ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ಕಛೇರಿಯ ಮಹಾತ್ಮಾ ಗಾಂಧೀಜಿ ಸಭಾಂಗಣದಲ್ಲಿ ಜಗಜ್ಯೋತಿ ಬಸವಣ್ಣನವರ ಜಯಂತಿಯನ್ನು ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಮುಖಂಡರಾದ ಪಂಪಾಪತಿ ಇವರು ಮಾತನಾಡಿ ಬಸವಣ್ಣನವರು ತಮ್ಮ ಒಂದು ವಚನದಲ್ಲಿ ಮನುಜನ ಏಳಿಗೆಗೆ ಬೇಕಾದ ಏಳು ನುಡಿಗಳನ್ನು ತಿಳಿಸಿದ್ದಾರೆ. ಕಳಬೇಡ, ಕೊಲಬೇಡ, ಹುಸಿಯ ನುಡಿಯಬೇಡ, ಮುನಿಯಬೇಡ, ಅನ್ಯರಿಗೆ ಅಸಹ್ಯ ಪಡಬೇಡ, ತನ್ನ ಬಣ್ಣಿಸಬೇಡ, ಇದಿರು ಅಳಿಯಲುಬೇಡ ಎಂದು ತಿಳಿಸುತ್ತಾ, ಇದೇ ಅಂತರಂಗ ಶುದ್ದಿ, ಇದೇ ಬಹಿರಂಗ ಶುದ್ದಿ ಎಂದು ಪ್ರತಿಯೊಬ್ಬ ಮನುಷ್ಯನು ತನ್ನನ್ನು ತಾನು ಅರಿತು ನಡೆಯಲು ಮಾರ್ಗದರ್ಶನವನ್ನು ನೀಡಿದ್ದಾರೆ. ಹೀಗಾಗಿ ಬಸವಣ್ಣನವರು ವ್ಯಕ್ತಿತ್ವ ವಿಕಸನ ತರಬೇತುದಾರರಂತೆ ಸಮಾಜಕ್ಕೆ ಬೆಳಕಾಗಿದ್ದರು ಎಂದರು.
ತಹಶೀಲ್ದಾರರಾದ ಅಮರೇಶ್.ಜಿ.ಕೆ ಇವರು ಮಾತನಾಡಿ ವಿಶ್ವಕ್ಕೆ ಮೊಟ್ಟ ಮೊದಲ ಪಾರ್ಲಿಮೆಂಟ್ನಂತಹ ಅನುಭವ ಮಂಟಪದ ಕಲ್ಪನೆಯನ್ನು ಪರಿಚಯಿಸಿದ ಮಹಾನ್ ಸಮಾಜ ಸುಧಾರಕರು. ಕಾಯಕಕ್ಕೆ ಮಹತ್ವ ನೀಡಿ ಅದನ್ನು ಕೈಲಾಸವಾಗಿಸಿ, ದಾಸೋಹದ ಮೂಲಕ ಹಂಚಿ ತಿನ್ನುವ ಬುದ್ದಿಯನ್ನು ಕಲಿಸಿದರು. ಎಲ್ಲರನ್ನು ತನ್ನವರೆಂದು ಬಗೆದು ಸಮಾಜದಲ್ಲಿ ಜಾತಿ, ವರ್ಗ ಭೇದಗಳನ್ನು ಅಳಿಸಲು ಶ್ರಮಿಸಿದರು. ಹೀಗಾಗಿ ಬಸವಣ್ಣನವರು ನಮಗೆ ಮಾತ್ರವಲ್ಲ ಇಡೀ ಜಗತ್ತಿಗೆ ಜ್ಞಾನದ ಬೆಳಕನ್ನು ನೀಡಿದ ಮೇರು ಪರ್ವತ. ಇಂತಹ ಮಹಾನ್ ಶರಣರು. ನೆಲೆಸಿದ್ದ ನಾಡಿನಲ್ಲಿ ಜೀವಿಸಿದ್ದೇವೆ ಎನ್ನುವ ಹೆಮ್ಮೆ ನಮ್ಮದಾಗಿದೆ. ಅವರು ನೀಡಿದ ಸಂದೇಶವನ್ನು ಪಾಲಿಸಿ ನಡೆದಲ್ಲಿ ಸಮಾಜದಲ್ಲಿ ಸಂಘರ್ಷವೇ ಇರುವುದಿಲ್ಲ ಎಂದರು.
ಕಾರ್ಯಕ್ರಮದಲ್ಲಿ ನಿವೃತ್ತ ನೌಕರರಾದ ಈಶ್ವರಪ್ಪ ತುರಕಾಣಿ, ರಾಜೇಂದ್ರಗೌಡ, ಮುಖಂಡರಾದ ಶಶಿಮೌಳಿ ದೇವರಮನಿ, ವೀರನಗೌಡ, ಸಿಬ್ಬಂದಿ ದೇವರಾಜ ಅರಸು, ಮಂಜುನಾಥ, ಸುಧಾ ಜೈನರ್, ಭೂಮಾಪಕ ಭರಮಣ್ಣ, ಗ್ರಾಮ ಆಡಳಿತ ಅಧಿಕಾರಿಗಳಾದ ರಮೇಶ, ಸಿದ್ದೇಶ, ಮಲ್ಲೇಶ, ಜ್ಯೋತಿಬಾಯಿ, ಸೌಭಾಗ್ಯ, ಚಂದ್ರಿಕಾ ಮುಂತಾದವರಿದ್ದರು. ಸಿ ಮ ಗುರುಬಸವರಾಜ ಸ್ವಾಗತಿಸಿ, ನಿರೂಪಿಸಿದರು.
- ಕರುನಾಡ ಕಂದ




















