
ಬಳ್ಳಾರಿ / ಕಂಪ್ಲಿ : ಈ ಬಾರಿಯ ಮುಂಗಾರು ಮಳೆ ಮರಿಚಿಕೆಯಾದ ಹಿನ್ನಲೆ ಕಂಪ್ಲಿ ತಾಲೂಕು ವ್ಯಾಪ್ತಿಯ ಪಂಪ್ಸೆಟ್ ಆಧರಿಸಿದ ರೈತರ ಜಮೀನುಗಳಲ್ಲಿ ಬೆಳೆದ ಭತ್ತದ ಬೆಳೆಗಳು ನೀರಿಲ್ಲದೇ, ಸಂಪೂರ್ಣವಾಗಿ ಒಣಗಿದ್ದು, ರೈತರು ಕಂಗಾಲಾಗಿದ್ದಾರೆ.
ಕಂಪ್ಲಿ ಪಟ್ಟಣ, ನದಿ ತೀರದ ಗ್ರಾಮೀಣ ಭಾಗದಲ್ಲಿ ಸುಮಾರು ಸಾವಿರಾರು ಎಕರೆ ಪ್ರದೇಶದಲ್ಲಿ ಕೃಷಿ ಆಶ್ರಿತ ಭೂಮಿಯಲ್ಲಿ ಪಂಪ್ಸೆಟ್ ನಂಬಿ ಬೆಳೆದ ಭತ್ತ ಬೆಳೆಗಳು ನೀರಿಲ್ಲದೇ ಬಣಗುಡುತ್ತಿವೆ.
ಮೂರು ರಾಜ್ಯದ ಜೀವನಾಡಿ ತುಂಗಭದ್ರ ಜಲಾಶಯದಲ್ಲಿ ನೀರಿನ ಸಂಗ್ರಹ ಇಲ್ಲದಂತಾಗಿರುವುದು ಮೇಲ್ಭಾಗದ ಮಲೆನಾಡಿನಲ್ಲಿ ಮಳೆ ಬಾರದೇ ಇರುವುದು ಮುಖ್ಯ ಕಾರಣವಾಗಿದೆ. ಇದರಿಂದ ಜಲಾಶಯದ ನದಿಯಲ್ಲಿ ನೀರು ಸಂಪೂರ್ಣವಾಗಿ ಬತ್ತಿದ್ದು, ಜಲಚರ ಪ್ರಾಣಿಗಳ ಜೀವಕ್ಕೆ ಜಲಕಂಟಕವಾಗಿದೆ. ಇದರಿಂದ ಅನ್ನದಾತರ ಜೀವನವೂ ದುಸ್ತರವಾಗಿದೆ.
ಕಳೆದ ಒಂದು ತಿಂಗಳ ಹಿಂದೇ ನದಿಯಲ್ಲಿ ನೀರು ಹರಿದ ಹಿನ್ನಲೆ ಈ ಭಾಗದ ರೈತರು ಬೋರ್ವೇಲ್ ಮೂಲಕ ಜಮೀನುಗಳಿಗೆ ನೀರು ಹರಿಸಿಕೊಂಡು ಸಸಿ ಮಡಿಗಳನ್ನು ಹಾಕಿ, ನಂತರ ಭತ್ತ ನಾಟಿ ಮಾಡಿ ಒಂದೂವರೆ ತಿಂಗಳಾಗಿದೆ. ಇಲ್ಲಿತನ ನೀರಿನ ಸಮಸ್ಯೆ ತಲೆ ದೋರಿದ್ದಿಲ್ಲ. ಆದರೆ, ಈಗ ನದಿಯಲ್ಲಿ ನೀರಿನ ಪ್ರಮಾಣ ಗಣನೀಯವಾಗಿ ಇಳಿಮುಖವಾಗಿದ್ದು, ರೈತರ ಬೆಳೆಗಳಿಗೆ ನೀರಿನ ಕಂಟಕ ಎದುರಾಗಿದೆ.
