
ಹುಟ್ಟುಹಬ್ಬ ಮತ್ತು ವಿಶೇಷ ದಿನಗಳಲ್ಲಿ ದುಂದುವೆಚ್ಚ ಮಾಡದೆ, ಬಡವರ ಬದುಕಿನ ಹಾದಿಗೆ ಆಸರೆಯಾಗಿ ಸಹಾಯ ಮಾಡುತ್ತಿರುವ ಸಮಾಜ ಸೇವಕ, ಆಟೋಮೊಬೈಲ್ ನಂದೀಶ್ ಅವರ ಸಮಾಜಮುಖಿ ಕಾರ್ಯಕ್ರಮಗಳು ಹಣವಂತರಿಗೆ ಹಾಗೂ ರಾಜಕಾರಣಿಗಳಿಗೆ ಮಾದರಿಯಾಗಬೇಕು ಎಂದು ಮಾಜಿ ಶಾಸಕ ಕೆ.ಎಸ್. ಮಂಜುನಾಥ್ ಗೌಡ ತಿಳಿಸಿದರು.
ನಗರದಲ್ಲಿ ಸಮಾಜ ಸೇವಕ ಆಟೋಮೊಬೈಲ್ ನಂದೀಶ್ ಅವರ ಸ್ನೇಹಿತರು ಹಾಗೂ ಅಭಿಮಾನಿಗಳು ಆಯೋಜಿಸಿದ್ದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಉಚಿತ ಉಪಯೋಗಕ್ಕಾಗಿ ಅಂತಿಮ ರಥಯಾತ್ರೆ (ಶವಯಾತ್ರೆ) ವಾಹನವನ್ನು ಲೋಕಾರ್ಪಣೆಗೊಳಿಸಿದರು.
ಮಾಜಿ ಶಾಸಕರಾದ ಕೆ.ಎಸ್ ಮಂಜುನಾಥ ಗೌಡ ರವರು ಮಾತನಾಡುತ್ತಾ “ಪ್ರಸ್ತುತ ಸಮಾಜದಲ್ಲಿ ಒಂದು ಹೊತ್ತಿಗೂ ಗತಿಯಿಲ್ಲದ ಹಾಗೂ ಸೂರಿಲ್ಲದ ಎಷ್ಟೋ ಮಂದಿ ಪರದಾಡುವ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದ್ದಾರೆ, ನಾನು ಚಿಕ್ಕಂದಿನಿಂದಲೂ ಕಷ್ಟದಲ್ಲೇ ಬೆಳೆದುಬಂದಿದ್ದು, ಬಡವರ, ದೀನದಲಿತರ, ನಿರ್ಗತಿಕರ ಪರಿಸ್ಥಿತಿ ಏನೆಂಬುದನ್ನು ಹತ್ತಿರದಿಂದ ಕಂಡಿದ್ದೇನೆ. ಇವರ ಅಭಿವೃದ್ಧಿಗೆ ಸಹಾಯ ಮಾಡುವ ಉದ್ದೇಶದಿಂದ ನಂದೀಶ್ ಅವರು ತಾವು ದುಡಿದು ಸಂಪಾದಿಸಿದ ಹಣದಲ್ಲಿ ಸ್ವಲ್ಪ ಭಾಗವನ್ನು ಪ್ರತಿ ವರ್ಷ ತಮ್ಮ ಹುಟ್ಟುಹಬ್ಬದಂದು ಸಮಾಜಿಕ ಕಾರ್ಯಗಳಿಗಾಗಿ ವಿನಿಯೋಗಿಸುತ್ತಿದ್ದಾರೆ. ಅವರಿಗೆ ಬಡವರ ನೆರವಾಗಲು ದೇವರು ಇನ್ನೂ ಹೆಚ್ಚಿನ ಶಕ್ತಿ ನೀಡಲಿ” ಎಂದು ಶುಭ ಹಾರೈಸಿದರು.
ಕಳೆದ ೮ ವರ್ಷಗಳಿಂದ ಒಂದಲ್ಲಾ ಒಂದು ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಅವರು ಜನಪ್ರಿಯರಾಗಿದ್ದಾರೆ. ಈ ಹಿಂದೆ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಸಾರ್ವಜನಿಕ ಉಪಯೋಗಕ್ಕಾಗಿ ಶವಪೆಟ್ಟಿಗೆಗಳನ್ನು ನೀಡಿದ್ದರು. ಪ್ರಸ್ತುತ ಅಂತಿಮ ರಥಯಾತ್ರೆ ವಾಹನವನ್ನು ಉಚಿತವಾಗಿ ನೀಡುತ್ತಿರುವುದು ಶ್ಲಾಘನೀಯ. ಇವರ ಸಮಾಜ ಸೇವೆ ಜನರಿಗೆ ಹೆಚ್ಚು ತಲುಪಲಿ, ಮುಂಬರುವ ದಿನಗಳಲ್ಲಿ ಇವರಿಗೆ ರಾಜಕೀಯವಾಗಿ ಉತ್ತಮ ಅವಕಾಶಗಳು ಸಿಗಲಿ” ಎಂದರು.
