ಬೀಳಗಿ : ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯ. ಅಧರ್ಮ, ದೌರ್ಜನ್ಯ, ದಬ್ಬಾಳಿಕೆಗಳನ್ನು ಮನೋಜ್ಞವಾಗಿ ಅಭಿನಯಿಸಿ ಜನರಲ್ಲಿ ಜಾಗೃತಿ ಮೂಡಿಸುವ ಕಲಾವಿದರ ಸಮಾಜ ಮುಖಿ ಸೇವೆ ಅಮೋಘವಾದದ್ದು ಎಂದು ಮುಗಳಖೋಡದ ಶ್ರೀ ಸಿದ್ಧಾರೂಢ ಭಾರತಿ ಆಶ್ರಮದ ಪೂಜ್ಯರಾದ ಶರಣಬಸವ ಶಾಸ್ತ್ರಿಗಳು ಹೇಳಿದರು.
ಅವರು ಬೀಳಗಿ ತಾಲೂಕಿನ ಎಸ್. ಕೆ. ಕೊಪ್ಪ ಗ್ರಾಮದಲ್ಲಿ ದುರ್ಗಾದೇವಿಯ ಅಗ್ನಿ ಪ್ರವೇಶ ಹಾಗೂ ಉಡಿ ತುಂಬುವ ಕಾರ್ಯಕ್ರಮದ ನಿಮಿತ್ಯ ಡಾ. ಬಿ ಆರ್ ಅಂಬೇಡ್ಕರ್ ತರುಣ ನಾಟ್ಯ ಸಂಘದವರು ಆಯೋಜಿಸಿದ ” ರೈತ ಹರಿಸಿದ ರಕ್ತದೋಕುಳಿ ” ನಾಟಕದ ಉದ್ಘಾಟನಾ ಸಮಾರಂಭದ ಸಮ್ಮುಖತ್ವವನ್ನು ವಹಿಸಿ ಸಸಿಗೆ ನೀರೆರೆದು ಮಾತನಾಡುತ್ತಾ ನಾಟಕ ಕಲೆಯು ಅದೊಂದು ನಮ್ಮ ಬದುಕಿನ ಪ್ರತಿಬಿಂಬ. ರಂಗಭೂಮಿಯಲ್ಲಿ ಬರುವ ಸೃಜನಾತ್ಮಕ ಅಂಶಗಳನ್ನು ಅಳವಡಿಸಿಕೊಂಡು ಸಾಮಾಜಿಕ ನ್ಯೂನ್ಯತೆಗಳನ್ನು ತಿದ್ದುವಲ್ಲಿ ಇಂದಿನ ಯುವಕರು ಮುಂದೆ ಬರಬೇಕೆಂದರು. ಮುಂದುವರೆದು ಮಾತನಾಡುತ್ತಾ ರಂಗ ಭೂಮಿ ಕಲೆಯು ಪವಿತ್ರವಾದದ್ದು. ಇಲ್ಲಿ ದ್ವಂದ್ವಾರ್ಥಕ್ಕೆ ಅಶ್ಲೀಲತೆಗೆ ಅವಕಾಶ ಕೊಡಬಾರದು ಎಂದರು. ಪಾವನ ಸನ್ನಿಧಾನ ವಹಿಸಿದ ಪರಮಪೂಜ್ಯರಾದ ಹಿರೇಮಠದ ಓಂಕಾರಯ್ಯ ಶ್ರೀಗಳು ಜ್ಯೋತಿಯನ್ನು ಬೆಳಗಿಸಿ ಮಾತನಾಡಿ ವ್ಯಸನ ಮುಕ್ತ ಸಮಾಜ ನಿರ್ಮಾಣಕ್ಕೆ ಯುವಕರು ಕೈ ಜೋಡಿಸಬೇಕೆಂದರು. ಜೆಮ್ಮ ಶುಗರ್ ದ ವೆಂಕಣ್ಣ ವಜ್ಜರಮಟ್ಟಿ ಅಧ್ಯಕ್ಷತೆ ವಹಿಸಿದ್ದರು.ನಿವೃತ್ತ ಡಿ.ವೈ.ಎಸ್.ಪಿ. ವಿಜಯಕುಮಾರ ಮಡಿವಾಳ ಉದ್ಘಾಟಿಸಿದರು.
ಗ್ರಾಮದ ಅನೇಕ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಡಾ. ಬಿಆರ್ ಅಂಬೇಡ್ಕರ್ ತರುಣ ಸಂಘದ ಮುಖಂಡರಾದ ರಾಮಚಂದ್ರಪ್ಪ ಅಸೂದೆ, ಹಿರಿಯ ಭಜನಾ ಕಲಾವಿದರಾದ ರಾಮನಗೌಡ ವಜ್ಜರಮಟ್ಟಿ ಶ್ರೀಗಳನ್ನು ಹಾಗೂ ಸಾಧಕ ವಿದ್ಯಾರ್ಥಿಗಳನ್ನು ಸತ್ಕರಿಸಿದರು. ಕಲಾವಿದರು ಅಭಿನಯದ ಮೂಲಕ ಜನರ ಮನಸನ್ನು ಸೆಳೆಯುವಲ್ಲಿ ಯಶಸ್ವಿಯಾದರು.




















