ಕಿಟಕಿಯಿಂದಾಚೆ ಇಣುಕಿದಾಗ ಹಜಾರೆಯ ಬೀದಿಗೆ ಅವಳಿಲ್ಲ,
ಅವಳ ನೆನಪಿನ ನೆರಳು ಸಾಯಂಕಾಲ ಸದಾ ಆವರಿಸುತ್ತೆ,
ಆ ಇಳಿ ಸಂಜೆಗೆ ಗೆಳೆಯರ ಬಳಗ ಬಿಟ್ಟು ಒಂಟಿಯಾಗಿ ಕಾಯುತ್ತೇನೆ.
ನೋಡು ಈ ಅದೃಷ್ಟ ಎಷ್ಟು ಜನರ ಪಾಲಿಗಿದ್ದೀತು. ನೀನ್ಯಾರೇ ಹುಡುಗಿ, ಕೈ ಹಿಡಿದು ಓಡಾಡಲಿಲ್ಲ, ನಗಾಡಿಕೊಂಡು ಮಾತಾಡಲಿಲ್ಲ, ಆಗೊಮ್ಮೆ ಈಗೊಮ್ಮೆ ಆಡಿದ ಮಾತುಗಳು ಅಷ್ಟೇ, ಆ ಕ್ಷಣದ ನೆನಪು ಸಾಯೋ ಹಂತದಲ್ಲಿದ್ದಾಗ ಪುನಃ ನೆನಪಿಸಿ ಬದುಕಿಸಿಕೊಳ್ಳುತ್ತೇನೆ, ಇಷ್ಟೆಲ್ಲಾ ಆಗಿದ್ದರೂ ನೀ ಮತ್ತೆ ಮತ್ತೆ ಕಾಡುತ್ತೀ ಒಂಟಿ ಮನಸ್ಸು ನಿನ್ನೇ ಬಯಸುತ್ತೆ,…
ಅಂದು ಮೋಡ ಮುಸುಕಾಗಿ ಮಳೆಯಾಗಿತ್ತು, ಊರಿನ ಬೀದಿ ಕೆಸರಿನಿಂದ ತುಂಬಿತ್ತು ಗೆಳತಿಯರ ಜೊತೆ ಬರಿಗಾಲಿನಲ್ಲಿ ನೀ ನೀರಿಗೆ ಬಂದಿದ್ದು ಇನ್ನೂ ನೆನಪಿದೆ ನಂಗೆ, ನಾ ಬಾವಿಯ ಮುಂದಿನ ಗುಡಿಯ ಕಟ್ಟೆ ಮೇಲೆ ಸ್ನೇಹಿತರೊಂದಿಗೆ ಕೂತಾಗ, ನೀ ನೋಡಿಯೂ ನೋಡದಂತೆ ಸಾಗಿದ್ದೆ, ಆ ಕಣ್ಣೋಟ ಇಂದಿಗೂ ಎದೆಗೆ ಚುಚ್ಚುತ್ತೆ , ಆ ಕಿವಿಯ ಜುಮುಕಿ ಕಾಡುತ್ತೆ ನನ್ನ, ಅಂದು ನೀ ಮುಡಿದ ಮಲ್ಲಿಗೆಯ ಘಮ ಇಂದಿಗೂ ಸುವಾಸನೆ ಬೀರುತ್ತೆ ಒಂಟಿಯಾಗಿ ಕುಳಿತು ನೆನಪಾದಾಗ, ಅದೇಷ್ಟು ಒಲವ ದೀಪಗಳು ಆ ರಾತ್ರಿಗೆ, ಅಲ್ಲಿ ಯಾವುದು ಕಮ್ಮಿಯಿರಲಿಲ್ಲ, ಒಲವ ಬಿತ್ತಿದ ಎದೆಯಲ್ಲಿ ಅರಳುವುದು ನೀನೆಂಬ ಮೋಹದ ಮಾಯೆಯ ಮಲ್ಲಿಗೆ, .. ಇಗೋ ನೋಡಿಲ್ಲಿ ಆ ದಾರಿಗೆ ನಡೆದ ಬೀದಿಯಲ್ಲಿ ಇಂದೇಕೋ ಒಂಟಿತನ ಇದೆ, ಆ ದಾರಿಗೆ ನಡೆಯಲು ನೆರಳೂ ಕೂಡ ಸಾತ್ ಕೊಡುತ್ತಿಲ್ಲ … ಕಾಯುವೆ ವಸಂತಗಳು ಕಳೆದು ತಿರುಗಿ ಬರೋವರೆಗೂ, ಆ ಒಂಟಿ ನೆರಳು ಜೊತೆಯಾಗಬಹುದೆಂಬ ಹುಸಿ ನಿರೀಕ್ಷೆಯಿಂದ …
ಇಗೋ ನೋಡು , ಲೆಕ್ಕಕ್ಕೆ ಬಾರದೆ ಸಾಗಿದ ದಿನಗಳ ಕುರಿತು ಪ್ರತಿ ಸಾಯಂಕಾಲ ಶಪಿಸುತ್ತೇನೆ.
ಆ ನಿನಗಾಗಿ ಕಾಯುವ ಅದೃಷ್ಟ ಮತ್ತೊಮ್ಮೆ ಎದುರಾದರೆ ಜೀವ ಒತ್ತೆಯಿಟ್ಟು ಮರಳಿ ಪಡೆಯುತ್ತೇನೆ,
ನೀ ಸದಾ ಕಾಡುವ ವನ ಪುಷ್ಪದಂತೆ,
ಆ ಸಾಯಂಕಾಲ ನೀನು ತಿರುಗಿ ಬರಬಹುದೆಂದು ಕಾದು ಕುಳಿತಿದ್ದೆ , ನಿನ್ನ ಗೆಳತಿಯರೆಲ್ಲ ಎದುರಾದರು ಕಣ್ಣು ನಿನ್ನೇ ಹುಡುಕುತ್ತಿತ್ತು ನೀ ಬಾರದೇ ಇದ್ದದ್ದನ್ನು ಕಂಡು, ಜೀವದ ಕಟ್ಟೆಯೊಡೆದು ನಿರಾಸೆಯ ಮೌನ ಮೂಡಿತ್ತು, ಆ ಬೇಸರ ನಿನಗೂ ತಟ್ಟಿದರೆ ಸಮಾಧಾನ ಮಾಡಲಾದರೂ ಬರುತ್ತಿದ್ದೇನೋ ಅಲ್ವಾ ಹುಡುಗಿ …??
ಬಿಡು ಬಿಡು ಕಳೆದ ದಿನಗಳು, ಅವುಗಳನ್ನ ನೆನೆದು ಶಪಿಸಿದರೆ, ಆ ದಿನಗಳು ನಮ್ಮ ಪಾಲಿಗೆ ಸುಂದರ ನೆನಪಾಗಿರಲಾರವು, ಅಂದ ಹಾಗೆ, ನೀ ಊರಿಗೆ ಬರುತ್ತಿದ್ದೀಯಂತೆ, ಬರುವಾಗ ಮರೆಯದಂತೆ ಬಾ , ನನ್ನ ಮರೆತರೂ ಆ ದಿನಗಳು ನಾ ನಿನಗಾಗಿ ಹಜಾರೆಯ ಬೀದಿಗಳಲ್ಲಿ ಕಾಯುತ್ತಿದ್ದೆ ಎಂದು ಮರೆಯಬೇಡ…
ನಿನ್ನ ಬರುವಿಕೆಯ ನಿರೀಕ್ಷೆಯೊಂದಿಗೆ ನಾ ….
- ಆನಂದಿ ರಾಜಶೇಖರ




















