ಇವರು ನಮ್ಮನ್ನಾಳುವ
ನಾವೇ ಆಳಿರಿ ಎಂದು ಆರಿಸಿ ಕಳಿಸಿದ ಜನಪ್ರತಿನಿಧಿಗಳಯ್ಯ,
ಉಳ್ಳವರು ಇಲ್ಲಿ ನೆರೆ ಸಂತ್ರಸ್ತರಿಗೆ, ನೆರವು ನೀಡಲಿಲ್ಲವಯ್ಯ,!
ಹಣವನ್ನೇ ತಿಂದು ತೇಗಿ
ನುಂಗಿ ನೀರು ಕುಡಿದರಯ್ಯ,
ಉಳ್ಳವರು ಅಕ್ರಮ ಗಣಿಗಾರಿಕೆಯಲ್ಲಿ,
ಸಕ್ರಿಯವಾಗಿ ತೊಡಗಿಸಿಕೊಂಡರಯ್ಯ,
ನಿಮ್ಮೂರ ಸ್ವರ್ಗ ಮಾಡುತ್ತೇವೆಂದು
ಬಡ ಜನರನ್ನು ಬಗ್ಗು ಬಡಿದರಯ್ಯ!
ಲೈಂಗಿಕ ಹಗರಣವ ಮಾಡಿದರೂ,
ಮಂತ್ರಿಗಳಾಗಿ ಮೆರೆವರಯ್ಯ!
ಜಮೀನು ಕಬಳಿಸಿ, ಜೈಲು ಸೇರಿದರೂ
ಜಾಮೀನಿನ ಮೇಲೆ
ಬಯಲಿಗೆ ಬಂದರಯ್ಯ,!
ಸ್ವಾರ್ಥ ಸಾಧನೆಗೆ ಇವರು
ಏನೆಲ್ಲ ಮಾಡಲೂ ಹೇಸರಯ್ಯ
ಯಾಕೆಂದು ಕೇಳಲು ಹೋದರೆ
ಇದು, ‘ರಾಜಕೀಯ,’ ನಿನಗರ್ಥವಾಗುವುದಿಲ್ಲ,
ಎನ್ನುವರಯ್ಯ!
ಅಧಿಕಾರ ಸಿಕ್ಕ ಮೇಲೆ
ನಾವಾರು, ತಾವಾರು ಎಂಬುದನ್ನೇ ಮರೆಯುವರಯ್ಯ, ಇದು ಎಂಥ ಲೋಕವಯ್ಯ,
ಇದೇ ರಾಜಕೀಯವಯ್ಯ!.
- ಶಿವಪ್ರಸಾದ್ ಹಾದಿಮನಿ, ಕೊಪ್ಪಳ.




















