
ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದಲ್ಲಿ ನಡೆದ ಶ್ರೀಗುರುದೇವ ಸತ್ಸಂಗ ಕಾರ್ಯಕ್ರಮದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಭಗವಂತನ ಆರಾಧಕನೆ ಭಕ್ತ: ಗುರುಪಾದ ಶ್ರೀಗಳು.
ಜಮಖಂಡಿ: ಭಗವಂತನ ಮೇಲೆ ಗಾಢವಾದ ಪ್ರೀತಿ, ಶ್ರದ್ಧೆ, ಗೌರವವಿಟ್ಟು ನಿಷ್ಠೆ ಮತ್ತು ಅಚಲವಾದ ನಿಜಭಕ್ತಿಯಿಂದ ಆರಾಧನೆ ಮಾಡುವವನನ್ನು ಭಕ್ತನೆನ್ನಲಾಗುತ್ತದೆ ಎಂದು ಯಂಕಂಚಿಯ ಶ್ರೀಗುರುದೇವಾಶ್ರಮದ ಗುರುಪಾದ ಮಹಾಸ್ವಾಮಿಗಳು ಹೇಳಿದರು.
ತಾಲ್ಲೂಕಿನ ಹುಲ್ಯಾಳ ಗ್ರಾಮದ ಶ್ರೀಗುರುದೇವಾಶ್ರಮದ ಶ್ರೀಗುರುದೇವ ಸತ್ಸಂಗ ಬಳಗದ ಆಶ್ರಯದಲ್ಲಿ ಪ್ರತಿ ತಿಂಗಳ ನಾಲ್ಕನೆಯ ಭಾನುವಾರ ಹಮ್ಮಿಕೊಳ್ಳುವ ‘ಶ್ರೀಗುರುದೇವ ಸತ್ಸಂಗ’ ಮೇ ೨೪ರ ಮಾಸಿಕ ಕಾರ್ಯಕ್ರಮದ ಸಾನ್ನಿಧ್ಯ ವಹಿಸಿ ‘ಷಟ್ಸ್ಥಲ: ಭಕ್ತ ಮತ್ತು ಭಕ್ತಿ’ ವಿಷಯ ಕುರಿತು ಅವರು ಅನುಭಾವ ಹಂಚಿಕೊಳ್ಳುತ್ತಾ ಆಶೀರ್ವಚನ ನೀಡಿದರು.
೧೨ನೇ ಶತಮಾನದ ಬಸವಾದಿ ಶಿವಶರಣರು ಕಟ್ಟಿಕೊಟ್ಟಿರುವ ‘ಷಟ್ಸ್ಥಲ’ವು ಸಾಧನೆಯ ಆರು ಮೆಟ್ಟಿಲುಗಳನ್ನು ಹೊಂದಿದೆ. ಭಕ್ತಸ್ಥಲ ಮೊದಲ ಮೆಟ್ಟಿಲಾಗಿದೆ. ಗುರು ಅಥವಾ ಭಗವಂತನ ಮೇಲೆ ಅಚಲವಾದ ನಂಬಿಕೆ, ಪ್ರೀತಿ, ವಿಶ್ವಾಸವಿಡುವುದನ್ನು ಭಕ್ತಿ ಎನ್ನಲಾಗುತ್ತದೆ ಎಂದರು.
ಹುಲ್ಯಾಳ ಶ್ರೀಗುರುದೇವಾಶ್ರಮದ ಹರ್ಷಾನಂದ ಮಹಾಸ್ವಾಮಿಗಳು ನೇತೃತ್ವ ವಹಿಸಿ ಮಾತನಾಡಿ, ಷಟ್ಸ್ಥಲವು ಅದ್ಭುತವಾದ ಸಾಧನೆ ಪದ್ಧತಿಯಾಗಿದೆ. ಭಕ್ತಸ್ಥಲ ಸಾಧನೆಯಿಂದ ನನ್ನದೆನ್ನುವುದು ಏನೂ ಉಳಿಯುವುದಿಲ್ಲ. ನನ್ನ ದರ್ಶನ ನನಗೆ ಆಗುತ್ತದೆ. ನಾನು ಲಿಂಗ ಸ್ವರೂಪಿ, ಲಿಂಗಮಯ ಎನ್ನುವ ಭಾವ ಮೂಡುತ್ತದೆ ಎಂದು ಆಶೀರ್ವಚನ ನೀಡಿದರು.
