ವಿಶ್ವಮಟ್ಟದಲ್ಲಿ ಅತ್ಯಂತ ಕಿರಿಯ ವಯಸ್ಸಿನಲ್ಲಿ 20 ಕ್ಕೂ ಹೆಚ್ಚು ವಿಶ್ವದಾಖಲೆಗಳನ್ನು ಬರೆದು, ಕನ್ನಡದಲ್ಲಿ ‘ಮಿನುಗುತಾರೆ’ ಎಂಬ ಚುಟುಕು ಕವನ ಸಂಕಲನ ಪುಸ್ತಕವನ್ನು ಪ್ರಕಟಿಸುವ ಮೂಲಕ ರಾಜ್ಯದ ಪ್ರ ಪ್ರಥಮ ಬಾಲಕ ಎಂಬ ಕೀರ್ತಿಗೆ ಭಾಜನನಾಗಿರುವ ಅಪ್ರತಿಮ ಬಾಲ ಪ್ರತಿಭೆ, ಗ್ರ್ಯಾಂಡ್ ಮಾಸ್ಟರ್ ಖ್ಯಾತಿಯ, 3 ನೇ ತರಗತಿ ವಿದ್ಯಾರ್ಥಿ ಲಕ್ಕೂರಿನ ತಾನೀಶ್ ಎನ್. ಅವರನ್ನು ಮಾಲೂರಿನ ಪ್ರಸಿದ್ಧ ಶ್ರೀ ಮಾರಿಕಾಂಬಾ ದೇವಾಲಯ ಟ್ರಸ್ಟ್ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.
ಈ ಬಗ್ಗೆ ಮಾತನಾಡಿದ ಶ್ರೀ ಮಾರಿಕಾಂಬಾ ದೇವಾಲಯ ಟ್ರಸ್ಟ್ ನ ಅಧ್ಯಕ್ಷರಾದ ವೆಂಕಟೇಶ್ ರವರು “ತನ್ನ ಅಸಾಧಾರಣ ಜ್ಞಾಪಕ ಶಕ್ತಿ, ಬಹುಮುಖ ಪ್ರತಿಭೆ ಹಾಗೂ ಸಾಹಿತ್ಯಿಕ ಆಸಕ್ತಿಯಿಂದ ನಾಡಿನ ಗಮನ ಸೆಳೆದಿರುವ ತಾನೀಶ್, ಕಿರಿಯ ಪ್ರಾಯದಲ್ಲೇ ಅತಿ ಹೆಚ್ಚು ವಿಶ್ವದಾಖಲೆಗಳನ್ನು ನಿರ್ಮಿಸಿದ ಹೆಗ್ಗಳಿಕೆಗೆ ಪಾತ್ರನಾಗಿದ್ದಾನೆ. ಸಾಹಿತ್ಯ ಕ್ಷೇತ್ರದಲ್ಲಿ ಈತನ ಸಾಧನೆಯನ್ನು ಪರಿಗಣಿಸಿ, ಮಾರಿಕಾಂಬಾ ದೇವಾಲಯದ ಆವರಣದಲ್ಲಿ ನಡೆದ ವಿಶೇಷ ಸಮಾರಂಭದಲ್ಲಿ ಟ್ರಸ್ಟ್ನ ಪದಾಧಿಕಾರಿಗಳು ಬಾಲಕನಿಗೆ ಸ್ಮರಣಿಕೆ ಹಾಗೂ ಶಾಲು ಹೊದಿಸಿ ಮಿನುಗುತಾರೆಯನ್ನು ಹರಸಿದ್ದೇವೆ ತಾಯಿ ಮಾರಿಕಾಂಬಾ ಎಲ್ಲಾವೂ ಒಳಿತನ್ನು ಮಾಡಲಿ” ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಕೆಂಪಯ್ಯ, ಮಾರಿಕಾಂಬ ದೇವಾಲಯ ಟ್ರಸ್ಟ್ ನ ತಬಲ ನಾರಾಯಣಪ್ಪ, ನಂಜುಂಡಪ್ಪ, ಅಂಜನಿ ಹನುಮಂತಪ್ಪ, ಲೆಕ್ಕ ಪತ್ರ ಅಧಿಕಾರಿ ಮಂಜುನಾಥ್, ಮ್ಯಾನೇಜರ್ ಮಂಜುನಾಥ್, ಸಾಧಕನ ತಂದೆ ಲಕ್ಕೂರು ಎಂ.ನಾಗರಾಜ್, ತಾಯಿ ಶ್ರೀಮತಿ ಶ್ವೇತನಾಗರಾಜ್, ಜಾನಪದ ಗಾಯಕ ಪಿಚ್ಚಳ್ಳಿ ಶ್ರೀನಿವಾಸ್, ಮಾಜಿ ನಗಸರಭಾ ಸದಸ್ಯ ಮುರಳೀಧರ್, ವೇಮನ, ವಕೀಲರಾದ ಜಗನ್ನಾಥ್, ಲಕ್ಕೂರು ಪುಡ್ ರಮೇಶ್, ಮಾಜಿ ಪುರಸಭಾ ಅಧ್ಯಕ್ಷರಾದ ಸಿ.ಪಿ.ನಾಗರಾಜ್, ಕ್ರೀಡಾ ಕೋಚ್ ಬುಜ್ಜಿ ಶ್ರೀನಾಥ್, ಮಾಲೂರು ಮಾರಿಕಾಂಬಾ ದೇವಾಲಯ ಸಮಿತಿಯ ಸರ್ವ ಸದಸ್ಯರು ಹಾಗೂ ಸಾರ್ವಜನಿಕರು ಹಾಜರಿದ್ದರು.
- ಕರುನಾಡ ಕಂದ ಸುದ್ದಿ




















