ಹುನುಗುಂದ ತಾಲೂಕಿನ ಯರಿ ಗೋನಾಳ- ಪ್ರಭುಶಂಕರೇಶ್ವರ ಗಚ್ಚಿನಮಠದಲ್ಲಿ ಲಿಂ. ರಾಜಗುರು ಪುಟ್ಟರಾಜೇಂದ್ರ ಶ್ರೀಗಳ 23ನೇ ಪುಣ್ಯ ಸ್ಮರಣೋತ್ಸವ ಮತ್ತು ಶಂಕರರಾಜೇಂದ್ರ ಮಹಾಸ್ವಾಮಿಗಳು ಲೋಕ ಕಲ್ಯಾಣಾರ್ಥ ಕೈಗೊಂಡಿದ್ದ ಮೌನಾನುಷ್ಠಾನದ ಮಂಗಳ ಸಮಾರೋಪ, ಪ್ರವಚನ ಮಂಗಳ ಮಹೋತ್ಸವ ನಡೆದಿದೆ.
ಈ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಉಪ್ಪಿನ ಬೆಟಗೇರಿಯ ಮೂರುಸಾವಿರ ವಿರಕ್ತಮಠದ ಕುಮಾರ ವಿರುಪಾಕ್ಷ ಮಹಾಸ್ವಾಮಿಗಳು
ಅಂತರಂಗ ಹಾಗೂ ಬಾಹ್ಯ ಜೀವನವನ್ನು ಶುದ್ಧೀಕರಿಸಿ, ನಿಷ್ಠೆ, ಚಿಂತನೆ ಮತ್ತು ಸದಾಚಾರದ ಬದುಕನ್ನು ಕೊಂಡೊಯ್ಯುವುದೇ ಮೌನಾನುಷ್ಠಾನದ ಪ್ರಮುಖ ಉದ್ದೇಶ. ಮೌನಾನುಷ್ಠಾನ ಕೇವಲ ಧಾರ್ಮಿಕ ಆಚರಣೆಗೆ ಸೀಮಿತವಲ್ಲ, ವ್ಯಕ್ತಿಯ ಮನಸ್ಸಿನಲ್ಲಿರುವ ನಕಾರಾತ್ಮಕ ಚಿಂತನೆಗಳನ್ನು ದೂರ ಮಾಡಿ ಆತ್ಮಶುದ್ಧಿಗೆ ದಾರಿ ಮಾಡಿಕೊಡುವ ಸಾಧನ. ಆಂತರಿಕ ಶುದ್ಧತೆಯೊಂದಿಗೆ ಶಿಸ್ತು, ಸಂಯಮ, ಸತ್ಯ, ಸೇವೆ ಹಾಗೂ ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳುವುದೇ ಅನುಷ್ಠಾನದ ಉದ್ದೇಶ” ಎಂದು ಹೇಳಿದರು.
ಅಡವಿಸಿದ್ದೇಶ್ವರ ಶ್ರೀಗಳು ಮಾತನಾಡಿ “ಮನಸ್ಸು ಶುದ್ಧವಾದರೆ ಆಲೋಚನೆಗಳು ಮತ್ತು ನಡೆ-ನುಡಿ ಶುದ್ಧವಾಗುತ್ತವೆ. ವ್ಯಕ್ತಿಯ ಶುದ್ಧೀಕರಣವೇ ಸಮಾಜದ ಸ್ವಾಸ್ಥ್ಯಕ್ಕೆ ಕಾರಣ” ಎಂದರು.
ಸಮಾರೋಪ ಸಮಾರಂಭದಲ್ಲಿ ಉಪ್ಪಿನ ಬೆಟಗೇರಿಯ ಮೂರುಸಾವಿರ ವಿರಕ್ತಮಠ ಕುಮಾರ ವಿರುಪಾಕ್ಷ ಮಹಾಸ್ವಾಮಿಗಳನ್ನು ಸನ್ಮಾನಿಸಲಾಯಿತು.
ಹೋಳಿ ಹುಚ್ಚೇಶ್ವರ ಶ್ರೀಗಳು, ಅಭಿನವ ಒಪ್ಪತ್ತೇಶ್ವರ ಶ್ರೀಗಳು, ಕೈಲಾಸಲಿಂಗ ಶಿವಾಚಾರ್ಯರು,ಗಚ್ಚಿನಮ ಠದ ಅಮರೇಶ್ವರ ದೇವರು, ಡಾ.ಚನ್ನಮಲ್ಲ ಮಹಾಸ್ವಾಮಿಗಳು, ಶಿವಬಸವರಾಜೇಂದ್ರ, ಮುರುಘೇಂದ್ರ ಮಹಾಸ್ವಾಮಿಗಳು, ಸಂಗಮೇಶ್ವರ ವಿದ್ಯಾವರ್ಧಕ ಸಂಸ್ಥೆಯ ಚೇರ್ಮನ್ ಶ್ರೀ ಕನೂರು, ನಿವೃತ್ತ ಉಪ ಪ್ರಾಚಾರ್ಯ ಆರ್.ಜಿ.ಸನ್ನಿ ಸಿದ್ಧಪ್ಪ ಚನ್ನಪ್ಪನವರ ಸೇರಿದಂತೆ ಅನೇಕ ಗಣ್ಯರು ಇದ್ದರು.
- ಕರುನಾಡ ಕಂದ ಸುದ್ದಿ




















