ಕೆರೆಗಳ ಹೂಳು ತೆಗೆದು ದುರಸ್ತಿ ಮಾಡಿ ನೀರು ಸಂಗ್ರಹಿಸುವುದರಿಂದ ಗ್ರಾಮೀಣ ಭಾಗದ ಅಂತರ್ಜಲ ಮಟ್ಟ ಹೆಚ್ಚಾಗುವುದರೊಟ್ಟಿಗೆ ರೈತರಿಗೆ ಮತ್ತು ಜಾನುವಾರುಗಳಿಗೆ ಕುಡಿಯುವ ನೀರಿಗೆ ಅನುಕೂಲವಾಗಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ತಾಲೂಕು ಕ್ಷೇತ್ರ ಯೋಜನಾಧಿಕಾರಿ ವಸಂತ ಎಸ್ ರವರು
ಸಿರುಗುಪ್ಪ ತಾಲೂಕಿನ ಕೊಂಚಿಗೇರಿ ಗ್ರಾಮ ಪಂಚಾಯತಿ ವ್ಯಾಪ್ತಿಯ ದಾಸಪುರ ಗ್ರಾಮದ ದಾಸಪುರ ಕೆರೆ ಪುನಃಶ್ಚೇತನ ಮಾಡುವ ಬಗ್ಗೆ ಕೆರೆ ಸಮಾಲೋಚನಾ ಸಭೆ ಉದ್ಘಾಟಿಸಿ ಮಾತನಾಡಿದರು.
ನಮ್ಮೂರು ನಮ್ಮ ಕೆರೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿಯವರ ಕನಸಿನ ಯೋಜನೆಯಾಗಿದ್ದು, ಹತ್ತು ವರ್ಷಗಳಿಂದ ರಾಜ್ಯಾದ್ಯಂತ ಬರಗಾಲದ ಸನ್ನವೇಶ ನೀರಿನ ಮಹತ್ವಗಳನ್ನರಿತು ಜಾರಿಗೊಳಿಸಿದ್ದಾರೆ. ಈಗಾಗಲೇ ನಮ್ಮೂರು ನಮ್ಮ ಕೆರೆ ಕಾರ್ಯಕ್ರಮದಡಿ 1000 ಕೆರೆಗಳಿಗೆ ಜೀವ ತುಂಬಲಾಗಿದೆ. ಕೆರೆಗಳನ್ನು ಸಂರಕ್ಷಿಸುವಂತೆ ಕರೆ ನೀಡಿ ದಾಸಪುರ ಕೆರೆಗೆ ಗ್ರಾಮಸ್ಥರ ಸಹಕಾರದೊಂದಿಗೆ ಮರುಜೀವ ನೀಡಲಿದ್ದೇವೆ ಎಂದರು.
ನಂತರ ಕೆರೆ ಅಭಿವೃದ್ಧಿ ಸಮಿತಿ ರಚನೆ ಮಾಡಿದ್ದು, ಸಮಿತಿಯ ಗೌರವ ಅಧ್ಯಕ್ಷರಾಗಿ ದೊಡ್ಡ ಮುದುಕಣ್ಣ, ಅಧ್ಯಕ್ಷರಾಗಿ ಬುಳ್ಳಪ್ಪ, ಉಪಾಧ್ಯಕ್ಷರಾಗಿ ಈಶ್ವರಪ್ಪ, ಕೋಶಾಧಿಕಾರಿ ಡಿ ನಿರುಪಾದಿ, ಸದಸ್ಯರಾಗಿ ಟಿ ಹನುಮಂತ, ಬಿ ರುದ್ರಪ್ಪ, ಟಿ ಚಂದ್ರಪ್ಪ, ಬಸವರಾಜ, ಡಿ ರುದ್ರಪ್ಪ, ಟಿ ಕೇಶಪ್ಪ, ಜಿ ರುದ್ರಪ್ಪ, ಜಿ ಶೇಖರಪ್ಪ ಗ್ರಾಮಸ್ಥರು ಮತ್ತು ರೈತರು ಆಯ್ಕೆ ಮಾಡಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಲೀಲಾವತಿ ಮಾತನಾಡಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಅನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಮಾಡುತ್ತಿದ್ದು ಗ್ರಾಮಸ್ಥರ ಸಹಕಾರದಿಂದ ಕೆರೆ ಪುನಃಶ್ಚೇತನ ಮಾಡುವ ಕಾರ್ಯ ಕೈಗೆತ್ತಿಕೊಂಡಿರುವುದು ಸಂತೋಷದ ಸಂಗತಿ ಆಗಿದೆ ಎಂದರು.
ಈ ಸಂದರ್ಭದಲ್ಲಿ ಪಂಚಾಯತ ಅಭಿವೃದ್ಧಿ ಅಧಿಕಾರಿ ಲೀಲಾವತಿ, ಕೆರೆ ಅಭಿಯಂತರರಾದ ಸತೀಶ, ಕೃಷಿ ಮೇಲ್ವಿಚಾರಕ ವೀರೇಶ, ವಲಯದ ಮೇಲ್ವಿಚಾರಕ ಶಿವಪ್ಪ ಪೂಜಾರಿ, ಸೇವಾಪ್ರತಿನಿಧಿ ಹೊನ್ನೂರಸ್ವಾಮಿ, ಗ್ರಾಮಸ್ಥರು, ರೈತರು ಉಪಸ್ಥಿತರಿದ್ದರು.
ವರದಿ : ಮಸೀದಿ, ಅಬ್ದುಲ್ ಗೌಸ್, ಸಿರುಗುಪ್ಪ



















