ಜಲ್ಲಿಕಲ್ಲಿನ ನಡುವೆ ಜೀವ ಕೈಯಲ್ಲಿಡಿದುಕೊಂಡೇ ಸಂಚಾರ : ಗುತ್ತಿಗೆದಾರರ ನಿರ್ಲಕ್ಷ್ಯಕ್ಕೆ ಜನರ ಹಿಡಿಶಾಪ, ಉಚಿತ ಅನಾರೋಗ್ಯ ಭಾಗ್ಯ
ಬಳ್ಳಾರಿ / ಕಂಪ್ಲಿ: ಪಟ್ಟಣದ ವಾಲ್ಮೀಕಿ ವೃತ್ತದಿಂದ ಸಕ್ಕರೆ ಕಾರ್ಖಾನೆ ಬಳಿಯ ಸ್ವಾಗತ ಕಮಾನ್ವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಮಂದಗತಿಯಲ್ಲಿ ನಡೆಯುತ್ತಿದ್ದು, ವಾಹನ ಸವಾರರು ನಿತ್ಯ ಕಿರಿಕಿರಿ ಅನುಭವಿಸುವಂತಾಗಿದೆ.
ಅನುಷ್ಠಾನಗೊಂಡಿರುವ ಈ ರಸ್ತೆ ವಿಸ್ತರಣಾ ಕಾಮಗಾರಿ ಕೆಲ ತಿಂಗಳ ಹಿಂದೆಯೇ ಪ್ರಾರಂಭಗೊಂಡರೂ ಸುಮಾರು 3-4 ಕಿ.ಮೀ. ರಸ್ತೆ ಅಭಿವೃದ್ಧಿ ಕೆಲಸ ನಿಧಾನಗತಿಯಲ್ಲಿ ಸಾಗುತ್ತಿದ್ದು, ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.
ಕಳೆದ ವರ್ಷದ ಸೆಪ್ಟೆಂಬರ್ ತಿಂಗಳ ಮೊದಲ ವಾರದಲ್ಲಿ ಇಲ್ಲಿನ ವಾಲ್ಮೀಕಿ ವೃತ್ತದಲ್ಲಿ ಅಪೆಂಡಿಕ್ಸ್ -ಇ 5054 ಯೋಜನೆಯಡಿ ಸುಮಾರು 6.70 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ ದೊರೆತಿತ್ತು. ಆದರೆ, ಈಗ ಹತ್ತು ತಿಂಗಳೂ ಗತಿಸುತ್ತಿದ್ದರೂ ರಸ್ತೆ ಕಾಮಗಾರಿ ಮಾತ್ರ ನಿಧಾನವಾಗಿ ನಡೆಯುತ್ತಿದೆ. ಇಲ್ಲಿನ ರಸ್ತೆಯನ್ನು ಕೆಲ ತಿಂಗಳ ಹಿಂದೆಯೇ ಅಗೆದು, ಗ್ರಾವೆಲ್ ಮೂಲಕ ಜಲ್ಲಿಕಲ್ಲು ಹಾಕಿದ್ದಾರೆ. ಅದರೆ, ಹಾಕಿದ ಜಲ್ಲಿಕಲ್ಲು ರಸ್ತೆ ಮೇಲೆ ಚಲ್ಲಾಪಿಲ್ಲಿಯಾಗಿ ಹರಡಿದ್ದು, ಇದರಿಂದ ವಾಹನ ಸವಾರರ ಸಂಚಾರ ತುಂಬಾ ಕಠಿಣವಾಗುವ ಜೊತೆಗೆ ಜೀವ ಕೈಯಲ್ಲಿಡಿದುಕೊಂಡು ಸಾಗಬೇಕಾದ ಅನಿವಾರ್ಯತೆ ಉಂಟಾಗಿದೆ. ಇದರಿಂದ ರಸ್ತೆ ಮೇಲೆ ಸಂಚರಿಸುವುದು ಹೇಗಪ್ಪಾ ಅನ್ನುವಂತಹ ಸ್ಥಿತಿ ನಿರ್ಮಾಣವಾಗಿದೆ.
ಧೂಳುಮಯ : ಹೊಸ ಬಟ್ಟೆಗಳನ್ನು ಹಾಕಿಕೊಂಡು ಇಲ್ಲಿನ ರಸ್ತೆಗೆ ಇಳಿದರೆ ಸಾಕು, ಮನುಷ್ಯನ ಮೈತುಂಬ ಧೂಳು ಮೆತ್ತಿಕೊಳ್ಳುವುದುಂಟು. ಅಷ್ಟರ ಮಟ್ಟಿಗೆ ಧೂಳು ಆವರಿಸುತ್ತದೆ. ಈ ಧೂಳಿಗೆ ಸವಾರರು ಹೈರಾಣರಾಗಿದ್ದಾರೆ.
