ಹುನಗುಂದ: ನಗರದ ಅಭಿವೃದ್ಧಿಪರ ೨೦ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸಚಿವ ವಿಜಯಾನಂದ ಕಾಶಪ್ಪನವರ ಅವರಿಗೆ ಭಾನುವಾರ ಇಳಕಲ್ಲಿನ ಅವರ ಗೃಹ ಕಚೇರಿಯಲ್ಲಿ ಮನವಿ ಅರ್ಪಿಸಲಾಯಿತು.
ಹುನಗುಂದ ನಾಗರಿಕ ಸೇವಾ ಸುಧಾರಣಾ ಸಮಿತಿ ಅಧ್ಯಕ್ಷ ವ್ಹಿ.ಆರ್. ಜನಾದ್ರಿ, ಕಾರ್ಯದರ್ಶಿ ಜಿ.ಬಿ. ಕಂಬಾಳಿಮಠ ಅವರ ತಂಡ ಎಲ್ಲ ಬೇಡಿಕೆಗಳನ್ನು ಶೀಘ್ರ ಈಡೇರಿಸಲು ಒತ್ತಾಯಿಸಿತು.
ಮನವಿ ಪತ್ರದಲ್ಲಿ ಹುನಗುಂದ ಸುತ್ತಮುತ್ತ ಲಕ್ಷ ಲಕ್ಷ ಸಸಿ ನೆಡುವುದು, ನಗರಕ್ಕೆ ಪಶು ವೈದ್ಯಕೀಯ ಕಾಲೇಜು ಮಂಜೂರು, ರೈತರ
ಉತ್ಪನ್ನಗಳ ಸಂಗ್ರಹಕ್ಕೆ ಶೀಥಲ ಘಟಕ ಸ್ಥಾಪನೆ, ನೆನೆಗುದಿಗೆ ಬಿದ್ದ ಒಳಚರಂಡಿ ಕಾಮಗಾರಿ ಪೂರ್ಣಗೊಳಿಸುವುದು, ೨೪/೭ ಕುಡಿಯುವ ನೀರಿನ ಯೋಜನೆಗೆ ವೇಗ, ಹೆಸ್ಕಾಂ ವಿಭಾಗ ಕಚೇರಿ ಮಂಜೂರಿಸಿ ಆರಂಭಿಸುವುದು, ಹುನಗುಂದಕ್ಕೆ ಮಂಜೂರಾದ ಉಪವಿಭಾಗಾಧಿಕಾರಿ ಕಚೇರಿ ಆರಂಭಿಸುವುದು. ಕಾಡಿಗೆಹಳ್ಳ ಮೂಲಕ ರಾಯಚೂರಿಗೆ ನಿಯಮಿತ ಸಾರಿಗೆ ಮತ್ತು ಹುನಗುಂದ-ಬೆಂಗಳೂರು-ಮೈಸೂರು ಸ್ಲೀಪರ್ ಕೋಚ್ ಹೊಸ ಸಾರಿಗೆ ಆರಂಭ, ೨೨೦ ಕೆವಿ ವಿದ್ಯುತ್ ವಿತರಣಾ ಕೇಂದ್ರದ ಅಡಿಗಲ್ಲು, ಪೂಜೆಯಾದ ಎಂಸಿಎಚ್ ಆಸ್ಪತ್ರೆ ಕಟ್ಟಡ ಕಾಮಗಾರಿ ಆರಂಭ, ಎಪಿಎಂಸಿ ಪ್ರಾಂಗಣದಲ್ಲಿ ನಿಯಮಿತ ಟೆಂಡರ್ ಪ್ರಕ್ರಿಯೆ ನಡೆಯುವುದು, ಐಹೊಳೆ ಗ್ರಾಮವನ್ನು ಸ್ಥಳಾಂತರಿಸಿ ಐಹೊಳೆ, ಪಟ್ಟದಕಲ್ಲು, ಬಾದಾಮಿ ಮತ್ತು ಕೂಡಲಸಂಗಮ ಸ್ಥಳಗಳಲ್ಲಿ ಪ್ರವಾಸೋದ್ಯಮ ಬೆಳೆಯಲು ಪ್ಯಾಕೇಜ್ ಮಂಜೂರು, ತಾಲೂಕಿನಲ್ಲಿ ಸಣ್ಣ ಕೈಗಾರಿಕೆ ಹಾಗೂ ಸಾರ್ವಜನಿಕ ಉದ್ದಿಮೆಗಳ ಇಲಾಖೆಯಿಂದ ವಿವಿಧ ಯೋಜನೆಗಳ ಅನುಷ್ಠಾನ, ಪೂರ್ಣಗೊಂಡ ಕೂಡಲಸಂಗಮ-ಅಡಿಹಾಳ ಸೇತುವೆ ಲೋಕಾರ್ಪಣೆ ಹಾಗೂ ಈ ರಸ್ತೆಯಲ್ಲಿ ಹೆಚ್ಚಿನ ಸಾರಿಗೆ ಆರಂಭ, ಪೂಜೆಗೊಂಡ ಲಕ್ಷ್ಮಿನಗರ-ರಾಷ್ಟ್ರೀಯ
ಹೆದ್ದಾರಿ ೫೦ ಕೂಡು ರಸ್ತೆ ಕಾಮಗಾರಿ ಆರಂಭ, ತಾಲೂಕಿನ ಹೊಲಗಳ ಬಂಡಿ ರಸ್ತೆ ಅಭಿವೃದ್ಧಿ, ಬಹುವರ್ಷಗಳ ಮರೋಳ ರಸ್ತೆ ಪೂರ್ಣ ಮಾಡುವುದು ಮತ್ತು ನಗರದ ಎಲ್ಲಾ ಉದ್ಯಾನವನಗಳನ್ನು ಅಭಿವೃದ್ಧಿಪಡಿಸುವುದು. ನಗರದಲ್ಲಿನ ಹೊಟೆಲ್ ಮತ್ತು ಖಾನಾವಳಿಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳಲು ಸಂಬಂಧಿಸಿದ ಇಲಾಖೆ ನಿಗಾ ವಹಿಸಬೇಕು.
ಈ ಸಂದರ್ಭದಲ್ಲಿ ಸಮಿತಿ ಸದಸ್ಯರಾದ ಬಸವರಾಜ ಕಮ್ಮಾರ, ಶಾಂತಪ್ಪ ಮಸ್ಕಿ, ಮಹಾಂತೇಶ ತೋಪಲಕಟ್ಟಿ ಮತ್ತು ರಾಜು ಬಡಿಗೇರ ಹಾಜರಿದ್ದರು.
- ಕರುನಾಡ ಕಂದ ಸುದ್ದಿ




















