ಗಂಗಾವತಿ: ರಾಜ್ಯ ಸರ್ಕಾರ ಸಾಮಾಜಿಕ ಭದ್ರತಾ ಯೋಜನೆಯಡಿ ರಾಜ್ಯದಲ್ಲಿನ ಬಡತನ ರೇಖೆಗಿಂತ ಕೆಳಗಿರುವ ವಿಕಲಚೇತನರಿಗೆ, ವಿಧವೆಯರಿಗೆ ಹಾಗೂ ಹಿರಿಯ ನಾಗರಿಕರು ಸೇರಿದಂತೆ ಇನ್ನಿತರರಿಗೆ ಪಿಂಚಣಿಯನ್ನು ನೀಡುತ್ತಾ ಬರುತ್ತಿದ್ದು, ಇಲ್ಲಿಯವರೆಗೂ ಪಿಂಚಣಿದಾರರಿಗೆ ಯಾವುದೇ ಆದಾಯದ ಮಿತಿಯಿಲ್ಲದೇ ಪಿಂಚಣಿ ನೀಡುತ್ತಾ ಬಂದಿದ್ದು, ಈಗ ಏಕಾಏಕಿ ಕೆಲವು ಯೋಜನೆಗಳಡಿಯ ಪಿಂಚಣಿದಾರರಿಗೆ ವಾರ್ಷಿಕ ರೂ. 32,000/- ಗಳ ಆದಾಯದ ಮಿತಿಯನ್ನು ನಿಗದಿಪಡಿಸಿರುವ ಕ್ರಮ ಖಂಡನೀಯವಾಗಿದೆ, ಯಾವ ಮಾನದಂಡದ ಮೇಲೆ ಈ ಆದಾಯಮಿತಿಯನ್ನು ನಿಗದಿಪಡಿಸಲಾಗಿದೆ ಎಂದು ಕರವೇ ಪ್ರವೀಣಕುಮಾರ ಶೆಟ್ಟಿ ಬಣ ಸಂಘಟನೆಯ ಗಂಗಾವತಿ ತಾಲೂಕ ಅಂಗವಿಕಲರ ಘಟಕ ಅಧ್ಯಕ್ಷರಾದ ಅಶೋಕ ಗುಡಿಕೋಟಿ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ರಾಜ್ಯ ಸರ್ಕಾರ ವಿವಿಧ ಪಿಂಚಣಿ ಯೋಜನೆಗಳಲ್ಲಿ ವ್ಯಯ ಮಾಡುತ್ತಿರುವ ಅನುದಾನವನ್ನು ಕಡಿತಗೊಳಿಸಲು ಪಿಂಚಣಿದಾರರಿಗೆ ಆದಾಯದ ಮಿತಿಯನ್ನು ಜಾರಿಗೆ ತಂದಿರುವುದು ನ್ಯಾಯಸಮ್ಮತವಾಗಿರುವುದಿಲ್ಲ. ಇದರ ಜೊತೆಗೆ ಕೆ.ವೈ.ಸಿ ಆಗಿರುವುದಿಲ್ಲ, ಆಧಾರ್ ಕಾರ್ಡ್ ಬ್ಯಾಂಕ್ ಖಾತೆಗೆ ಲಿಂಕ್ ಆಗಿರುವುದಿಲ್ಲ ಎನ್ನುವುದು ಸೇರಿ ನಾನಾ ಕಾರಣಗಳನ್ನು ನೀಡಿ ಈಗಾಗಲೇ ಕಳೆದ 3-4 ತಿಂಗಳುಗಳಿಂದ ಕೆಲವು ಪಿಂಚಣಿದಾರರಿಗೆ ಮಾಶಾಸನವನ್ನು ಸ್ಥಗಿತಗೊಳಿಸಲಾಗಿರುತ್ತದೆ. ಅದರಲ್ಲೂ ವಿಕಲಚೇತನರು ದುಡಿಯುವ ಶಕ್ತಿ ಇಲ್ಲದವರಾಗಿದ್ದು, ಸರ್ಕಾರದ ಪಿಂಚಣಿ ಮೇಲೆಯೇ ಜೀವನ ಸಾಗಿಸುತ್ತಿದ್ದಾರೆ. ಸರ್ಕಾರ ನಿಗದಿಪಡಿಸಿರುವ ವಾರ್ಷಿಕ ಆದಾಯ ಕೇವಲ ರೂ. 32,000/- ಇದ್ದು, ಇದು ಯಾವ ಮಾನದಂಡದ ಮೇಲೆ ನಿಗದಿಪಡಿಸಲಾಗಿದೆಯೇ ಎಂಬುದು ಯಕ್ಷ ಪ್ರಶ್ನೆಯಾಗಿದೆ. ಕನಿಷ್ಟ ಆದಾಯ ಮಿತಿಯಲ್ಲಿ ಬರುವ ಒಬ್ಬ ಕೂಲಿ ಕಾರ್ಮಿಕನು ದಿನಕ್ಕೆ ರೂ. 