ಬಳ್ಳಾರಿ / ಕಂಪ್ಲಿ : ತುಂಗಭದ್ರಾ ಜಲಾಶಯದ ಬಲದಂಡೆ ಕೆಳಮಟ್ಟದ ಕಾಲುವೆಗೆ ಬಚಾತ್ ಆಯೋಗದ ಪ್ರಕಾರ ಪೂರ್ಣ ಪ್ರಮಾಣದ ನೀರನ್ನು ಹರಿಸಿದರೆ ಮಾತ್ರ ರಾಜ್ಯ ರೈತರಿಗೆ ಅನುಕೂಲವಾಗಲಿದೆ ಎಂದು ಶಾಸಕ ಜೆ.ಎನ್.ಗಣೇಶ್ ಇಂದು ಅಧಿವೇಷನದಲ್ಲಿ ಸರ್ಕಾರವನ್ನು ಆಗ್ರಹಿಸಿದರು,
ಬೆಂಗಳೂರಿನ ವಿಧಾನಸೌಧದಲ್ಲಿ ನಡೆದ ಅಧಿವೇಷನದಲ್ಲಿ ಮಾತನಾಡಿದ ಕಂಪ್ಲಿ ಶಾಸಕರಾದ ಜೆ.ಎನ್.ಗಣೇಶ್ ಅವರು ಆ.11 ರಂದು ಮುನಿರಾಬಾದಿನಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ಜರುಗಿತು.
ಆ ಸಭೆಯಲ್ಲಿ ನಮಗೆ ಕರ್ನಾಟಕ ಕೋಟಾ 750 ಕ್ಯೂಸೆಕ್ಸ್ ಮತ್ತು ಆಂದ್ರ ಕೋಟಾ 750 ಕ್ಯೂಸೆಕ್ಸ್ ನೀರು ಬಿಡುವಂತೆ ಬಚಾವತ್ ಆಯೋಗದ ಪ್ರಕಾರ ಕಾಲುವೆ ನಿರ್ಮಾಣವಾಗಿದೆ. ಆದರೆ ಆಂದ್ರ ಬೋರ್ಡಿನವರು ನೀರು ತೆಗೆದುಕೊಂಡಿಲ್ಲ. ಕೇವಲ ರಾಜ್ಯದ ಕೋಟಾ ಮಾತ್ರ ನೀರು ಬಿಟ್ಟಿರುವುದರಿಂದ ನಮ್ಮ ರೈತರಿಗೆ ಅನುಕೂಲವಾಗುತ್ತಿಲ್ಲ ನಮ್ಮ ಭಾಗದಲ್ಲಿ ಈಗಾಗಲೇ ಭತ್ತದ ಸಸಿ ಮಡಿಗಳನ್ನು ಮಾಡಿದ್ದಾರೆ, ಕೆಲವು ಕಡೆಗಳಲ್ಲಿ ಭತ್ತದ ನಾಟಿ ಆರಂಭವಾಗಿರುವುದರಿಂದ ಕೂಡಲೇ ಎರಡು ನೀರು ತೆಗೆದುಕೊಂಡು ಹೋದರೆ ಮಾತ್ರ ಅನುಕೂಲವಾಗಲಿದೆ. ಜಿಲ್ಲೆಯ ನಾಲ್ಕು ತಾಲ್ಲೂಕುಗಳಿಗೆ ಅನುಕೂಲವಾಗಲಿದೆ. ಕೂಡಲೇ ನೀರನ್ನು ಬಿಡದಿದ್ದರೆ ನಮ್ಮ ರೈತರು ವಿಷ ಕುಡಿಯುವ ಪರಿಸ್ಥಿತಿ ಇದೆ. ಆದ್ದರಿಂದ ಆಂದ್ರಪ್ರದೇಶದ ನೀರಾವರಿ ಸಚಿವರೊಂದಿಗೆ ಚರ್ಚಿಸಿ ಕೂಡಲೇ ಕಾಲುವೆಗೆ ಪೂರ್ಣ ಪ್ರಮಾಣದ ನೀರನ್ನು ಮತ್ತು ತುಂಗಭದ್ರಾ ನದಿಗೆ 500 ಕ್ಯೂಸೆಕ್ಸ್ ನೀರನ್ನು ಬಿಡಿಸಬೇಕೆಂದು ಮನವಿ ಮಾಡಿದರು.
ಇದಕ್ಕೆ ಉತ್ತರಿಸಿದ ಜಲಸಂಪನ್ಮೂಲ ಸಚಿವರಾದ ಚೆಲುವನಾರಾಯಣಸ್ವಾಮಿ ಅವರು ಕಳೆದ ಮೂರು ದಿನಗಳಿಂದ ಶಾಸಕ ಗಣೇಶ್ ಮತ್ತು ಜಿಲ್ಲಾ ಸಚಿವರು ತಮ್ಮೊಂದಿಗೆ ನೀರಿನ ಸಮಸ್ಯೆಯನ್ನು ವಿವರಿಸಿದ್ದು, ನಾನು ಕೂಡ ಈಗಾಗಲೇ ಆಂದ್ರಪ್ರದೇಶ ನೀರಾವರಿ ಸಚಿವರೊಂದಿಗೆ ಚರ್ಚಿಸಿದ್ದೇನೆ. ಮುಖ್ಯಮಂತ್ರಿಗಳು ಕೂಡ ಅಲ್ಲಿನ ಸಚಿವರೊಂದಿಗೆ ಚರ್ಚಿಸಲಾಗಿದೆ. ಈಗಾಗಲೇ ಅಲ್ಲಿನ ಸಚಿವರೂ ಸಹಿತ ಎರಡು ರಾಜ್ಯಗಳ ಪಾಲಿನ ನೀರನ್ನು ಒಟ್ಟಿಗೆ ಹರಿಸುವುದಕ್ಕೆ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಇನ್ನು ಎರಡು ಮೂರು ದಿನಗಳಲ್ಲಿ ನೀರನ ಸಮಸ್ಯೆಯನ್ನು ಬಗೆಹರಿಸುವುದಾಗಿ ಭರವಸೆಯನ್ನು ನೀಡಿದರು.
ವರದಿ : ಜಿಲಾನಸಾಬ್ ಬಡಿಗೇರ್




