ಕಂಪ್ಲಿ, ಎಮ್ಮಿಗನೂರು, ಮಣ್ಣೂರು ಸೂಗೂರು, ರಾಮಚಂದ್ರಪುರ ಕ್ಯಾಂಪ್, ಸಣಾಪುರ, ಇಟಗಿ, ನಂ.2 ಮುದ್ದಾಪುರ ಸೇರಿದಂತೆ ನದಿ ಬಳಿಯಲ್ಲಿರುವ ಪಂಪ್ಸೆಟ್ ಆಧರಿಸಿದ ಸಾವಿರಾರು ಎಕರೆ ಪ್ರದೇಶದ ಜಮೀನುಗಳಲ್ಲಿ ಭತ್ತ ಬೆಳೆ ಬೆಳೆಯಲಾಗಿದೆ. ಪ್ರಥಮ ಹಂತದಲ್ಲಿ ಭೂಮಿ ಹದ ಮಾಡುವುದರಿಂದ ಸಸಿ ಬೆಳವಣಿಗೆಗೆ ಮತ್ತು ನಂತರದ ನಾಟಿಯಿಂದ ಹಿಡಿದು ಒಂದು ವರೆ ತಿಂಗಳವರೆಗೆ ಗೊಬ್ಬರದೊಂದಿಗೆ ಸುಮಾರು 25 ಸಾವಿರಕ್ಕೂ ಹೆಚ್ಚು ಖರ್ಚು ಮಾಡಿದ್ದು, ಈಗ ಬೆಳೆದ ಬೆಳೆ ತೆಗೆದುಕೊಳ್ಳಲು ಹರಸಾಹಸ ಪಡುವಂತಹ ಸ್ಥಿತಿ ನಿರ್ಮಾಣವಾಗಿದೆ. ಈಗಾಗಲೇ ನದಿಯಲ್ಲಿ ನೀರಿನ ಹರಿವು ಬತ್ತಿದ್ದು, ಬೆಳೆಗಳಿಗೆ ನೀರು ಹರಿಸುವುದು ಹೇಗಪ್ಪಾ ಎಂಬ ಚಿಂತೆ ರೈತರಾದ್ದಾಗಿದೆ.
ಬೆಲೆ ಏರಿಕೆ ಬಿಸಿ : ಮಧ್ಯಪ್ರಾಚ್ಯದ ಯುದ್ದದಿಂದಾಗಿ ಡಿಸೇಲ್, ಪೆಟ್ರೋಲ್, ರಸಗೊಬ್ಬರ ಬೆಲೆಗಳು ಗಗನಕ್ಕೇರಿದ್ದು, ಇದರ ನಡುವೆ ಅನಿವಾರ್ಯವಾಗಿ ಬೆಳೆಗಳನ್ನು ಬೆಳೆದಿದ್ದಾರೆ. ಇಂದಿನ ದಿನಮಾನದಲ್ಲಿ ಬೆಳೆದ ಬೆಳೆಗಳಿಗೆ ಬೆಂಬಲ ಬೆಲೆ ಇಲ್ಲದ ಪರಿಣಾಮ ಇಂದಿನ ಬೆಲೆ ಏರಿಕೆ ಮಧ್ಯದಲ್ಲಿ ರೈತರ ಬದುಕು ದುಸ್ಥರವಾಗಿದೆ.
ರೈತರ ಸಂಕಷ್ಟ : ಕಳೆದ ಬಾರಿ ಕ್ರಸ್ಟ್ ಗೇಟ್ ಕಟ್ಟಾದ ಪರಿಣಾಮ ಎರಡನೇ ಬೇಸಿಗೆ ಬೆಳೆ ಇಲ್ಲದೇ ರೈತರು ಸಂಕಷ್ಟ ಎದುರಿದ್ದರು. ಈಗ ಜಲಾಶಯದ ಹೊಸ ಕ್ರಸ್ಟ್ ಗೇಟ್ಗಳನ್ನು ಅಳವಡಿಸಿದ ಹಿನ್ನಲೆ ಈ ಬಾರಿಯಾದರೂ ರೈತರ ಬದುಕಿಗೆ ಬೆಳೆಗಳು ಆಸರೆಯಾಬಹುದು ಎಂಬ ನಿರೀಕ್ಷೆಯನ್ನು ಹೊಂದಿದ್ದರು. ಆದರೆ, ಈ ಸಲ ವಾಡಿಕೆಗಿಂತ ಮಳೆ ಕೈಕೊಟ್ಟ ಪರಿಣಾಮ ಮುಂಗಾರು ಬೆಳೆಗೆ ನೀರಿಲ್ಲದಂತಾಗಿದ್ದು, ಮತ್ತು ನದಿಯಲ್ಲಿ ನೀರಿನ ಪ್ರಮಾಣ ಬತ್ತಿ ಹೋಗಿದೆ. ನದಿ ನೀರನ್ನೇ ಅವಲಂಭಿಸಿದ ರೈತರು ಪಂಪ್ಸೆಟ್ ಮೂಲಕ ಭತ್ತದ ನಾಟಿ ಮಾಡಿ, ಬೆಳೆಗಳನ್ನು ಬೆಳೆಸಿದ್ದರು. ಆದರೆ, ಈಗ ನದಿಯಲ್ಲಿ ನೀರು ಇಲ್ಲದಂತಾಗಿದ್ದು, ಬೆಳೆ ಉಳಿಸಿಕೊಳ್ಳಲು ರೈತರು ಹರಸಾಹಸ ಪಡುವಂತಾಗಿದ್ದು, ರೈತರ ಬದುಕು ಉಳಿಸಲು ನದಿಗೆ ನೀರು ಹರಿಸುವ ಅವಶ್ಯಕತೆ ಇದೆ.
