
ಬಳ್ಳಾರಿ / ಕಂಪ್ಲಿ : ಪವಿತ್ರ ಈದ್ ಮಿಲಾದ್ ಹಬ್ಬದ ಅಂಗವಾಗಿ ಪಟ್ಟಣದ ಕಂಪ್ಲಿ ಹಾರ್ಡ್ ವೇರ್ ವತಿಯಿಂದ ಕಂಪ್ಲಿ – ಗಂಗಾವತಿ ರಸ್ತೆಯಲ್ಲಿರುವ ನವಜೀವನ ವೃದ್ಧಾಶ್ರಮದಲ್ಲಿ ಆಶ್ರಯ ಪಡೆದಿರುವ ಹಿರಿಯ ಜೀವಗಳಿಗೆ ಅನ್ನದಾಸೋಹ (ಉಚಿತ ಅನ್ನದಾನ) ಸೇವೆಯನ್ನು ಅತ್ಯಂತ ಶ್ರದ್ಧೆ ಮತ್ತು ಸೌಹಾರ್ದತೆಯಿಂದ ಹಮ್ಮಿಕೊಳ್ಳಲಾಗಿತ್ತು. ಪ್ರವಾದಿ ಮೊಹಮ್ಮದರ ಜನ್ಮದಿನೋತ್ಸವದ ನೆನಪಿಗಾಗಿ ಹಮ್ಮಿಕೊಂಡಿದ್ದ ಈ ವಿಶೇಷ ಕಾರ್ಯಕ್ರಮದಲ್ಲಿ ಆಶ್ರಮದ ಎಲ್ಲಾ ಹಿರಿಯರಿಗೆ ಪೌಷ್ಟಿಕ ಹಾಗೂ ಮೃದುವಾದ ಹಬ್ಬದ ವಿಶೇಷ ಭೋಜನವನ್ನು ಸ್ವತಃ ಮಾಲೀಕರಾದ ಎಸ್. ಕೆ. ಅಜುರುದ್ಧೀನ್ ಹಾಗೂ ಎಸ್. ಕೆ. ಇಂತಿಯಾಜ್ ಊಟವನ್ನು ಬಡಿಸಿ ಸತ್ಕರಿಸಿದರು. ಕೇವಲ ಆಹಾರ ನೀಡುವುದಷ್ಟೇ ಅಲ್ಲದೆ, ಹಿರಿಯರೊಂದಿಗೆ ಸಾಂತ್ವನದ ನುಡಿಗಳನ್ನಾಡಿ, ಅವರ ಆರೋಗ್ಯ ವಿಚಾರಿಸಿ ಸ್ವಲ್ಪ ಸಮಯ ಕಳೆದದ್ದು ವಿಶೇಷವಾಗಿತ್ತು.
ಈ ಸಂದರ್ಭದಲ್ಲಿ ಮಾತನಾಡಿದ ಎಸ್. ಕೆ. ಇಂತಿಯಾಜ್, “ಹಬ್ಬ ಎಂದರೆ ಕೇವಲ ಸಂಭ್ರಮಿಸುವುದಷ್ಟೇ ಅಲ್ಲ, ಸಮಾಜದಲ್ಲಿರುವ ನಿರಾಶ್ರಿತರು ಮತ್ತು ಹಿರಿಯರಿಗೆ ಪ್ರೀತಿ ಹಾಗೂ ಆಸರೆ ನೀಡುವುದೇ ನಿಜವಾದ ಹಬ್ಬದ ಪ್ರವಾದಿ ಮೊಹಮ್ಮದ್ ರವರ ಸಂದೇಶವಾಗಿದೆ. ಹಿರಿಯರ ಮುಖದಲ್ಲಿ ಮೂಡಿದ ನಗು ನಮಗೆ ತೃಪ್ತಿ ತಂದಿದೆ” ಎಂದು ತಿಳಿಸಿದರು. ಆಶ್ರಮದ ವ್ಯವಸ್ಥಾಪಕರು ಹಾಗೂ ಹಿರಿಯ ನಾಗರಿಕರು ಇವರ ಈ ನಿಸ್ವಾರ್ಥ ಸೇವೆಯನ್ನು ಮುಕ್ತಕಂಠದಿಂದ ಶ್ಲಾಘಿಸಿ, ಹರಸಿದರು. ಕಾರ್ಯಕ್ರಮದಲ್ಲಿ ಬಡಿಗೇರ್ ಜಿಲಾನಸಾಬ್, ಆಶ್ರಮದ ಸಿಬ್ಬಂದಿ ವರ್ಗ ಉಪಸ್ಥಿತರಿದ್ದರು.
ವರದಿ : ಜಿಲಾನಸಾಬ್ ಬಡಿಗೇರ್




















