಳನ್ನು ಪಡೆದು, ನಾವು ಜಿಲ್ಲಾಧಿಕಾರಿಗಳಿಂದ ಹಿಡಿದು ಮುಖ್ಯಮಂತ್ರಿಗಳವರೆಗೆ ಮಾತುಕತೆ ನಡೆಸಲಿದ್ದೇವೆ. ಒಂದು ವೇಳೆ ಉಪವಾಸ ಸತ್ಯಾಗ್ರಹ ಆರಂಭವಾದರೆ ಪತ್ರಕರ್ತರೂ ಇದರಲ್ಲಿ ಭಾಗಿಯಾಗಲಿದ್ದಾರೆ,” ಎಂದು ಅವರು ಬೆಂಬಲ ಸೂಚಿಸಿದರು.
ಗಣ್ಯರ ಉಪಸ್ಥಿತಿ :
ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಎಸ್.ಎಸ್. ಪಾಟೀಲ, ಧಾರವಾಡ ಜಿಲ್ಲಾಧ್ಯಕ್ಷ ಸಂಗನಗೌಡ ಹೂವನ್ನವರ, ವಿಜಯಪುರ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದು, ಜಿಲ್ಲಾ ಉಪಾಧ್ಯಕ್ಷ ಸಿದ್ದು ಕಲ್ಲೂರ, ಬಸವರಾಜ ಪಡಶೆಟ್ಟಿ, ಅಶೋಕ ಕಲ್ಯಾಣಶೆಟ್ಟಿ ಹಾಗೂ ಹೋರಾಟ ಸಮಿತಿಯ ಪ್ರಮುಖರು ಮತ್ತು ನೂರಾರು ಸಾರ್ವಜನಿಕರು ಭಾಗವಹಿಸಿದ್ದರು.
ವರದಿ ನಜೀರ್ ಚೋರಗಸ್ತಿ, ತಾಳಿಕೋಟೆ




















