ಬಳ್ಳಾರಿ / ಕಂಪ್ಲಿ : ಕರ್ನಾಟಕ ರಾಜ್ಯ ಯಾದವ ಯುವ ವೇದಿಕೆಗೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆದಿದ್ದು, ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಯಾದವ ಯುವ ಘಟಕದ ಅಧ್ಯಕ್ಷರಾದ ಪಾಮಣ್ಣ ಯಾದವ್ ಅವರನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.
ಬೆಂಗಳೂರಿನಲ್ಲಿ ನಡೆದ ಅಧಿಕೃತ ಪದಗ್ರಹಣ ಕಾರ್ಯಕ್ರಮದಲ್ಲಿ ಕರ್ನಾಟಕ ರಾಜ್ಯ ಯಾದವ ಯುವ ವೇದಿಕೆಯ ರಾಜ್ಯ ಅಧ್ಯಕ್ಷರಾದ ಸುನಿಲ್ ಯಾದವ್ ಹಾಗೂ ಪ್ರಮುಖ ಮುಖಂಡರಾದ ಸುಧಾಕರ್ ಯಾದವ್ ಅವರ ಸಮ್ಮುಖದಲ್ಲಿ ಪಾಮಣ್ಣ ಯಾದವ್ ಅವರಿಗೆ ಅಧಿಕೃತ ನೇಮಕಾತಿ ಪತ್ರ ನೀಡಿ, ಮೈಸೂರು ಪೇಟ ತೊಡಿಸಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಜ್ಯ ಮುಖಂಡರು, ಸಂಘಟನೆಯನ್ನು ತಳಮಟ್ಟದಿಂದ ಬಲಪಡಿಸುವಲ್ಲಿ ಪಾಮಣ್ಣ ಯಾದವ್ ಅವರ ಶ್ರಮ ಅಪಾರವಾಗಿದೆ. ಮುಂಬರುವ ದಿನಗಳಲ್ಲಿ ಯುವ ಸಮುದಾಯವನ್ನು ಒಗ್ಗೂಡಿಸಿ, ಸಮಾಜದ ಏಳಿಗೆಗಾಗಿ ಅವರು ಮತ್ತಷ್ಟು ಸಕ್ರಿಯವಾಗಿ ಕೆಲಸ ಮಾಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.
ಕೃತಜ್ಞತೆ: ತಮ್ಮ ಮೇಲಿಟ್ಟ ನಂಬಿಕೆಗೆ ಧನ್ಯವಾದ ಅರ್ಪಿಸಿದ ನೂತನ ರಾಜ್ಯ ಪ್ರಧಾನ ಕಾರ್ಯದರ್ಶಿ ಪಾಮಣ್ಣ ಯಾದವ್ ಅವರು, “ರಾಜ್ಯಾದ್ಯಂತ ಯಾದವ ಸಮುದಾಯದ ಯುವಕರ ಶ್ರೇಯೋಭಿವೃದ್ಧಿಗೆ ಮತ್ತು ಸಂಘಟನೆಯ ಬೆಳವಣಿಗೆಗೆ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ” ಎಂದು ಭರವಸೆ ನೀಡಿದರು.
ನೇಮಕಾತಿಯ ಹಿನ್ನೆಲೆಯಲ್ಲಿ ಕೊಪ್ಪಳ ಹಾಗೂ ಗಂಗಾವತಿ ತಾಲೂಕಿನ ಯಾದವ ಸಮಾಜದ ಬಂಧುಗಳು ಮತ್ತು ಅಭಿಮಾನಿಗಳು ಪಾಮಣ್ಣ ಯಾದವ್ ಅವರಿಗೆ ಹಾರ್ದಿಕ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















