ಗಂಗಾವತಿ: ಅಗಸ್ಟ್-22 ಶನಿವಾರದಂದು ಗಂಗಾವತಿ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ಗಂಗಾವತಿ ತಾಲೂಕು ಚುಟುಕು ಸಾಹಿತ್ಯ ಪರಿಷತ್ತು ಎರ್ಪಡಿಸಿರುವ ಕಾರ್ಖಾನೆಗಳಿಂದಾಗುವ ದುಷ್ಪರಿಣಾಮಗಳು ಪರಿಸರ ಕಾಳಜಿ ಕವಿಗೋಷ್ಠಿ ಯಶಸ್ವಿಯಾಗಿ ಜರುಗಿತು.
ಕವಿಗೋಷ್ಠಿಯ ಉದ್ಘಾಟನೆಯನ್ನು ಹಿರಿಯ ಸಾಹಿತಿಗಳಾದ ಎನ್., ಶರಣಪ್ಪ ಮೆಟ್ರಿ ಯವರು ನೆರವೇರಿಸಿದರು. ಅಧ್ಯಕ್ಷತೆಯನ್ನು ಎಸ್.ಕೆ.ಎನ್.ಜಿ ಕಾಲೇಜಿನ ಸಹ ಪ್ರಾಧ್ಯಾಪಕರಾದ ಡಾ. ಮುಮ್ತಾಜ್ ಬೇಗಂ ವಹಿಸಿದ್ದರು.
ಮುಖ್ಯ ಅಥಿತಿಗಳಾಗಿ ವೇದಿಕೆಯಲ್ಲಿ ಹಿರಿಯ ಸಾಹಿತಿಗಳಾದ ನಾಗಭೂಷಣ ಅರಳಿ, ಎಸ್.ಕೆ.ಎನ್.ಜಿ ಕಾಲೇಜಿನ ಉಪನ್ಯಾಸಕರಾದ ಪವನಕುಮಾರ್ ಗುಂಡೂರ್, ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ರುದ್ರಪ್ಪ ಭಂಡಾರಿ, ಕನ್ನಡ ಸಾಹಿತ್ಯ ಪರಿಷತ್ತನ ತಾಲೂಕ ಅದ್ಯಕ್ಷರಾದ ರುದ್ರೇಶ ಎಂ ಆರ್ಹಾಳ್, ದಲಿತ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಮೈಲಾರಪ್ಪ ಬೂದಿಹಾಳ ಪಾಲ್ಗೊಂಡಿದ್ದರು.
ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷರಾದ ಅಶೋಕ ಗುಡಿಕೋಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, ಚುಟುಕು ಸಾಹಿತ್ಯ ಪರಿಷತ್ತು ಸುಮಾರು ವರ್ಷಗಳಿಂದ ಅಸ್ಥಿತ್ವದಲ್ಲಿದ್ದು ಕವಿಗೋಷ್ಠಿ ಸೇರಿದಂತೆ ಹಲವಾರು ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಅದೆ ರೀತಿಯಲ್ಲಿ ಪರಿಷತ್ತಿಗೆ ಹಿರಿಯ ಸಾಹಿತಿಗಳು ಸಹಕಾರ ನೀಡುತ್ತಾ ಬಂದಿರುತ್ತಾರೆ. ಮುಂದಿನ ದಿನಗಳಲ್ಲಿಯೂ ಎಲ್ಲಾ ಸಾಹಿತಿಗಳು ಇದೇ ರೀತಿ ಸಹಕಾರ ನೀಡುವುದರೊಂದಿಗೆ ಚುಟುಕು ಸಾಹಿತ್ಯ ಪರಿಷತ್ತಿನ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಸದುಪಯೋಗಪಡಿಸಿಕೊಳ್ಳಬೇಕೆಂದು ನುಡಿದರು.
ಕವಿಗೋಷ್ಠಿ ಅಧ್ಯಕ್ಷೀಯ ಭಾಷಣ ಮಾಡಿದ ಡಾ. ಮುಮ್ತಾಜ್ ಬೇಗಂ ಅವರು, “ಕವಿತೆ ಭಾವನಾತ್ಮಕ ಅಭಿವ್ಯಕ್ತಿಯ ವಿಧಾನವಾಗಿದೆ, ಕವಿತೆ ಸಾಮಾನ್ಯವಲ್ಲ ಅದೊಂದು ಸಾಮಾಜಿಕ ಕನ್ನಡಿ, ಸಾಮಾಜಿಕ ಸಮಸ್ಯೆಗಳನ್ನು ಒಳಗೊಂಡು ಪರಿಸರ ಕಾಳಜಿ ಚಿತ್ರಣ, ಪ್ರೇರಣೆ ಹೀಗೆ ಹಲವಾರು ಮುಖಗಳತ್ತ ಮುಖ ಮಾಡುತ್ತಾ, ತನ್ನ ಅಸ್ಥಿತ್ವದಲ್ಲಿರುತ್ತದೆ. ಕಾವ್ಯ ಓದುವವರು, ಬರೆಯುವವರು ಅದರ ಆಶಯ, ಚೌಕಟ್ಟುಗಳ ಮಿತಿ ಅರಿತಿರಬೇಕೆಂದು ತಿಳಿಸಿದರು.
