ಜೆಸ್ಕಾಂ ಇಲಾಖೆ ಅಧಿಕಾರಿ ವೀರೇಶ್ ದಳವಾಯಿಗೆ ಅಮಾನತ್ತುಗೊಳಿಸುವಂತೆ ಇಇಗೆ ಮನವಿ :
ಸುರಪುರ ಸುದ್ದಿ : ಹುಣಸಗಿ ತಾಲೂಕಿನ ಕೆ.ತಳ್ಳಳ್ಳಿ ಗ್ರಾಮದಲ್ಲಿ ರೈತರ ಜಮೀನಿನಲ್ಲಿರುವ ಸರ್ವೇ ನಂ 45 ರಲ್ಲಿ ಕಳೆದ 25 ದಿನಗಳ ಹಿಂದೆ 25ಕೆವಿ ಟಿ.ಸಿ. ಸುಟ್ಟಿರುವ ಬಗ್ಗೆ ಇಲಾಖೆಯ ಟೋಲ್ ಫ್ರಿ ನಂ. 1912 ಕ್ಕೆ ದಿನಾಂಕ : 06-08-2026 ಕರೆ ಮಾಡಿ ಕಂಪ್ಲೆಂಟ್ ಕೊಟ್ಟಿರುತ್ತೇನೆ, ಆದರೆ ಸದರಿ ಹುಣಸಗಿ ಸೆಕ್ಷನ್ ಆಫೀಸರ್ ವೀರೇಶ್ ದಳವಾಯಿ ಯಾವುದೇ ಟಿ.ಸಿ. ಯನ್ನು ಕೂರಿಸದೆ ಟಿ.ಸಿ. ಕೂಡಿಸಿದ್ದೇವೆಂದು ದಿನಾಂಕ 21-08-2026 ರಂದು ಕಂಪ್ಲೆಂಟ್ ಕ್ಲೋಜ್ ಮಾಡಿ ರೈತರಿಗೆ ಅನ್ಯಾಯವೆಸಗಿದ್ದು ತೀವ್ರ ಖಂಡನೀಯ, ಇಂಥ ಭ್ರಷ್ಟ ಅಧಿಕಾರಿಯ ಮೇಲೆ ಶಿಸ್ತು ಕ್ರಮ ಕೈಗೊಂಡು ಅಮಾನತ್ತುಗೊಳಿಸುವಂತೆ ಜೆಸ್ಕಾಂ ವಿಭಾಗೀಯ ಕಾರ್ಯ ನಿರ್ವಾಹಕ ಅಧಿಕಾರಿ ರಾಜಶೇಖರ ಬಿಳವಾರ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ಮನವಿ ಪತ್ರ ಸಲ್ಲಿಸಿ ಮಾತನಾಡಿದ ಪತ್ರಕರ್ತ ರಾಘವೇಂದ್ರ ಮಾಸ್ತರ ರವರು ಕಳೆದ 25 ದಿನಗಳಿಂದ ಜೆಸ್ಕಾಂ ಇಲಾಖೆಯ ಅಧಿಕಾರಿಗಳು ರೈತರೊಂದಿಗೆ ಚೆಲ್ಲಾಟ ಆಡುತ್ತಿರುವುದು ಖಂಡನೀಯ, ಸದ್ಯ ನಮ್ಮ ತಾಲೂಕಿನಾದ್ಯಂತ ಬರಗಾಲ ಪರಿಸ್ಥಿತಿ ನಿರ್ಮಾಣವಾಗಿದೆ, ಕೊಳವೆ ಬಾವಿಗಳನ್ನು ನಂಬಿಕೊಂಡು ಬೆಸಾಯ ಮಾಡುತ್ತಿರುವ ರೈತರು ತುಂಬಾ ಸಂಕಷ್ಟದಲ್ಲಿದ್ದಾರೆ. ಅದರಲ್ಲೂ ಸಮಯಕ್ಕೆ ಸರಿಯಾಗಿ ವಿದ್ಯುತ್ ಬರದಿದ್ದರೆ ಹೇಗೆ..? ಕಳೆದ 25 ದಿನಗಳ ಹಿಂದೆ ಟಿಸಿ ಸುಟ್ಟಿರುವ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದೆ.
ಜೊತೆಗೆ ಡಾಕೆಟ್ ನಂಬರ F060826103365 ಪಡೆದುಕೊಳ್ಳಲಾಗಿದೆ .
ಕಳೆದ 20 ದಿನಗಳಿಂದ ಅಧಿಕಾರಿಯ ಜೊತೆ ನಿರಂತರ ಸಂಪರ್ಕದಲ್ಲಿದ್ದು ಆಯಿಲ್ ಖಾಲಿಯಾಗಿದೆ ಎಂದು ಕುಂಟು ನೆಪ ಹೇಳುತ್ತಾ ಬಂದಿದ್ದಾರೆ.
