ಮಧುಗಿರಿ: ತುಮಕೂರು ಜಿಲ್ಲೆಯ ಮಧುಗಿರಿ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿ (ಇ.ಒ) ಬಿ.ಎಸ್. ಲಕ್ಷ್ಮಣ್ ಅವರನ್ನು ಕರ್ತವ್ಯ ಲೋಪ ಹಾಗೂ ಕೋಟ್ಯಂತರ ರೂಪಾಯಿಗಳ ಆರ್ಥಿಕ ಅವ್ಯವಹಾರದ ಆರೋಪದ ಹಿನ್ನೆಲೆಯಲ್ಲಿ ತಕ್ಷಣದಿಂದ ಜಾರಿಗೆ ಬರುವಂತೆ ಸರ್ಕಾರಿ ಸೇವೆಯಿಂದ ಅಮಾನತುಗೊಳಿಸಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಆದೇಶ ಹೊರಡಿಸಿದೆ.
ಹಿನ್ನೆಲೆ ಮತ್ತು ಆರೋಪಗಳು:
ಬಿ.ಎಸ್. ಲಕ್ಷ್ಮಣ್ ಅವರು ಮಧುಗಿರಿ ತಾಲೂಕು ಪಂಚಾಯಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅವಧಿಯಲ್ಲಿ ತೀವ್ರ ಸ್ವರೂಪದ ಆರ್ಥಿಕ ಅಕ್ರಮಗಳನ್ನು ಎಸಗಿರುವುದು ಪ್ರಾಥಮಿಕ ತನಿಖೆಯಲ್ಲಿ ಮೇಲ್ನೋಟಕ್ಕೆ ಕಂಡು ಬಂದಿದೆ.
ಪ್ರಮುಖ ಆರೋಪಗಳು :
ರಜೆ ನಗದೀಕರಣ ಸೌಲಭ್ಯ ದುರುಪಯೋಗ: ನಿವೃತ್ತ/ಸ್ವಯಂ ನಿವೃತ್ತಿ/ಮರಣ ಹೊಂದಿದ ಒಟ್ಟು 21 ನೌಕರರ ಯಾವುದೇ ಸಮರ್ಪಕ ದಾಖಲಾತಿಗಳನ್ನು ನಿರ್ವಹಿಸದೆ, ಅವರ ಕುಟುಂಬದವರ ಹೆಸರಿನಲ್ಲಿರುವ ರೆಸಿಪಿಯೆಂಟ್ ಐಡಿ ಬಳಸಿ ಒಟ್ಟು 118 ಬಾರಿ ಬಿಲ್ ಗಳನ್ನು ಸೃಜಿಸಲಾಗಿದೆ.
₹4.24 ಕೋಟಿ ಅಕ್ರಮ ಪಾವತಿ:
ಅಂತಿಮ ಗಳಿಕೆ ರಜೆ ನಗದೀಕರಣದ ಮೊತ್ತವನ್ನು ಅಕ್ರಮವಾಗಿ ಪಾವತಿಸಿ, ಸರ್ಕಾರದ ಒಟ್ಟು ₹4,24,06,997/- ಅನುದಾನವನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ.
₹82.77 ಲಕ್ಷ ಹೆಚ್ಚುವರಿ ನಷ್ಟ:
ಬ್ಯಾಂಕ್ ಖಾತೆಗಳಲ್ಲಿದ್ದ ಫಲಾನುಭವಿಗಳ ಹೆಸರು ತಾಳೆಯಾಗದಿದ್ದರೂ ಪರಿಶೀಲನೆ ನಡೆಸದೆ, 147 ಪ್ರಕರಣಗಳಲ್ಲಿ ಒಟ್ಟು ₹82,77,533/- ಗಳ ಹಣ ಸಂದಾಯ ಮಾಡಿ ಸರ್ಕಾರಕ್ಕೆ ಭಾರಿ ಆರ್ಥಿಕ ನಷ್ಟ ಉಂಟುಮಾಡಿದ್ದಾರೆ.
ತಕ್ಷಣದ ಕ್ರಮ:
ದಾಖಲೆಗಳನ್ನು ಒದಗಿಸದೆ ತೀವ್ರ ಕರ್ತವ್ಯಲೋಪವೆಸಗಿರುವುದು ಮೇಲ್ನೋಟಕ್ಕೆ ದೃಢಪಟ್ಟ ಹಿನ್ನೆಲೆಯಲ್ಲಿ, ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957ರ ನಿಯಮ 10(1)(ಡಿ) ಅನ್ವಯ ಇಲಾಖಾ ವಿಚಾರಣೆಯನ್ನು ಬಾಕಿ ಇರಿಸಿ ಅವರನ್ನು ಮೇ 29, 2026ರ ಪೂರ್ವಾಹ್ನದಿಂದಲೇ ಜಾರಿಗೆ ಬರುವಂತೆ ಅಮಾನತುಗೊಳಿಸಲಾಗಿದೆ. ಅಮಾನತ್ತಿನ ಅವಧಿಯಲ್ಲಿ ಸಕ್ಷಮ ಪ್ರಾಧಿಕಾರದ ಲಿಖಿತ ಅನುಮತಿ ಇಲ್ಲದೆ ಅವರು ಕೇಂದ್ರಸ್ಥಾನ ಬಿಟ್ಟು ಹೋಗಬಾರದೆಂದು ಸೂಚಿಸಲಾಗಿದೆ.
ಪರ್ಯಾಯ ವ್ಯವಸ್ಥೆ:
ಬಿ.ಎಸ್. ಲಕ್ಷ್ಮಣ್ ಅವರ ಅಮಾನತಿನಿಂದ ತೆರವಾದ ಮಧುಗಿರಿ ತಾಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಹುದ್ದೆಯ ಹೆಚ್ಚುವರಿ ಪ್ರಭಾರವನ್ನು ಮುಂದಿನ ಆದೇಶದವರೆಗೆ ಪಾವಗಡ ತಾಲೂಕು ಪಂಚಾಯಿತಿಯ ಕಾರ್ಯನಿರ್ವಾಹಕ ಅಧಿಕಾರಿಯಾದ ಶ್ರೀ ಉತ್ತಮ ಬಿ.ಕೆ. ಅವರಿಗೆ ವಹಿಸಿ ಸರ್ಕಾರ ಆದೇಶಿಸಿದೆ.
ವರದಿ ರಂಗರಾಜು ಎಂ. ಗರಣಿ




