ಅಂತರ್ಜಲ ಕುಸಿತ : ಈಗಾಗಲೇ ಜಲಾಶಯದಲ್ಲಿ ನೀರು ಇಲ್ಲದೇ ಇರುವುದು ನದಿಯಲ್ಲಿ ನೀರು ಬತ್ತಿದ್ದು, ಇದರಿಂದ ಅಂತರ್ಜಲವೂ ಕೂಡ ಸಂಪೂರ್ಣವಾಗಿ ಕುಸಿದಿದೆ. ಇದರಿಂದ ರೈತರು ಬದುಕು ಅತಂತ್ರದಲ್ಲಿ ಸಾಗುವ ಜೊತೆಗೆ ಚಿಂತೆಗೀಡು ಮಾಡಿದೆ.
ಒಟ್ನಲ್ಲಿ ಭತ್ತದ ಬೆಳೆ ಬೆಳೆದ ರೈತರ ಬದುಕು ಸಂಕಷ್ಟದಲ್ಲಿ ದೂಡಿದ್ದು, ನದಿಗೆ ನೀರು ಹರಿಸಿದರೆ, ರೈತರ ಜಮೀನುಗಳಿಗೆ ಕಳೆ ಬರುವ ಜೊತೆಗೆ ಬೆಳೆಗಳನ್ನು ಉಳಿಸಲು ಸಾಧ್ಯ ಎನ್ನುವಂತಿದೆ.
ಎಮ್ಮಿಗನೂರು ಗ್ರಾಮದ ಸೂಗೂರು ರಸ್ತೆಯ ಪಂಪ್ಸೆಟ್ ಆಧಾರದಲ್ಲಿ ಸುಮಾರು 50ಕ್ಕೂ ಹೆಚ್ಚು ಎಕರೆ ಜಮೀನಿನಲ್ಲಿ ಭತ್ತ ಬೆಳೆ ಬೆಳೆಯಲಾಗಿದೆ. ಆದರೆ, ಈಗ ಪಂಪ್ಸೆಟ್ನಲ್ಲಿ ನೀರಿಲ್ಲದೇ ಇರುವುದರಿಂದ ಬೆಳೆಗಳು ಒಣಗುತ್ತಿದೆ. ಇದರಿಂದ ಬೆಳೆ ರಕ್ಷಣೆ ಮಾಡಿಕೊಳ್ಳುವುದು ಕಷ್ಟಕರವಾಗಿದೆ. ಆದ್ದರಿಂದ ನದಿಗೆ ನೀರು ಬಿಟ್ಟರೆ, ಪಂಪ್ಸೆಟ್ ಬೆಳೆಗಳಿಗೆ ನೀರು ಒದಗಿಸಲು ಸಾಧ್ಯ.
- ಮಲ್ಲಿಕಾರ್ಜುನರಾವ್, ರೈತ, ಎಮ್ಮಿಗನೂರು.
ವರದಿ : ಜಿಲಾನಸಾಬ್ ಬಡಿಗೇರ್




















