ಮುಂಡಗೋಡ : ಅನಾರೋಗ್ಯ ಕಾರಣ
ಎಂದು ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ತೆರಳಿದ್ದ ಬಾಲಕ ಸಾವನ್ನಪ್ಪಿದ ಘಟನೆ ಗುರುವಾರ ನಡೆದಿದೆ.
ಎರಡನೇ ತರಗತಿ ಓದುತ್ತಿದ್ದ ಮುಂಡಗೋಡ ತಾಲೂಕಿನ ತಮ್ಯಾನಕೊಪ್ಪ ಗ್ರಾಮದ ಏಳೂವರೆ ವರ್ಷದ ಯುವರಾಜ್ ಚವ್ಹಾಣ ಎಂಬಾತನೇ ಮೃತ ದುರ್ದೈವಿ ಬಾಲಕನಾಗಿದ್ದು, ಕೆಲ ದಿನಗಳ ಹಿಂದೆ ಬಾಲಕನಿಗೆ ಜ್ವರ ಕಾಣಿಸಿಕೊಂಡಿದೆ, ಈ ವೇಳೆ ಪೋಷಕರು ಮುಂಡಗೋಡ ನಗರದ ಖಾಸಗಿ ಆಸ್ಪತ್ರೆಯೊಂದಕ್ಕೆ ತೆರಳಿ ಚಿಕಿತ್ಸೆ ಪಡೆದುಕೊಂಡು ಮಾತ್ರೆ ತೆಗೆದುಕೊಂಡು ಬಂದಿದ್ದಾರೆ ಚೇತರಿಸಿಕೊಂಡ ಬಾಲಕ ಎಂದಿನಂತೆ ಶಾಲೆಗೆ ಹೋಗಿದ್ದಾನೆ. ಗುರುವಾರ ರಾತ್ರಿ ಮತ್ತೆ ಜ್ವರ ಕಾಣಿಸಿಕೊಂಡು ತೀವ್ರವಾಗಿ ಅಸ್ವಸ್ಥ ನಾದ ಹಿನ್ನೆಲೆ ಪೋಷಕರು ಮುಂಡಗೋಡ ನಗರದ ಹಳೂರು ಓಣಿಯಲ್ಲಿರುವ ಭರತ್ ತಂತ್ರಿಯವರ ಖುಷಿ ಡಿಯೋಗ್ನೊಸ್ಟಿಕ್ ಗೆ ಬೆಳಿಗ್ಗೆ 6.15 ರ ವೇಳೆಗೆ ಚಿಕಿತ್ಸೆಗೆಂದು ಕರೆದುಕೊಂಡು ಹೋಗಿದ್ದು, ಅಲ್ಲಿನ ವೈದ್ಯರಾದ ಭರತ್ ತಂತ್ರಿಯವರು ಬಾಲಕನನ್ನು ಪರೀಕ್ಷಿಸಿ ದಾಖಲು ಮಾಡಿಕೊಂಡಿದ್ದಾರೆ.
ಈ ಸಮಯದಲ್ಲಿ ಬಾಲಕನ ಆರೋಗ್ಯ ಪರಿಸ್ಥಿತಿ ಬಿಗಡಾಯಿಸಿದ ಹಿನ್ನೆಲೆ ಸಿಲಾಯಿನ್ ಹಾಗೂ ವಿವಿಧ ರೀತಿಯ ಇಂಜೆಕ್ಷನ್ ಗಳನ್ನು ನೀಡಿದ್ದಾರೆ.
ಇದೇ ವೇಳೆ ಹುಬ್ಬಳ್ಳಿ ರಸ್ತೆಯಲ್ಲಿರುವ ಮತ್ತೊಂದು ಕ್ಲಿನಿಕ್ ನಿಂದ ಕರೆ ಬಂದ ಬಳಿಕ ತಮ್ಮ ಸ್ಟಾಫ್ ನರ್ಸ್ ಅವರಿಗೆ ಚಿಕಿತ್ಸೆ ಮುಂದುವರೆಸುವಂತೆ ಹೇಳಿ 10 ಗಂಟೆಗೆ ತೆರಳಿದ್ದಾರೆ ಎನ್ನಲಾಗಿದೆ. ಬಳಿಕ ದಾಖಲಾಗಿದ್ದ ಬಾಲಕನ ಆರೋಗ್ಯ ಏರಿಳಿತ ಕಂಡ ಕಾರಣ ನರ್ಸ್ ಅವರು ಇಂಜೆಕ್ಷನ್ ಗಳನ್ನ ನೀಡಿದ್ದಾರೆ. ಮಧ್ಯಾಹ್ನ 1 ಗಂಟೆ ವೇಳೆಗೆ ಮರಳಿ ಆಸ್ಪತ್ರೆಗೆ ಬಂದ ವೈದ್ಯ ಭರತ್ ತಂತ್ರಿಯವರು ಮಗುವನ್ನು ತುರ್ತಾಗಿ ಕಿಮ್ಸ್ ಗೆ ಕರೆದುಕೊಂಡು ಹೋಗಿ ಎಂದು ಅಂಬ್ಯುಲೆನ್ಸ್ ವ್ಯವಸ್ಥೆ ಮಾಡಿ ಕಳುಹಿಸಿದ್ದಾರೆ, ಮಧ್ಯಾಹ್ನ 2.20 ರವೇಳೆಗೆ ಕಿಮ್ಸ್ ಆಸ್ಪತ್ರೆ ತಲುಪಿದ ಪೋಷಕರು,ಕಿಮ್ಸ್ ವೈದ್ಯರ ಬಳಿ ತೋರಿಸಿದ್ದಾರೆ ಬಾಲಕ ಈಗಾಗಲೇ ಮೃತಪಟ್ಟಿದ್ದಾನೆ ಎಂದು ವೈದ್ಯರು ಲಿಖಿತವಾಗಿ ತಿಳಿಸಿದ್ದಾರೆ ಎಂದು ಪೋಷಕರು ಮಾಹಿತಿ ನೀಡಿದ್ದಾರೆ.