ಬಸವಣ್ಣನವರ ನಿಜವಾದ ಅನುಯಾಯಿ ಆಗಬೇಕಾದರೆ ಷಟ್ಸ್ಥಲದ ಆರು ಮೆಟ್ಟಿಲುಗಳನ್ನು ಸರಿಯಾಗಿ ಅರ್ಥೈಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ಸಾಧನೆಯ ಮೊದಲ ಹೆಜ್ಜೆ ಇಡುವವನೆ ಭಕ್ತ. ಲಿಂಗವೇ ಸರ್ವಸ್ವ ಎನ್ನುವುದೇ ಭಕ್ತಿ ಎಂದರು.
ಶ್ರೀಗುರುದೇವಾಶ್ರಮದ ಸದ್ಭಕ್ತ ಯಲ್ಲಪ್ಪ ಶಿವಾಪುರ ಮಾತನಾಡಿದರು. ಹುಲ್ಯಾಳದ ನಿಜಗುಣಶಾಸ್ತ್ರಿ ಮಮದಾಪುರ ಹಾಗೂ ಶ್ರೀಮಠದ ವಿದ್ಯಾರ್ಥಿಗಳಿಂದ ಕೈಸನ್ನೆಯಿಂದಲೇ ಶಬ್ದಗಳನ್ನು ಗುರುತಿಸುವ ‘ತರ್ಕಶಾಸ್ತ್ರ ಜ್ಞಾನ’ ಪ್ರದರ್ಶನ ಜರುಗಿತು.
ಯರಗಟ್ಟಿ ತಾಲ್ಲೂಕಿನ ಅಕ್ಕಿಸಾಗರ ಮಠದ ರುದ್ರೇಶ ಸ್ವಾಮಿಗಳು, ಗೋಕಾಕ ತಾಲ್ಲೂಕಿನ ತುಕಾನಟ್ಟಿ ಮಠದ ಶಿವಬಸವ ಸ್ವಾಮಿಗಳು ಸಾನ್ನಿಧ್ಯ ವಹಿಸಿದ್ದರು. ಮಹಾಪ್ರಸಾದದ ಸೇವೆ ನೆರವೇರಿಸಿದ ಬಬಲೇಶ್ವರ ತಾಲ್ಲೂಕಿನ ಕುಮಠೆ ಗ್ರಾಮದ ಶೇಖರ ಸಿದ್ರಾಮಪ್ಪ ತೇಲಿ ದಂಪತಿಯನ್ನು ಸನ್ಮಾನಿಸಲಾಯಿತು.
ಮಾರ್ಚ್-ಏಪ್ರಿಲ್ ತಿಂಗಳಿನಲ್ಲಿ ಜರುಗಿದ ಎಸ್ಎಸ್ಎಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳು, ಶ್ರೀಗುರುದೇವ ಸತ್ಸಂಗ ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸುತ್ತಿರುವ ಹಿರಿಯರನ್ನು, ವಿಶೇಷ ಸಾಧಕ ಕಲಾವಿದರನ್ನು ಹಾಗೂ ಶ್ರೀಗುರುದೇವ ಸಂಗೀತ ಬಳಗದ ಕಲಾವಿದರನ್ನು ಸನ್ಮಾನಿಸಲಾಯಿತು.
ಶ್ರೀಗುರುದೇವ ಸಂಗೀತ ಬಳಗದ ಕಲಾವಿದರಾದ ಗುರುಬಸಗೌಡ ಪಾಟೀಲ, ಪರಮೇಶ್ವರ ತೇಲಿ, ರಾಮಚಂದ್ರ ಹೂಗಾರ, ಶಿವಾಜಿ ಜಾಧವ, ಮಲ್ಲಿಕಾರ್ಜುನ ಹುನ್ನೂರ, ಅಕ್ಷಯ ಹೂಗಾರ ಸಂಗೀತ ಸೇವೆ ಸಲ್ಲಿಸಿದರು. ಪ್ರಾಚಾರ್ಯ ಡಾ.ಟಿ.ಪಿ. ಗಿರಡ್ಡಿ ಸ್ವಾಗತಿಸಿದರು. ಉಪನ್ಯಾಸಕ ಸಂಗಮೇಶ ತೆಲಸಂಗ, ಶಿಕ್ಷಕ ಎಸ್.ಐ. ಚನ್ನಪ್ಪನ್ನವರ ನಿರೂಪಿಸಿದರು.
- ಕರುನಾಡ ಕಂದ ಸುದ್ದಿ




















