ಬಳ್ಳಾರಿ: ಮದುವೆಯ ಸಂಭ್ರಮದ ಮನೆ ಇನ್ನೂ ಮಂಟಪದ ಸಿಂಗಾರದಿಂದಲೂ ಹೊರಬಂದಿರಲಿಲ್ಲ. ಹೊಸ ಜೀವನದ ನೂರಾರು ಕನಸುಗಳೊಂದಿಗೆ ಕೈಹಿಡಿದ ದಂಪತಿಗಳ ಮುಖದಲ್ಲಿನ ನಗು ಇನ್ನೂ ಮಾಸಿರಲಿಲ್ಲ. ಆದರೆ, ವಿಧಿಯ ಕ್ರೂರ ಆಟಕ್ಕೆ ಮದುವೆಯಾಗಿ ಕೆಲವೇ ಗಂಟೆಗಳು ಕಳೆಯುವಷ್ಟರಲ್ಲಿ ನವ ವರನೊಬ್ಬ ಭೀಕರವಾಗಿ ಕೊಲೆಯಾದ ಹೃದಯವಿದ್ರಾವಕ ಘಟನೆಯೊಂದು ಬಳ್ಳಾರಿಯಲ್ಲಿ ನಡೆದಿದ್ದು, ಮದುವೆ ಮನೆ ಕ್ಷಣಾರ್ಧದಲ್ಲಿ ಸ್ಮಶಾನ ಸದೃಶವಾಗಿದೆ.
ಬಳ್ಳಾರಿ ನಗರದ 29ನೇ ವಾರ್ಡ್ನ ಸಮತಾ ನಗರದಲ್ಲಿ ಈ ದುರ್ಘಟನೆ ನಡೆದಿದ್ದು, ಸ್ಥಳೀಯ ಬೋಟಿ ಮಾರ್ಕೆಟ್ ಹಾಗೂ ಗಾರೆ ಕೆಲಸ ಮಾಡುತ್ತಿದ್ದ ನಬಿ ರಸೂಲ್ ಕೊಲೆಯಾದ ದುರ್ದೈವಿ. ಸುಮಾರು 15 ದಿನಗಳ ಹಿಂದಷ್ಟೇ ವಿಚ್ಛೇದನ ಪಡೆದಿದ್ದ ಯುವತಿಯನ್ನು ನಬಿ ರಸೂಲ್ ಪ್ರಾಣದಂತೆ ಪ್ರೀತಿಸುತ್ತಿದ್ದರು. ಇಬ್ಬರೂ ಜೊತೆಯಾಗಿ ಮನೆಗೆ ಮರಳಿದ ಬಳಿಕ, ಇವರ ಪ್ರೀತಿಯನ್ನು ಒಪ್ಪಿದ ಎರಡೂ ಕುಟುಂಬಸ್ಥರು ಗುರುವಾರವಷ್ಟೇ ಅತ್ಯಂತ ಸಡಗರದಿಂದ ಮದುವೆ ಹಾಗೂ ಆರತಕ್ಷತೆ ಕಾರ್ಯಕ್ರಮವನ್ನು ನೆರವೇರಿಸಿದ್ದರು.
ಆರತಕ್ಷತೆಯ ಸಡಗರ ಮುಗಿಸಿ ರಾತ್ರಿ ಸುಮಾರು 11:30ರ ವೇಳೆಗೆ ನಬಿ ರಸೂಲ್ ಮನೆಯಲ್ಲಿದ್ದಾಗ ಆತನ ಮೊಬೈಲ್ಗೆ ಸ್ನೇಹಿತನೊಬ್ಬನಿಂದ ಕರೆ ಬಂದಿದೆ. ಸ್ನೇಹಿತ ಕರೆಯುತ್ತಿದ್ದಾನೆ, ಮಾತನಾಡಿಕೊಂಡು ಬರುತ್ತೇನೆ ಎಂದು ಪತ್ನಿಗೆ ಹೇಳಿ ಮನೆಯಿಂದ ಹೊರಟ ನಬಿ, ಮರಳಿ ಮನೆಗೆ ಬರಲೇ ಇಲ್ಲ. ಇತ್ತ ಪತಿಗಾಗಿ ನವವಧು ಹಾಗೂ ಕುಟುಂಬಸ್ಥರು ಆತಂಕದಿಂದ ಕಾಯುತ್ತಿದ್ದಾಗಲೇ ತಡರಾತ್ರಿ 2 ಗಂಟೆಯ ಸುಮಾರಿಗೆ ಬರಸಿಡಿಲಿನಂತಹ ಸುದ್ದಿಯೊಂದು ಬಂದಿದೆ.
ಮನೆಯಿಂದ ಕೇವಲ 700 ಮೀಟರ್ ದೂರದಲ್ಲಿ ನಬಿ ರಸೂಲ್ ರಕ್ತದ ಮಡುವಿನಲ್ಲಿ ಕೊಲೆಯಾಗಿ ಬಿದ್ದಿರುವುದು ಪತ್ತೆಯಾಗಿದೆ. ಇಡೀ ದಿನ ಸಂತೋಷದಿಂದ ಕಂಗೊಳಿಸುತ್ತಿದ್ದ ಮನೆಯಲ್ಲಿ ಮದುಮಗನ ಕಳೇಬರಹ ಕಂಡು ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ನವವಧುವಿನ ಆಕ್ರಂದನ ನೆರೆದಿದ್ದವರ ಕಣ್ಣಾಲಿಗಳನ್ನೂ ಒದ್ದೆಯಾಗಿಸಿದ್ದು, ಇಡೀ ಗ್ರಾಮವೇ ಕಂಬನಿ ಮಿಡಿಯುವಂತೆ ಮಾಡಿದೆ.
ವಿಷಯ ತಿಳಿಯುತ್ತಿದ್ದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸುಮನ್ ಪನ್ನೆಕರ್, ಡಿವೈಎಸ್ಪಿ ಸ್ವನದಾಳ ಹಾಗೂ ಇತರೆ ಹಿರಿಯ ಪೊಲೀಸ್ ಅಧಿಕಾರಿಗಳು ಮಧ್ಯರಾತ್ರಿಯೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊಲೀಸರು ಘಟನಾ ಸ್ಥಳದ ಮಹಜರು ನಡೆಸಿ ಪ್ರಮುಖ ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಪ್ರೀತಿ-ಮದುವೆಯ ಹಿನ್ನೆಲೆಯಲ್ಲೇ ಈ ಹತ್ಯೆ ನಡೆದಿದೆಯೇ ಅಥವಾ ಹಳೆಯ ವೈಷಮ್ಯ ಕಾರಣವೇ ಎಂಬ ಆಯಾಮದಲ್ಲಿ ತನಿಖೆ ಕೈಗೊಂಡಿದ್ದಾರೆ. ಸದ್ಯ ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
ವರದಿ : ಜಿಲಾನಸಾಬ್ ಬಡಿಗೇರ್




