ಸತತ ಏಳು ಗಂಟೆ ಕಾಲ ಬಾಲಕನನ್ನು ಆಸ್ಪತ್ರೆಯಲ್ಲಿ ದಾಖಲು ಮಾಡಿಕೊಂಡು , ಸೂಕ್ತ ಚಿಕಿತ್ಸೆ ನೀಡದೇ, ಬಾಲಕನನ್ನು ಮೊದಲೇ ಕಿಮ್ಸ್ ಅಥವಾ ಮುಂಡಗೋಡ ತಾಲೂಕು ಆಸ್ಪತ್ರೆಗೆ ಕಳಿಸಿದೆ ನಿರ್ಲಕ್ಷ ತೋರಿರುವ ವೈದ್ಯನ ವಿರುದ್ಧ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ಈ ಹಿಂದೆಯೂ ಕೂಡ ಇದೆ ವೈದ್ಯರ ಕ್ಲಿನಿಕ್ ನಲ್ಲಿ ನಡೆದ ಅವಘಡಗಳಿಂದ ಚಿಕಿತ್ಸೆ ವಿಚಾರದಲ್ಲಿ ತೀವ್ರ ಆರೋಪಗಳು ಸಾರ್ವಜನಿಕರಿಂದ ವ್ಯಕ್ತವಾಗಿದೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ವೈದ್ಯಾಧಿಕಾರಿಗಳು ಸದರಿ ಪ್ರಕರಣದಲ್ಲಿ ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಆಗ್ರಹ ಮಾಡುತ್ತಿದ್ದಾರೆ. ಪ್ರಕರಣ ಜಿಲ್ಲಾಧಿಕಾರಿಗಳಾದ ಕೆ ಲಕ್ಷ್ಮೀ ಪ್ರಿಯಾ ಅವರ ಗಮನಕ್ಕೆ ಬಂದಿದ್ದು, ತನಿಖೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಯನ್ನು ಜಿಲ್ಲಾಧಿಕಾರಿಗಳು ನೀಡಿದ್ದಾರೆ.
ಆರೋಪ ಇರುವ ಖುಷಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ವೈದ್ಯನ ನಿರ್ಲಕ್ಷದಿಂದ ಸಾವನ್ನಪ್ಪಿರುವ ಬಾಲಕ ಯುವರಾಜ್ ಚವ್ಹಾಣ ನ ತಂದೆ ಕೇಸು ಚವ್ಹಾಣ ಕೂಡ ಎರಡು ವರ್ಷಗಳ ಹಿಂದೆ ಸಾವನ್ನಪ್ಪಿದ್ದು, ತಾಯಿ ಕೂಡ ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ಮೂವರು ಚಿಕ್ಕ ಚಿಕ್ಕ ಹೆಣ್ಣು ಮಕ್ಕಳಿದ್ದು ಕುಟುಂಬದ ಪರಿಸ್ಥಿತಿ ಚಿಂತಾಜನಕವಾಗಿದೆ. ಮಾನವೀಯತೆಯ ದೃಷ್ಟಿಯಿಂದ ಸರ್ಕಾರ ಹಾಗೂ ಜನಪ್ರತಿನಿಧಿಗಳು ಬಾಲಕನ ದುರಂತ ಸಾವಿಗೆ ಪರಿಹಾರ ದೊರಕಿಸಿ ಸೌಜನ್ಯ ಮೆರೆಯಬೇಕಿದೆ.
” ಬಾಲಕನ ಸಾವಿನ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳ ನೇತೃತ್ವದಲ್ಲಿ ಸಮಿತಿ ರಚಿಸಿ ತನಿಖೆ ನಡೆಸಿ, ಸೂಕ್ತ ಕ್ರಮ ಕೈಗೊಳ್ಳಲಾಗುವುದು “.
- ಶ್ರೀಮತಿ ಕೆ ಲಕ್ಷ್ಮಿಪ್ರಿಯ,
ಜಿಲ್ಲಾಧಿಕಾರಿಗಳು ಉತ್ತರಕನ್ನಡ. - ಕರುನಾಡ ಕಂದ ಸುದ್ದಿ




