ಆದರೆ ಈ ಪ್ರಕರಣದ ಕುರಿತು ಹುಣಸಗಿ ಸೆಕ್ಷನ್ ಆಫೀಸರವರಾದ ವೀರೇಶ ದಳವಾಯಿ ಇವರು ಸ್ಥಳಕ್ಕೆ ಬಂದು ಭೇಟಿ ನೀಡಿ ಪರಿಶೀಲಿಸದೆ, ಅದರ ಕುರಿತು ಮಾಹಿತಿ ಪಡೆದುಕೊಂಡು ಹೊಸ ವಿದ್ಯುತ್ ಟಿ.ಸಿ. ಕೂಡಿಸದೆ, ಬೇರೊಬ್ಬ ಖಾಸಗಿ ವ್ಯಕ್ತಿಗೆ ಹಣಕ್ಕೆ ಮಾರಾಟ ಮಾಡಿ, ಸುಳ್ಳು ಮಾಹಿತಿ ನೀಡಿ ಸದರಿ ರೈತರ ಜಮೀನಿಗೆ ವಿದ್ಯುತ್ ಟಿ.ಸಿ. ಕೂಡಿಸಿರುತ್ತೇನೆಂದು ದಿನಾಂಕ : 21-08-2026 ರಂದು ಕಂಪ್ಲೆಂಟ್ ಕ್ಲೋಜ್ ಮಾಡಿ ರೈತರಿಗೆ ವಂಚನೆ ಮಾಡಿರುತ್ತಾರೆ. ಇದು ಅಕ್ಷಮ್ಯ ಅಪರಾಧವೆಂದು ಸಾಭೀತಾಗಿದ್ದು,
ಕೂಡಲೇ ಹಿರಿಯ ಅಧಿಕಾರಿಗಳು ಎಚ್ಚೆತ್ತುಕೊಂಡು ರೈತರಿಗೆ ಮೋಸ, ಹಾಗೂ ವಂಚನೆ ಮಾಡಿ ಭ್ರಷ್ಟಾಚಾರದಂಥ ಕೆಲಸ ಮಾಡಿರುವ ಹುಣಸಗಿ ಸೆಕ್ಷನ್ ಆಫೀಸರ ವೀರೇಶ ದಳವಾಯಿ ಇವರ ಮೇಲೆ ಕಾನೂನು ಕ್ರಮ ಜರುಗಿಸಿ ತಕ್ಷಣವೇ ಸೇವೆಯಿಂದ ಅಮಾನತ್ತುಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
” ಜೆಸ್ಕಾಂ ಇಲಾಖೆಯಲ್ಲಿ ಆಯಿಲ್ ಪೂರೈಕೆ ಸಮಸ್ಯೆ ಇರುವುದು ನಿಜ. ಆದರೆ ಕಂಪ್ಲೆಂಟ್ ಕ್ಲೋಜ್ ಮಾಡುವ ಅಧಿಕಾರ ಸೆಕ್ಷನ್ ಆಫೀಸರ್ ಗೆ ಇಲ್ಲ. ಯಾವ ವ್ಯಕ್ತಿ ತಮ್ಮ ಮೋಬೈಲ್ ನಂಬರ್ ನಿಂದ ಕರೆ ಮಾಡಿ ಕಂಪ್ಲೆಂಟ್ ಕೊಟ್ಟಿರುತ್ತಾರೆ ಅವರೇ ಕಂಪ್ಲೆಂಟ್ ಕ್ಲೋಜ್ ಮಾಡಬೇಕು. ಜೊತೆಗೆ ಮೋಬೈಲ್ ನಂಬರ್ ನಮೂದಾಗಿರುವುದರಿಂದ ಆ ನಂಬರ್ ಗೆ ಕರೆ ಮಾಡಿ ತಿಳಿಸಬೇಕು. ನಮ್ಮ ಅಧಿಕಾರಿಗಳಿಂದ ತಪ್ಪಾಗಿದೆ ಕೂಡಲೇ ಕ್ರಮ ಕೈಗೊಳ್ಳಲಾಗುವುದು “.
– ರಾಜಶೇಖರ ಬಿಳವಾರ್
ಜೆಸ್ಕಾಂ ವಿಭಾಗೀಯ ಕಾರ್ಯನಿರ್ವಾಹಕ ಅಧಿಕಾರಿ ಸುರಪುರ.
” ರೈತರೊಂದಿಗೆ ನಿರಂತರವಾಗಿ ಕಳ್ಳಾಟ ಆಡುತ್ತಿರುವ ಅಧಿಕಾರಿಗಳ ಚರ್ಮ ದಪ್ಪ ಆಗಿದೆ. ತಾಲ್ಲೂಕಿನಲ್ಲಿ ಪ್ರಭಾವಿ ಖಾಸಗಿ ವ್ಯಕ್ತಿಗಳಿಗೆ ಹಣಕ್ಕಾಗಿ ಟಿಸಿ ಗಳನ್ನು ಮಾರಾಟ ಮಾಡಲಾಗುತ್ತಿರುವ ವದಂತಿ ಇದೆ.
ಕೂಡಲೇ ಇಂಥ ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು “.
- ಅಯ್ಯಣ್ಣ ಹಾಲಭಾವಿ ಜಿಲ್ಲಾಧ್ಯಕ್ಷರು, ರೈತ ಸಂಘ ಯಾದಗಿರಿ.




