ಸಮಾಜ ಸೇವಕ ನಂದೀಶ್ ಮಾತನಾಡಿ, “ನನ್ನ ಹುಟ್ಟುಹಬ್ಬದ ದಿನದಂದು ದುಂದುವೆಚ್ಚ ಮಾಡದೆ, ಬಡ ವಿದ್ಯಾರ್ಥಿಗಳಿಗೆ ಉಚಿತ ಬ್ಯಾಗ್ಗಳು, ಬೀದಿಬದಿ ವ್ಯಾಪಾರ ಮಾಡುವ ಹೂವು, ಹಣ್ಣು, ಟೀ ವ್ಯಾಪಾರಸ್ಥರಿಗೆ ತಳ್ಳುವ ಬಂಡಿಗಳನ್ನು ಕೊಡಿಸಿದ್ದೇನೆ. ಕರೋನಾ ಲಾಕ್ಡೌನ್ ಸಂಕಷ್ಟದ ದಿನಗಳಲ್ಲಿ ಬಡವರಿಗೆ, ನಿರ್ಗತಿಕರಿಗೆ, ಕೂಲಿ ಕಾರ್ಮಿಕರಿಗೆ, ಗುಡಿಸಲು ವಾಸಿಗಳಿಗೆ ಆಹಾರ ಪದಾರ್ಥಗಳ ಕಿಟ್ಗಳನ್ನು ವಿತರಿಸಿದ್ದೇನೆ, ಅನಾರೋಗ್ಯದಿಂದ ಬಳಲುತ್ತಿರುವ ಜನರಿಗೆ ವೈದ್ಯಕೀಯ ಸಹಾಯ, ಬಡ ಆಟೋ ಚಾಲಕರಿಗೆ ಆಟೋ ವಾಹನ ವಿತರಣೆ, ಆಟೋ ಚಾಲಕರಿಗೆ ಹಾಗೂ ಪೌರಕಾರ್ಮಿಕರಿಗೆ ಬಟ್ಟೆ, ಸ್ವೀಟರ್ ನೀಡಿ ಅವರನ್ನು ಸಮಾಜದ ಮುಖ್ಯವಾಹಿನಿಗೆ ತರುವ ಕೆಲಸ ಮಾಡಿದ್ದೇನೆ. ಈ ಬಾರಿ ಹುಟ್ಟುಹಬ್ಬಕ್ಕೆ ಬಡವರು ಹಾಗೂ ಮಧ್ಯಮ ವರ್ಗದ ಜನರಿಗೆ ಅಗತ್ಯವಿರುವ ಅಂತಿಮ ಸಂಸ್ಕಾರದ ರಥಯಾತ್ರೆ ವಾಹನವನ್ನು ಹಾಗೂ ಶವಪೆಟ್ಟಿಗೆಯನ್ನು ಉಚಿತವಾಗಿ ನೀಡುತ್ತಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆಯಬೇಕಾಗಬೇಕು” ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ತಾಲೂಕು ಜೆಡಿಎಸ್ ಅಧ್ಯಕ್ಷ ಸಿ.ಜಿ. ಕೃಷ್ಣಪ್ಪ, ಜಿಲ್ಲಾ ಉಪಾಧ್ಯಕ್ಷ ಮುಡಿವಾಳ ಚಂದ್ರಶೇಖರ್, ಬಾಬು, ಆಟೋ ರಾಮಾಂಜಿ, ತಿರುಮಲಶೆಟ್ಟಿ ದೇವರಾಜ್, ಕೆ.ಎಸ್. ಜಗದೀಶ್, ಸಾಂಬ ವೆಂಕಟೇಶ್, ನಟೇಶ್, ಮುಳ್ಳೂರು ಮಹೇಂದ್ರ, ಸದಾನಂದ, ಕಿರಣ್, ಎಂ.ಎನ್. ನಾಗರಾಜ್, ಐರವನಹಳ್ಳಿ ಆನಂದ್, ದೊಡ್ಡರಾಜಪ್ಪ, ಮುನಿಕೃಷ್ಣ, ಕಿರಣ್ ಸೋಮಣ್ಣ, ವಿಜಯಕುಮಾರ್, ಮೆ.ಕೃ. ಸುರೇಶ್, ರವಿಚಂದ್ರ ಸೇರಿದಂತೆ ಇತರ ಅಭಿಮಾನಿಗಳು ಹಾಗೂ ಸ್ನೇಹಿತರು ಉಪಸ್ಥಿತರಿದ್ದರು.
- ಕರುನಾಡ ಕಂದ ಸುದ್ದಿ




