ಇಲ್ಲಿನ ರಸ್ತೆ ಮೂಲಕ ಎಂಡಿ ಕ್ಯಾಂಪಿಗೆ ಹಾಗೂ ರಸ್ತೆಯ ಅಕ್ಕಪಕ್ಕದಲ್ಲಿರುವ ಶಾಲಾ-ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು ಧೂಳಿನ ನಡುವೆ ಜೀವದ ಭಯದಲ್ಲಿ ತೆರಳುತ್ತಿದ್ದಾರೆ. ಬೇಕಾಬಿಟ್ಟಿಯಲ್ಲಿ ರಸ್ತೆಗೆ ನೀರು ಹಾಕಿ ಕೈತೊಳೆದುಕೊಳ್ಳುತ್ತಿದ್ದು, ಇದರಿಂದ ಜನರ ಗೋಳು ಹೇಳತೀರದಂತಾಗಿದೆ. ಉಚಿತವಾಗಿ ಸಾರ್ವಜನಿಕರಿಗೆ ಶ್ವಾಶಕೋಶ ಸಂಬಂಧಪಟ್ಟ ಅನಾರೋಗ್ಯ ಸಮಸ್ಯೆಗಳು ಸಿಗುತ್ತಿವೆ. ಗುತ್ತಿಗೆದಾರರು ಎಲ್ಲೋ ಎಸಿಯಲ್ಲೇ ಕುಳಿತುಕೊಂಡು ಕಾಮಗಾರಿ ಮಾಡಿಸುತ್ತಾರೆ. ಆದರೆ, ಇಲ್ಲಿನ ಜನರ ಗೋಳು ಮಾತ್ರ ಕೇಳಿಸುವುದಿಲ್ಲ. ಆದ್ದರಿಂದ ಸಂಬಂಧಿಸಿದ ಲೋಕೋಪಯೋಗಿ ಅಧಿಕಾರಿಗಳು ಇಂತಹ ಸಮಸ್ಯೆಗಳನ್ನು ಆಲಿಸಿ, ಕಟ್ಟುನಿಟ್ಟಿನ ಕ್ರಮವಹಿಸಿದರೆ ಮಾತ್ರ ಆದಷ್ಟು ಬೇಗ ರಸ್ತೆ ಅಭಿವೃದ್ಧಿಗೊಳ್ಳುವ ಜೊತೆಗೆ ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟಂತಾಗುತ್ತದೆ.
ಪೂರ್ಣಗೊಳ್ಳದ ಕಿರು ಸೇತುವೆ : ಕಂಪ್ಲಿ-ಕೋಟೆಯಿಂದ ಹೊಸ ಬಸ್ ನಿಲ್ದಾಣವರೆಗಿನ ರಸ್ತೆ ಅಭಿವೃದ್ಧಿ ಕಾಮಗಾರಿ ಈಗಾಗಲೇ ಮುಗಿಯುವ ಹಂತಕ್ಕೆ ಬಂದಿತ್ತಾದರೂ ಇಲ್ಲಿನ ಗಂಗಾವತಿ ರಸ್ತೆಯ ವರಸಿದ್ದಿ ವಿನಾಯಕ ದೇವಸ್ಥಾನ ಮುಂಭಾಗದ ರಸ್ತೆಯ ಕಿರು ಸೇತುವೆ ಕಾಮಗಾರಿಗೆ ಗ್ರಹ ಹಿಡಿದಿದೆ. ಕೆಲವೊಂದು ತಾಂತ್ರಿಕ ಸಮಸ್ಯೆಗಳಿಂದ ಕಾಮಗಾರಿ ಸ್ಥಗಿತಗೊಂಡಿತ್ತು. ಆದರೆ, ಇತ್ತೀಚೆಗೆ ಸಂಬಂಧಿಸಿದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಸೂಕ್ತಸ್ಥಳದಲ್ಲಿ ಕಿರು ಸೇತುವೆ ಮುಂದಾಗಿದ್ದು, ಕಾಮಗಾರಿ ಆರಂಭಗೊಂಡಿರುವುದು ಖುಷಿಯಂತಾದರೂ, ಆಮೆಗತಿಯಲ್ಲಿ ಕೆಲಸ ನಡೆಯುತ್ತಿರುವುದು ಸವಾರರ, ಜನರ ಆಕ್ರೋಶಕ್ಕೆ ಕಾರಣವಾಗಿದೆ. ಈಗಲಾದರೂ ಕಾಮಗಾರಿಗೆ ವೇಗ ನೀಡಿ, ಕಿರು ಸೇತುವೆ ಪೂರ್ಣಗೊಳಿಸಿ, ಮುಂದಿನ ಕಾಮಗಾರಿಗೆ ಅನುವು ಮಾಡಿಕೊಟ್ಟರೆ ಸವಾರರು ನಿಟ್ಟುಸಿರು ಬಿಡಲಿದ್ದಾರೆ. ಇಲ್ಲಿನ ಪರ್ಯಾಯ ರಸ್ತೆಯಲ್ಲಿ ಭಾರೀ ಗಾತ್ರ ಲಾರಿಗಳು ಸಿಲುಕುತ್ತಿದ್ದು, ಇದರಿಂದ ಕೆಲವೊಂದು ಸಲ ಟ್ರಾಫಿಕ್ ಜಾಮ್ ಆಗಿ ಸಮಸ್ಯೆ ತಂದೊಡ್ಡುತ್ತಿದ್ದು, ಜಾಮ್ ತಿಳಿಗೊಳಿಸುವುದು ಹರಸಾಹಸವಾಗುತ್ತದೆ. ಆದ್ದರಿಂದ ಕಾಮಗಾರಿ ಪೂರ್ಣಗೊಳಿಸಬೇಕೆಂಬುದು ಪ್ರತಿಯೊಬ್ಬರ ಹಕ್ಕೊತ್ತಾಯವಾಗಿದೆ.