ಈ ಕವಿಗೋಷ್ಠಿಗೆ ಸ್ವಲ್ಪ ತಡವಾಗಿ ಆಗಮಿಸಿದ ಬಿ. ಪ್ರಾಣೇಶರವರು ಕವಿಗೋಷ್ಠಿ ,ಕವಿಗಳು ಕುರಿತು ವಿವರಿಸಿ, ಗಂಗಾವತಿಯ ಚುಟುಕು ಸಾಹಿತ್ಯ ಪರಿಷತ್ತಿನ ತಾಲೂಕು ಅಧ್ಯಕ್ಷರಾದ ಅಶೋಕ ಗುಡಿಕೋಟಿಯವರು ಆಗಾಗ ವಿಬಿನ್ನ ರೀತಿಯಲ್ಲಿ ಸಾಹಿತ್ಯಾಸಕ್ತರಿಗಾಗಿಯೆ ಕವಿಗೋಷ್ಠಿಯನ್ನು ಏರ್ಪಾಡು ಮಾಡುತ್ತಾ ಬರುತ್ತಿದ್ದಾರೆ. ಕಾವ್ಯ ಕೂಡಾ ತನ್ನದೆ ಆದ ವೈಶಿಷ್ಠ್ಯತೆಯನ್ನು ಹೊಂದಿದೆ. ಇದನ್ನು ಕವಿಗಳು ಮನವರಿಕೆ ಮಾಡಿಕೊಳ್ಳಬೇಕು. ಪರಸ್ಪರ ಕವಿಗಳಲ್ಲಿ ಇದ್ದರೂ ಮುನಿಸು, ಕವಿಗೋಷ್ಠಿಗಳಲ್ಲಿ ಕವನ ಸೊಗಸು ಎಂದು ಕುಟುಕಿದರು.
ಈ ಕವಿಗೋಷ್ಠಿಯಲ್ಲಿ ಎನ್. ಜಡಿಯಪ್ಪ ಮೆಟ್ರಿ, ಡಾ ಸುರೇಂದ್ರ ಬೇವಿನಹಳ್ಳಿ, ಸಾವಿತ್ರಿ ಹಿರೇಮಠ, ಎಂ.ಎಸ್ ನಾರಾಯಣ್, ಛತ್ರಪ್ಪ ತಂಬೂರಿ, ಶೀವನಗೌಡ ತಗ್ಗಿ, ಭುವನೇಶ್ವರಿ ಸಾರಂಗಮಠ, ಶಶಿಕಲಾ ಕುರುಗೋಡ, ಸೋಮಶೇಖರ್ ಕಂಚಿ, ವಿರುಪಣ್ಣ ಡಣಾಪುರ್, ಕವಿತಾ ನಾಯಕ್ ಸೇರಿದಂತೆ ಒಟ್ಟು 24 ಕ್ಕೂ ಹೆಚ್ಚು ಕವಿಗಳು ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ವಿಶೇಷವಾಗಿ ವಂಶವೃಕ್ಷ ದತ್ತಿ ಪ್ರಶಸ್ತಿ ಪಡೆದ ಚುಟುಕು ಸಾಹಿತ್ಯ ಪರಿಷತ್ತಿನ ಜಿಲ್ಲಾದ್ಯಕ್ಷರಾದ ರುದ್ರಪ್ಪ ಭಂಡಾರಿಯವರಿಗೆ ಮತ್ತು ನೂತನವಾಗಿ ದಲಿತ ಸಾಹಿತ್ಯ ಪರಿಷತ್ತಿಗೆ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಮೈಲಾರಪ್ಪ ಬೂದಿಹಾಳ ಅವರಿಗೆ ಸನ್ಮಾನಿಸಿ ಗೌರವಿಸಲಾಯಿತು.
- ಕರುನಾಡ ಕಂದ ಸುದ್ದಿ




