500 ರಿಂದ 600 ದುಡಿಯುವುದು ಸರ್ವೇ ಸಾಮಾನ್ಯ. ಆದರೂ ಆ ಕೂಲಿ ಕಾರ್ಮಿಕ ಈಗಿನ ದುಬಾರಿ ಕಾಲದಲ್ಲಿ ಜೀವನ ನಡೆಸುವುದು ದುಃಸ್ಥರವಾಗಿದೆ. ಇಂತಹ ಸಂದರ್ಭದಲ್ಲಿ ವಾರ್ಷಿಕ 32 ಸಾವಿರ ಆದಾಯ ಮಿತಿ ನಿಗದಿಪಡಿಸಿರುವುದು ಹಾಸ್ಯಾಸ್ಪದವಾಗಿದೆ. ಅಷ್ಟಲ್ಲದೇ ವಿವಿಧ ನಾನಾ ಕಾರಣಗಳನ್ನು ನೀಡಿ ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ಎ.ಪಿ.ಎಲ್ ಗೆ ವರ್ಗಾಂತರಿಸಲಾಗುತ್ತಿದೆ. ಇದಕ್ಕೆ ಕಾರಣ ಕೇಳಿದರೆ ಜಿ.ಎಸ್.ಟಿ ಹೊಂದಿದ್ದೀರಿ, ಐ.ಟಿ ರಿಟರ್ನ್ಸ್ ಸಲ್ಲಿಸಿದ್ದೀರಿ ಎಂದು ಸಬೂಬು ಹೇಳಲಾಗುತ್ತಿದೆ. ಆದರೆ ಒಬ್ಬ ಸಣ್ಣ ವ್ಯಾಪಾರಿ, ವ್ಯಾಪಾರದ ಅಭಿವೃದ್ಧಿ ದೃಷ್ಟಿಯಿಂದ ಬ್ಯಾಂಕ್ ಸಾಲ ಪಡೆಯಬೇಕಾದರೆ, ಬ್ಯಾಂಕ್ ಗಳು ಐ.ಟಿ ರಿಟರ್ನ್ಸ್ ಮೇಲೆಯೇ ಸಾಲ ನೀಡುತ್ತಿವೆ. ಸದರಿ ಸಣ್ಣ ವ್ಯಾಪಾರಿಗಳು ಐ.ಟಿ ರಿಟರ್ನ್ಸ್ ಸಲ್ಲಿಸಿದ್ದಾರೆಯೇ ಹೊರತು, ಆದಾಯ ತೆರಿಗೆ ಇಲಾಖೆಯ ಆದಾಯ ಮಿತಿಗಿಂತ ಹೆಚ್ಚಿನ ಆದಾಯ ಗಳಿಸುತ್ತಿಲ್ಲವಾದರೂ, ಸರ್ಕಾರಕ್ಕೆ ಟ್ಯಾಕ್ಸ್ ಕಟ್ಟುತ್ತಿಲ್ಲವಾದರೂ ಅಂತಹ ಬಿ.ಪಿ.ಎಲ್ ಕಾರ್ಡುದಾರರನ್ನೂ ಎಪಿಎಲ್ ಗೆ ವರ್ಗಾಂತರಿಸಿ ಸಾಮಾಜಿಕ ನ್ಯಾಯದಲ್ಲಿ ಸರ್ಕಾರ ಮಲತಾಯಿ ಧೋರಣೆ ತೋರುತ್ತಿದೆ. ನಕಲಿ ಫಲಾನುಭವಿಗಳನ್ನು ಗುರುತಿಸಿ ಪಿಂಚಣಿ ಸ್ಥಗಿತಗೊಳಿಸುವ ಕ್ರಮ ಸ್ವಾಗತಾರ್ಹವಾಗಿದ್ದು, ಆದರೆ ನಕಲಿ ಫಲಾನುಭವಿಗಳ ಜೊತೆಗೆ ಅರ್ಹ ಫಲಾನುಭವಿಗಳಿಗೆ ಯಾವುದೇ ರೀತಿಯಲ್ಲಿ ಅನ್ಯಾಯವಾಗದಂತೆ ಸರ್ಕಾರ ಕ್ರಮ ವಹಿಸಬೇಕಾಗಿದೆ. ಈಗ ನಿಗದಿಪಡಿಸಿರುವ ಆದಾಯ ಮಿತಿಯನ್ನು ರದ್ದುಪಡಿಸಲು ಕ್ರಮವಹಿಸಬೇಕು ಹಾಗೂ ಅರ್ಹ ಫಲಾನುಭವಿಗಳ ಬಿ.ಪಿ.ಎಲ್ ಪಡಿತರ ಚೀಟಿಗಳನ್ನು ವರ್ಗಾಂತರಿಸಬಾರದು, ಸರ್ಕಾರ ಅರ್ಹ ಫಲಾನುಭವಿಗಳ ಜೀವನಕ್ಕೆ ಭದ್ರತೆ ನೀಡಬೇಕೆಂದು ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
- ಕರುನಾಡ ಕಂದ ಸುದ್ದಿ




