ಸ್ಥಳೀಯ ಶಾಸಕರು ಕೊಟ್ಯಾಂತರ ಅನುದಾನ ತಂದು ರಸ್ತೆಗಳ ಅಭಿವೃದ್ಧಿ ಮಾಡುತ್ತಿದ್ದಾರೆ. ಆದರೆ, ಗುತ್ತಿಗೆದಾರರ ನಿರ್ಲಕ್ಷ್ಯ ಧೋರಣೆಯಿಂದ ರಸ್ತೆ ಕಾಮಗಾರಿಗಳು ಆಮೆಗತಿಯಲ್ಲಿ ಸಾಗುವ ಮೂಲಕ ವಾಹನ ಮತ್ತು ಜನರ ಸಂಚಾರಕ್ಕೆ ಸಮಸ್ಯೆ ಉಂಟಾಗುತ್ತಿದೆ. ಕೂಡಲೇ ರಸ್ತೆ ಕಾಮಗಾರಿಗೆ ವೇಗ ನೀಡಿ ಪೂರ್ಣಗೊಳಿಸಿ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಿ.
- ಎ.ಎಸ್.ಯಲ್ಲಪ್ಪ. ತಾಲೂಕಾಧ್ಯಕ್ಷ, ಭೀಮ್ ಆರ್ಮಿ ಸಂಘಟನೆ. ಕಂಪ್ಲಿ.
ರಸ್ತೆ ಕಾಮಗಾರಿಯಿಂದ ಏಳುವ ದೂಳಿನಲ್ಲಿ ಸಿಲಿಕಾ ಮತ್ತು ಸೂಕ್ಷ್ಮ ಕಣಗಳು ಇರುತ್ತವೆ. ಇವುಗಳನ್ನು ಉಸಿರಾಡುವುದರಿಂದ ಅಸ್ತಮಾ COPD ಮತ್ತು ಬ್ರಾಂಕೈಟಿಸ್ ಉಲ್ಬಣಗೊಳ್ಳಬಹುದು.
ದೀರ್ಘಕಾಲದ ಕೆಮ್ಮು ಮತ್ತು ಎದೆ ಬಿಗಿತ ಉಂಟಾಗಬಹುದು. ಶ್ವಾಸಕೋಶದ ಸೋಂಕುಗಳು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
- ಡಾ. ಭರತ್ ಪದ್ಮಶಾಲಿ ಬಿ.ಎಸ್.,
MBB5, MD, FIPHCL, FIM (Intemal Medicine) Consultant Preventive Physicion.
ಶ್ರೀ ವೀರ ಬ್ರಹ್ಮೇಂದ್ರ ಸ್ವಾಮಿ ಪಾಲಿ ಕ್ಲಿನಿಕ್, ಕಂಪ್ಲಿ.
ಕಂಪ್ಲಿ ವಾಲ್ಮೀಕಿ ವೃತ್ತದಿಂದ ಸಕ್ಕರೆ ಕಾರ್ಖಾನೆವರೆಗಿನ ರಸ್ತೆ ಕಾಮಗಾರಿಗೆ ವೇಗ ನೀಡುವಂತೆ ಗುತ್ತಿಗೆದಾರರಿಗೆ ತಿಳಿಸಲಾಗುವುದು. ಗಂಗಾವತಿ ರಸ್ತೆಯ ಕಿರು ಸೇತುವೆ ಕಾಮಗಾರಿ ಪೂರ್ಣಗೊಳಿಸಲು ಸೂಚಿಸಲಾಗಿದೆ. ಆದಷ್ಟು ಬೇಗ ರಸ್ತೆ ಕಾಮಗಾರಿಗೆ ಪೂರ್ಣಗೊಳಿಸಲು ಸೂಕ್ತಕ್ರಮವಹಿಸಲಾಗುವುದು. - ಆನಂದ, ಜೆಇ, ಲೋಕೋಪಯೋಗಿ ಇಲಾಖೆ.
ವರದಿ : ಜಿಲಾನಸಾಬ್ ಬಡಿಗೇರ್


















